ಮೈಸೂರು: ದೇವಸ್ಥಾನದ ಹುಂಡಿ ಜತೆಗೆ ಸಿ.ಸಿ ಕ್ಯಾಮೆರಾ ದೋಚಿದ್ರು
ಮೈಸೂರು, ಜುಲೈ 27: ಹೆಚ್.ಡಿ.ಕೋಟೆ ತಾಲೂಕಿನ ಪ್ರಸಿದ್ಧ ದೇವತೆ ಶ್ರೀ ಚಿಕ್ಕದೇವಮ್ಮ ಬೆಟ್ಟದ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನವಾಗಿದೆ.
ಹಾರೆಯಿಂದ ಬಾಗಿಲು ಮೀಟಿ ದೇವಾಲಯದ ಹುಂಡಿ ಜತೆಗೆ ಸಿ.ಸಿ ಕ್ಯಾಮೆರಾ ಕದ್ದೊಯ್ದಿದ್ದಾರೆ. ಈ ಬಗ್ಗೆ ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
7 ಲಕ್ಷ ರೂ ದೋಚಿದ ಚೋರರು: ಗಮನ ಬೇರೆಡೆ ಸೆಳೆದು ಕಾರಿನಲ್ಲಿಟ್ಟಿದ್ದ ಏಳು ಲಕ್ಷರೂ ಹಣವನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ನಂಜನಗೂಡಿನ ಕೆನರಾಬ್ಯಾಂಕ್ ಕಚೇರಿಯಲ್ಲಿ ಇಂದು ನಡೆದಿದೆ.
ಶ್ರೀಗಣೇಶ್ ರೈಸ್ ಮಿಲ್ ಮಾಲಕರು ಮನೆಯಿಂದ ಹೊರಟು ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ಕೆನರಾಬ್ಯಾಂಕಿನಲ್ಲಿ ಏಳು ಲಕ್ಷ ಹಣವನ್ನು ಪಡೆದು ಕಾರಿನ ಹಿಂಬದಿಯ ಸೀಟಿನಲ್ಲಿಟ್ಟು, ಕಾರನ್ನು ಸ್ಟಾರ್ಟ್ ಮಾಡುವ ವೇಳೆ ಸ್ಥಳಕ್ಕೆ ಆಗಮಿಸಿದ ದುಷ್ಕರ್ಮಿಗಳು ಕಾರಿನ ಮುಂಭಾಗಕ್ಕೆ ಬಂದು ನಿಮ್ಮ ಕಾರಿನ ಮುಂಭಾಗ ಏನೋ ಬಿದ್ದಿದೆ ಎಂದು ಅವರ ಗಮನ ಬೇರೆಡೆ ಸೆಳೆದಿದ್ದಾರೆ.
ಇದೇ ವೇಳೆ ಹಿಂಬದಿಯಲ್ಲಿದ್ದ ಹಣದ ಬ್ಯಾಗ್ ಅಪಹರಿಸಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಮತ್ತು ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮರಾದಲ್ಲಿನ ದೃಶ್ಯಗಳನ್ನು ವೀಕ್ಷಿಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ