ಮೈಸೂರಿನಲ್ಲಿ ವಿವಿಧ ಸಂಘಟನೆಗಳಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಮೈಸೂರು, ಫೆಬ್ರವರಿ 15: ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ ಯೋಧರ ಮೇಲೆ ಪಾಕಿಸ್ತಾನದ ಪಾತಕಿಗಳ ದಾಳಿ ಖಂಡಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳು ಶ್ರದ್ಧಾಂಜಲಿ ಅರ್ಪಿಸಿ, ಪಾಕ್ ವಿರುದ್ಧ ಘೋಷಣೆ ಕೂಗಿದರು.
ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿ ಉಗ್ರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಾಕಿಸ್ತಾನದ ದಾಳಿ ಹೀನ ಕೃತ್ಯ. ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಮೈಸೂರು ನಾಯಕರ ಪಡೆಯಿಂದ ಶ್ರದ್ಧಾಂಜಲಿ
ವೀರ ಯೋಧ ಗುರು ಅವರಿಗೆ ಮೈಸೂರು ನಾಯಕರ ಪಡೆ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹುಣಸೂರು ರಸ್ತೆಯ ಪೆಟ್ರೋಲ್ ಬಂಕ್ ಬಳಿ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕನ್ನಡ ವೇದಿಕೆ ಕಾರ್ಯಕರ್ತರಿಂದ ನಮನ
ಪ್ರಾಣತೆತ್ತ ವೀರಯೋಧರಿಗೆ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ನಮನ ಸಲ್ಲಿಸಿದರು. ಮೈಸೂರಿನ ಅಗ್ರಹಾರವೃತ್ತದಲ್ಲಿ ವೀರಯೋಧರ ಭಾವಚಿತ್ರವಿರಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಹೇಡಿ ಪಾಕಿಸ್ತಾನದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಹಾಗೆಯೇ ಮೈಸೂರಿನ ನ್ಯಾಯಾಲಯದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಕಪ್ಪುಬಟ್ಟೆ ಧರಿಸಿ ಉಗ್ರರ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವೀರಯೋಧರಿಗೆ ಮೌನಾಚರಣೆ ಆಚರಿಸುವ ಮೂಲಕ ಅಮರ್ರಹೇ ಅಮರ್ರಹೇ ಎಂದು ಗೌರವ ಸಮರ್ಪಿಸಿದರು. ಪ್ರತಿಭಟನೆಯಲ್ಲಿ 60 ಕ್ಕೂ ಹೆಚ್ಚುಮಂದಿ ಭಾಗವಹಿಸಿದ್ದರು.












Click it and Unblock the Notifications