ಮೂರನೇ ಆಷಾಢ ಶುಕ್ರವಾರ: ಬೆಟ್ಟದ ತಾಯಿಗೆ ವಿಶೇಷ ಪೂಜೆ
ಮೈಸೂರು, ಜುಲೈ 19: ಮೂರನೇ ಆಷಾಢ ಶುಕ್ರವಾರ ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಇಂದು ಬೆಳಗ್ಗಿನಿಂದ ಚಳಿಯನ್ನೂ ಲೆಕ್ಕಿಸದೇ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದು, ಬೆಟ್ಟದ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದಾರೆ.
ಚಾಮುಂಡೇಶ್ವರಿ ದೇವಾಲಯದಲ್ಲಿ ಇಂದು ಬೆಳಗ್ಗೆ 3ರಿಂದಲೇ ನಾನಾ ದೇವತಾ ಕಾರ್ಯಗಳು ಪ್ರಾರಂಭಗೊಂಡಿವೆ. ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಬೆಳಗ್ಗೆ 3ಕ್ಕೆ ರುದ್ರಾಭಿಷೇಕ, 4.30ಕ್ಕೆ ಸಹಸ್ರನಾಮ, 5.15ಕ್ಕೆ ಮಹಾಮಂಗಳರಾತಿ ನೆರವೇರಿತು. ನಂತರ 5.30ಕ್ಕೆ ಭಕ್ತಾದಿಗಳಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಸರತಿಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ದೇವಾಲಯ ಮುಂಭಾಗ ಬೆಳಗ್ಗೆಯಿಂದಲೇ ವಿವಿಧ ಭಜನಾ ತಂಡಗಳಿಂದ ಕಾರ್ಯಕ್ರಮ ನಡೆಯುತ್ತಿದೆ.

ದೇವಾಲಯ ಆವರಣದಲ್ಲಿ ಬೆಳಗ್ಗೆಯಿಂದಲೇ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಪ್ರಾರಂಭವಾಯಿತು. ಭಕ್ತರ ಅನುಕೂಲಕ್ಕಾಗಿ ಇಂದು ರಾತ್ರಿ 10ರವರೆಗೂ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮೂರನೇ ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟದ ಪ್ರಮುಖ ಆಕರ್ಷಣೆ ನಂದಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ಬಣ್ಣಬಣ್ಣದ ಹೂವುಗಳಿಂದ ನಂದಿಯನ್ನು ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ರೇವಣ್ಣ ಇಲ್ಲಿಗೆ ಭೇಟಿ ಕೊಟ್ಟು ಚಾಮುಂಡಿ ದೇವಿಯ ದರ್ಶನ ಪಡೆದರು.













Click it and Unblock the Notifications