ಅರಣ್ಯ ಇಲಾಖೆ ನಿದ್ದೆಗೆಡಿಸಿದ 3 ಚಿರತೆಗಳ ಅನುಮಾನಾಸ್ಪದ ಸಾವು
ಮೈಸೂರು, ಸೆಪ್ಟೆಂಬರ್ 10: ಅನುಮಾನಾಸ್ಪದ ರೀತಿಯಲ್ಲಿ ಮೂರು ಚಿರತೆಗಳು ಸಾವನ್ನಪ್ಪಿರುವ ಘಟನೆ ನಂಜನಗೂಡು ಸಮೀಪದ ಹಲ್ಲರೆ ಗ್ರಾಮದಲ್ಲಿ ನಡೆದಿದೆ.
ಹಲ್ಲರೆ ಗ್ರಾಮದ ಚೆನ್ನನಂಜಪ್ಪ ಮತ್ತು ಮಹಮದ್ ಪಾಷ ಎಂಬುವವರ ಜಮೀನಿನಲ್ಲಿ 4 ವರ್ಷದ ತಾಯಿ ಚಿರತೆ ಸೇರಿದಂತೆ 4 ತಿಂಗಳ ಒಂದು ಗಂಡು ಹಾಗೂ ಒಂದು ಹೆಣ್ಣು ಚಿರತೆಯ ಕಳೇಬರ ಸೋಮವಾರ ಪತ್ತೆಯಾಗಿದ್ದು, ಚಿರತೆಗಳು ಮೃತಪಟ್ಟಿರುವ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ.
ವಲಯ ಅರಣ್ಯಾಧಿಕಾರಿ ಲೋಕೇಶ್ ಮೂರ್ತಿ ಮಾತನಾಡಿ, "ಮೇಲ್ನೋಟಕ್ಕೆ ಚಿರತೆಗಳು ಅಸ್ವಾಭಾವಿಕವಾಗಿ ಮೃತಪಟ್ಟಿರುವುದು ಗೋಚರಿಸುತ್ತಿದೆ. ಚಿರತೆಗಳ ಮರಣೋತ್ತರ ಪರೀಕ್ಷೆ ವೇಳೆ ಕೆಲ ಅಂಗಾಂಗಗಳನ್ನು ಸಂಗ್ರಹಿಸಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಚಿರತೆಗಳ ಸಾವಿನ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ" ಎಂದು ತಿಳಿಸಿದರು.

ಚಿರತೆಗಳು ಸಮೀಪದ ಓಂಕಾರ ಅರಣ್ಯ ವಲಯದಿಂದ ಬಂದಿರಬಹುದು, ವಿಷ ಪ್ರಾಶನದಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಚಿರತೆ ಸತ್ತ ನಾಯಿಯನ್ನು ತಿಂದು ಸಾವನ್ನಪ್ಪಿದೆ, ನಾಯಿಗಳ ಹಾವಳಿ ತಪ್ಪಿಸಲು ಅವುಗಳಿಗೆ ವಿಷಾಹಾರ ಇಡಲಾಗಿದ್ದು, ಅದನ್ನು ತಿಂದು ನಾಯಿಗಳು ಸಾವನ್ನಪ್ಪಿದ್ದವು. ಈ ನಾಯಿಗಳನ್ನು ಚಿರತೆಗಳು ತಿಂದಿದ್ದು, ಅವುಗಳೂ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.












Click it and Unblock the Notifications