ತನ್ವೀರ್ ಸೇಠ್ ಧ್ವನಿ ಕೇಳಿ ಕಣ್ಣೀರಿಟ್ಟ ಬೆಂಬಲಿಗರು
ಮೈಸೂರು, ಜನವರಿ 9: ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ಶಾಸಕ ತನ್ವೀರ್ ಸೇಠ್ ಅವರ ಕುತ್ತಿಗೆಯ ಮೇಲೆ ಏಟು ಬಿದ್ದಿದ್ದು ಧ್ವನಿ ಪೆಟ್ಟಿಗೆಗೆ ಹಾನಿಯಾಗಿದೆ.
ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿದೇಶದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶಾಸಕ ತನ್ವೀರ್ ಸೇಠ್ ಇಂದು ಮೈಸೂರು ಕೇಂದ್ರ ಕಾರಾಗೃಹಕ್ಕೆ ತನ್ನ ಮೇಲೆ ಹಲ್ಲೆ ಮಾಡಿದ ಪ್ರಮುಖ ಆರೋಪಿಯನ್ನು ಗುರುತಿಸಲು ಬಂದಿದ್ದರು.
ಜೈಲಿನಿಂದ ಹೊರಬಂದ ಶಾಸಕರಿಗೆ ಬೆಂಬಲಿಗರು ಶೇರ್ ಹೈ ಶೇರ್ ಹೈ ತನ್ವೀರ್ ಸೇಠ್ ಶೇರ್ ಹೈ ಎಂದು ಜೈಕಾರ ಹಾಕಿದರು. ಈ ವೇಳೆ ಮಾತನಾಡಿದ ಅವರು, "ಹಿರಿಯರ ಪ್ರೀತಿ, ವೈದ್ಯರ ಪ್ರಯತ್ನ, ಹಿತೈಷಿಗಳು, ಜನರ ಆಶೀರ್ವಾದ ನನಗೆ ಪುನರ್ಜನ್ಮ ನೀಡಿದೆ. ಗಾಯಗಳೆಲ್ಲ ಕಡಿಮೆ ಆಗುತ್ತಿವೆ. ಧ್ವನಿ ಸರಿಯಾಗಲು ಇನ್ನು ಎರಡು-ಮೂರು ತಿಂಗಳು ಬೇಕು. ಚಿಕಿತ್ಸೆ ಪಡೆಯುತ್ತಿದ್ದೇನೆ. ಜನಪ್ರತಿನಿಧಿಗಳಿಗೆ ಭಯದ ವಾತಾವರಣ ತರುವ ಕೆಲಸವಾಗುತ್ತಿದೆ. ಜನ ನನ್ನನ್ನು ಸಾಕಿದ್ದಾರೆ, ಬೆಳೆಸಿದ್ದಾರೆ. ಜನರ ಆಶೀರ್ವಾದ, ಪ್ರೀತಿ ಎಲ್ಲಿಯವರೆಗಿರುತ್ತದೋ ಅಲ್ಲಿಯವರೆಗೆ ಅವರ ಸೇವೆಗೆ ಮುಂದಾಗುತ್ತೇನೆ" ಎಂದು ಕೈ ಮುಗಿದರು.

ಆದರೆ ಶಾಸಕ ತನ್ವೀರ್ ಸೇಠ್ ಅವರ ಧ್ವನಿ ಸಂಪೂರ್ಣ ಬದಲಾವಣೆ ಕಂಡುಬಂದಿತ್ತು. ಗಟ್ಟಿ ಧ್ವನಿಯಲ್ಲಿ ಅಬ್ಬರಿಸುತ್ತಿದ್ದ ಹಿರಿಯ ರಾಜಕಾರಣಿ ಮಾತನಾಡುವುದೇ ಕೇಳಿಸದಷ್ಟು ಮೆಲು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಕೊಲೆ ಯತ್ನದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಶಾಸಕರು ಮಾತನಾಡಿದ್ದು, ತನ್ವೀರ್ ಸೇಠ್ ಧ್ವನಿ ಕೇಳಿಸಿಕೊಂಡ ಬೆಂಬಲಿಗರಲ್ಲಿ ಬೇಸರ ಮೂಡಿತು. ಧ್ವನಿ ಕೇಳಿ ಮರುಗಿದ ಬೆಂಬಲಿಗರು, ಮೈಸೂರಿನ ರಾಜನಿಗೆ ಜೈ ಎಂದು ಉರ್ದು ಭಾಷೆಯಲ್ಲಿ ಘೋಷಣೆ ಕೂಗಿದರು.
ಬದಲಾದ ತನ್ವೀರ್ ಸೇಠ್ ಧ್ವನಿ ಕೇಳಿ ಕೆಲವು ಬೆಂಬಲಿಗರು ಕಣೀರಿಟ್ಟರು. ಮೈಸೂರು ಕಾರಾಗೃಹದ ಬಳಿ ಶಾಸಕ ತನ್ವೀರ್ ಸೇಠ್ ಮುಂದೆಯೇ ಅಭಿಮಾನಿಗಳು ಕಣ್ಣೀರು ಸುರಿಸಿದರು.












Click it and Unblock the Notifications