ಯಾವ ತೊಂದರೆಯೂ ಆಗಿಲ್ಲ, ವೈಭವೀಕರಣ ಬೇಡ ಎಂದ ಸುತ್ತೂರು ಶ್ರೀಗಳು
ಮೈಸೂರು, ಫೆಬ್ರವರಿ 5: ಸುತ್ತೂರು ಜಾತ್ರೆಯಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಹಾರುವ ಮೊದಲೇ ನೈಟ್ರೋಜನ್ ಬಲೂನ್ ಗಳು ಸ್ಫೋಟಗೊಂಡಿದ್ದವು. ಅಪಾಯದಿಂದ ಸುತ್ತೂರು ಶ್ರೀಗಳು ಪಾರಾಗಿದ್ದು, ಎಂಎಲ್ ಸಿ ಮರಿತಿಬ್ಬೆಗೌಡ, ಹೊಸಕೋಟೆ ದೇವಣ್ಣ ಮುಂತಾದವರು ಸೇರಿದಂತೆ ಒಟ್ಟು 3 - 4 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಘಟನೆಯ ವೇಳೆ ಬಿಜೆಪಿ ಮುಖಂಡ ಕಲ್ಮಳ್ಳಿ ಶಿವಕುಮಾರ್ ಮುಖದ ಭಾಗಕ್ಕೆ ಗಾಯಗಳಾಗಿವೆ. ಶಿವಕುಮಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸುತ್ತೂರು ಶ್ರೀಗಳಿಗೆ ದೂರವಾಣಿ ಕರೆ ಮಾಡಿ ಸಿಎಂ ಕುಮಾರಸ್ವಾಮಿ ಆರೋಗ್ಯ ಹಾಗೂ ಘಟನೆಯ ಕುರಿತು ವಿಚಾರಿಸಿದರು.

ಘಟನೆಯ ಕುರಿತಾಗಿ ಮಾಹಿತಿ ನೀಡಿದ ಸುತ್ತೂರು ದೇಶೀಕೇಂದ್ರ ಶ್ರೀಗಳು ನಾನು ಕ್ಷೇಮವಾಗಿದ್ದೇನೆ. ಆಕಸ್ಮಿಕವಾಗಿ ಅವಘಡ ನಡೆದಿದೆ. ನನ್ನ ಅಕ್ಕಪಕ್ಕದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಕುಸ್ತಿ ಪಂದ್ಯ ನಡೆಯುತ್ತಿದೆ. ಇದನ್ನು ವೈಭವೀಕರಿಸುವುದು ಬೇಡ. ಯಾವ ತೊಂದರೆಯೂ ಆಗಿಲ್ಲ. ಗಾಯಾಳುಗಳಿಗೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇದೊಂದು ಅಚಾತುರ್ಯ ಅಷ್ಟೇ ಎಂದರು.











Click it and Unblock the Notifications