ಮಾವುತರು, ಕಾವಾಡಿಗಳ ಮಕ್ಕಳಿಗಾಗಿ ಆರಂಭವಾದ ಟೆಂಟ್ ಶಾಲೆಯಲ್ಲಿ ಏನೇನಿದೆ?
ಮೈಸೂರು, ಸೆಪ್ಟೆಂಬರ್.20 : ದಸರಾ ಸಂದರ್ಭದಲ್ಲಿ ನಗರಕ್ಕಾಗಮಿಸುವ ಮಾವುತರು ಮತ್ತು ಕಾವಾಡಿಗರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ ಅರಮನೆ ಆವರಣದಲ್ಲಿ ಟೆಂಟ್ ಶಾಲೆ ಆರಂಭಿಸಲಾಗಿದೆ. 20 ಮಕ್ಕಳು ಈ ಶಾಲೆಗೆ ಬಂದು ದಿನನಿತ್ಯ ಪಾಠ ಕೇಳುತ್ತಾರೆ.
ದಸರಾ ಹಿನ್ನೆಲೆಯಲ್ಲಿ ಇನ್ನು 20 ದಿನಗಳವರೆಗೆ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಲಿರುವ ಮಕ್ಕಳು ಟೆಂಟ್ ಶಾಲೆಯಲ್ಲಿ ಶಿಕ್ಷಣ ಪಡೆಯಲಿದ್ದಾರೆ. 8ನೇ ತರಗತಿಯ ಹೆಚ್ಚು ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಇವರಿಗೆ ಶಾಲೆಯಲ್ಲಿ ಬೋಧಿಸುವಂತೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ತರಗತಿಗಳು ನಡೆಯಲಿವೆ. ಬೆಳಗ್ಗೆ 11ಕ್ಕೆ ಉಪಾಹಾರ ಹಾಗೂ ಮಧ್ಯಾಹ್ನ ಶಾಲೆ ಬಿಡುವ ಸಮಯದಲ್ಲಿ ಬಿಸಿಯೂಟ ನೀಡಲಾಗುವುದು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ.

ಕಳೆದ ಹಲವು ವರ್ಷದಿಂದ ಟೆಂಟ್ ಶಾಲೆಯಲ್ಲಿ ಶಿಕ್ಷಣ ನೀಡುತ್ತಿರುವ ಶಿಕ್ಷಕಿ ನೂರ್ ಫಾತಿಮಾ ಈ ಬಾರಿಯೂ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು, ಇವರೊಂದಿಗೆ ಸಂಪನ್ಮೂಲ ವ್ಯಕ್ತಿಗಳು ಶಿಕ್ಷಣ ನೀಡಲಿದ್ದಾರೆ.
ಟೆಂಟ್ ಗ್ರಂಥಾಲಯ
ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ನಗರ ಕೇಂದ್ರ ಗ್ರಂಥಾಲಯದಿಂದ ಮಾವುತರ ಕುಟುಂಬ ಹಾಗೂ ಅವರ ಮಕ್ಕಳಿಗೆ ತಾತ್ಕಾಲಿಕವಾದ ಟೆಂಟ್ ಗ್ರಂಥಾಲಯ ತೆರೆಯಲಾಗಿದೆ.
ಮಕ್ಕಳಿಗೆ ಉತ್ತಮ ಪುಸ್ತಕ ಪರಿಚಯಿಸುವ ಜತೆಗೆ ವಿಜ್ಞಾನ, ಗಣಿತ, ಮಾಹಿತಿ ತಂತ್ರಜ್ಞಾನ ಹೀಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಬಲ್ಲ ನೂರಾರು ಪುಸ್ತಕಗಳು, 5 ದಿನಪತ್ರಿಕೆ, 10 ನಿಯತಕಾಲಿಕೆ ಒದಗಿಸಲಾಗಿದೆ.

ಪ್ರತಿದಿನ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30ರವರೆಗೆ ಗ್ರಂಥಾಲಯದಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳಿಗಾಗಿ ಕಥೆ ಹೇಳುವುದು, ದಿನಪತ್ರಿಕೆ ಓದುವುದು, ವನ್ಯ ಜೀವಿಗಳ ಪುಸ್ತಕ, ಪುಸ್ತಕ ಓದುವ ಕೌಶಲ್ಯ, ಜೇಡಿ ಮಣ್ಣಿನ ಕಲೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು.
ಅಂತ್ಯದಲ್ಲಿ ರಸಪ್ರಶ್ನೆಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸುವ ಬಗ್ಗೆ ಕಾರ್ಯಕ್ರಮವನ್ನೂ ರೂಪಿಸಲಾಗಿದೆ.











Click it and Unblock the Notifications