ಹನ್ನೊಂದು ಬಲಿಗೆ ಜಮೀನು ವಿವಾದವೇ ಕಾರಣವಾಯಿತೆ?
ಮೈಸೂರು, ಡಿಸೆಂಬರ್ 15 : ವಿಷಾಹಾರ ಸೇವನೆ ಸಂಬಂಧಿಸಿದಂತೆ ಸುಳ್ವಾಡಿ ಗ್ರಾಮದ ಚಿನ್ನಪ್ಪಿ ಮತ್ತು ಮಾದೇಶ ಎಂಬವರನ್ನು ವಶಕ್ಕೆ ಪಡೆದ ರಾಮಾಪುರ ಪೊಲೀಸರು ಇಬ್ಬರನ್ನೂ ವಿಚಾರಣೆಗೊಳಪಡಿಸಿದ್ದಾರೆ.
ಚಿನ್ನಪ್ಪಿ ಎಂಬಾತ ಗ್ರಾಪಂ ಸದಸ್ಯ ಮತ್ತು ಕಿಚ್ಚುಗುತ್ತಿ ಮಾರಮ್ಮನ ದೇವಾಲಯದ ಮುಖ್ಯಸ್ಥನಾಗಿದ್ದಾನೆ ಎನ್ನಲಾಗಿದೆ. ಮಾದೇಶ ಇದೇ ದೇವಾಲಯದ ಮ್ಯಾನೇಜರ್ ಆಗಿದ್ದಾನೆ.
ದೇಗುಲದ ಆಡಳಿತ ಮಂಡಳಿಯಲ್ಲಿ ಎರಡು ಗುಂಪುಗಳಿದ್ದು, ಇವರ ನಡುವೆ ಮನಸ್ತಾಪಗಳಿವೆ ಎನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ದೇವಾಲಯದ ಗೋಪುರ ನಿರ್ಮಾಣ ಸ್ಥಳದ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಚಿನ್ನಪ್ಪಿ ಮತ್ತು ಮಾದೇಶ ಅವರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ವಿಷಾಹಾರ ಪ್ರಕರಣಕ್ಕೂ ಈ ಗಲಾಟೆಗೆ ಯಾವುದಾದರೂ ಸಂಬಂಧವಿದೆಯೇ ಎಂಬ ಅನುಮಾನದ ಮೇರೆಗೆ ಚಿನ್ನಪ್ಪ ಮತ್ತು ಮಾದೇಶ ಎಂಬ ಈ ಇಬ್ಬರನ್ನೂ ರಾಮಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ದೇಗುಲವಿರುವ ಜಮೀನಿನ ವಿಚಾರವಾಗಿ ಎರಡು ವರ್ಷಗಳಿಂದ ವಿವಾದವಿತ್ತು. ಎರಡು ಬಣಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಈಗ ಗೋಪುರ ನಿರ್ಮಾಣದ ಸಂದರ್ಭದಲ್ಲಿ ಒಂದು ಗುಂಪಿನವರು ತಮ್ಮ ಹಗೆಯನ್ನು ವಿಷಪ್ರಾಶನದ ಮೂಲಕ ತೀರಿಸಿಕೊಂಡಿರುವ ಶಂಕೆ ಇದೆ.
ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಸಿದ್ದರಾಮಯ್ಯ :
ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಶನಿವಾರ ಬೆಳಿಗ್ಗೆ 10.30ಕ್ಕೆ ಭೇಟಿ ಮಾಡಲಿದ್ದಾರೆ.
ಈ ಇಬ್ಬರೂ ನಾಯಕರು, ಚಿಕಿತ್ಸೆ ಪಡೆಯುತ್ತಿರುವರ ಆರೋಗ್ಯ ವಿಚಾರಿಸಿ ಸಾಂತ್ವಾನ ಹೇಳಲಿದ್ದಾರೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್ ತಿಳಿಸಿದ್ದಾರೆ.
ಈ ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಈ ದೇವಸ್ಥಾನದ ಆವರಣದಲ್ಲಿ ಪ್ರಸಾದ ವಿನಿಯೋಗ ಮಾಡಲು ಯಾರು ಅನುಮತಿ ನೀಡಿದರು ಎಂಬ ಬಗ್ಗೆ ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications