ಅಂಗವಿಕಲ ಮಗಳಿಗೆ ವಿಷವಿಟ್ಟು ಕೊಂದನಾ ದೇವಸ್ಥಾನದ ಅಡುಗೆ ಭಟ್ಟ?
ಮೈಸೂರು, ಡಿಸೆಂಬರ್ 19 : ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮನ ವಿಷ ಪ್ರಸಾದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಅಡುಗೆಭಟ್ಟ ಪುಟ್ಟಸ್ವಾಮಿಯನ್ನು ನಾಳೆಯೊಳಗಾಗಿ ಪೊಲೀಸ್ ಕಸ್ಟಡಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ತನ್ನ ಮೇಲೆ ಅನುಮಾನ ಬರಬಾರದೆಂಬ ಕಾರಣಕ್ಕೆ ಅಡುಗೆಗೆ ಸ್ವಾಮೀಜಿಯ ಅಣತಿಯಂತೆ ತನ್ನ ಮಗಳಿಗೂ ವಿಷ ಹಾಕಿ ಪುಟ್ಟಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಅನುಮಾನವೊಂದು ಕಾಡಿದೆ.
ಆದರೆ ಈ ಕುರಿತು ಮಾತನಾಡಿದ ಪುಟ್ಟಸ್ವಾಮಿ, ಮಾರಮ್ಮನ ಮೇಲಾಣೆ...ಮಾದಪ್ಪನ ಮೇಲಾಣೆ ಅಡುಗೆಯಲ್ಲಿ ನಾನು ವಿಷ ಹಾಕಿಲ್ಲ. ನಾನು 2 ಸಾವಿರ ಸಂಬಳಕ್ಕೆ ಕೆಲಸಕ್ಕೆ ಹೋದವನು. ನಾನ್ಯಾಕೆ ಇಂತಹ ಕೆಲಸ ಮಾಡಲಿ ನನಗೆ ಅಂಬಿಕಾ ಆಗಲಿ, ಅಂಬಿಕಾ ಪತಿಯಾಗಲಿ ಯಾರೂ ಅಷ್ಟು ಪರಿಚಯವಿಲ್ಲ. ಸಾಲೂರು ಬುದ್ದಿಯನ್ನು ಇತ್ತೀಚೆಗೆ ನೋಡೆ ಇಲ್ಲ.
ನನ್ನ ಮೇಲೆ ಅನುಮಾನ ಪಡಬೇಡಿ. ಯಾರೇ ತಪ್ಪು ಮಾಡಿದ್ದರು ಶಿಕ್ಷೆಯಾಗಲಿ. ನಾನೇ ತಪ್ಪು ಮಾಡಿದ್ದೇನೆ ಎಂದರು ಶಿಕ್ಷೆ ಕೊಡಿ. ಆದರೆ ನಾನಂತೂ ವಿಷ ಹಾಕಿಲ್ಲ ಎಂದು ಹೇಳಿದ್ದಾರೆ. ನನ್ನ ಮಗಳು ಅಂಗವಿಕಲೆ. ನನ್ನ ಒಬ್ಬಳು ಮಗಳಿಗೆ ಕಾಲು ಬರುತ್ತಿರಲಿಲ್ಲ. ನನಗೆ ಮೂವರು ಮಕ್ಕಳಿದ್ದಾರೆ ಎನ್ನುತ್ತಿದ್ದಾನೆ. ಪುಟಸ್ವಾಮಿ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಊರಿನವರು ಹೇಳುವ ಪ್ರಕಾರ ಅಂಗವಿಕಲೆ ಮಗಳು ಭಾರವಾಗಿದೆ ಎಂದಿದ್ದರು.

ಹೀಗಾಗಿ 12 ವರ್ಷದ ಮಗಳು ಅನಿತಾ ಈ ಪ್ರಸಾದ ತಿಂದು ಮೃತಪಟ್ಟಿದ್ದಳು. ಆದರೆ ವಿಷ ಹಾಕಿದ ವಿಷಯ ತಿಳಿಯಬಾರದು ಎಂದು ಪುಟ್ಟಸ್ವಾಮಿ ತಾನೂ ಪ್ರಸಾದ ತಿಂದಿದ್ದಾನೆ. ಬಳಿಕ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾನೆ ಅನ್ನೋ ಅನುಮಾನ ಮೂಡಿದೆ. ಇತ್ತ ಇಂದೇ ಪೊಲೀಸರು ಪುಟ್ಟಸ್ವಾಮಿಯನ್ನು ವಶಕ್ಕೆ ಪಡೆಯಬೇಕಿತ್ತು. ಆದರೆ ಅಡುಗೆ ಭಟ್ಟ ಪುಟ್ಟಸ್ವಾಮಿಯನ್ನ ಇಂದು ಡಿಸ್ಚಾರ್ಜ್ ಮಾಡುತ್ತಿಲ್ಲ ಎಂದು ಕೆ ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.
ಪುಟ್ಟಸ್ವಾಮಿ ಆರೋಗ್ಯ ಸಂಪೂರ್ಣ ಚೇತರಿಕೆಯಾಗಿದೆ. ಅವರಿಗೆ ಕೌನ್ಸಿಲಿಂಗ್ ಮಾಡುವುದು ಬಾಕಿ ಇದೆ. ಪುಟ್ಟಸ್ವಾಮಿಗೆ ಮಗಳ ಸಾವಿನ ವಿಚಾರ ಗೊತ್ತಿರಬಹುದು. ಸದ್ಯ ಅವರಿಗೆ ಅಟ್ರೊಪಿನ್ ಇಂಜೆಕ್ಷನ್ ನಿಲ್ಲಿಸಿ 24 ಗಂಟೆ ಆಗಿದೆ. ಮಾನಸಿಕ ತಜ್ಞರು ಆತನ ಮಾನಸಿಕ ಸ್ಥಿತಿಯನ್ನು ದೃಢಪಡಿಸಬೇಕು ಎಂದಿದ್ದಾರೆ.












Click it and Unblock the Notifications