ಜೆಡಿಎಸ್ ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇದ್ದಿದ್ದು ನಿಜ: ಎಚ್ ಡಿ ಕೆ
ಜೆಡಿಎಸ್ ನಲ್ಲಿ ಸೂಟ್ ಕೇಸ್ ಸಂಸ್ಕೃತಿಯಿತ್ತು ಎಂದು ಒಪ್ಪಿಕೊಂಡ ಎಚ್.ಡಿ. ಕುಮಾರ ಸ್ವಾಮಿ. ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಚ್ ಡಿ ಕೆ.
ಮೈಸೂರು, ಜುಲೈ 10: ''ಪಕ್ಷದಲ್ಲಿ ಸೂಟ್ ಕೇಸ್ ಪಡೆಯುತ್ತಿದ್ದದ್ದು ನಿಜ. ಅವರು ಮುಂದಿನ ಸಾಲಿನಲ್ಲಿ ಕೂರುತ್ತಾ ಇದ್ದದ್ದೂ ನಿಜ'' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದರು.
ಸೋಮವಾರ ಸಂಜೆ, ದಟ್ಟಗಳ್ಳಿಯ ಸಾರಾ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಮಾಜಿ ಸಂಸದರಾದ ರಂಗಪ್ಪ ಹಾಗೂ ಗೋವಿಂದಯ್ಯ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೀಗೆ ಹೇಳಿದರು.

ಆದರೆ, ಅದರ ಬೆನ್ನಲ್ಲೇ ಸಮಜಾಯಿಷಿಯನ್ನೂ ನೀಡಿದ ಅವರು, ಹಿಂದೆ ಸೂಟ್ ಕೇಸ್ ಸಂಸ್ಕೃತಿ ಇತ್ತಾದರೂ ಈಗ ಸೂಟ್ ಕೇಸ್ ಹಿಡಿದಾಡಿದವರೆಲ್ಲಾ ಪಕ್ಷದಿಂದ ಆಚೆ ಸರಿದಿದ್ದಾರೆಂದು ಹೇಳುವ ಮೂಲಕ ತಮ್ಮ ಮಾತು ವಿವಾದವಾಗದಂತೆ ಎಚ್ಚರಿಕೆ ವಹಿಸಿದರು.
ಇತ್ತೀಚೆಗಷ್ಟೇ, ಜೆಡಿಎಸ್ ನ ಮತ್ತೊಬ್ಬ ನಾಯಕ ಹಾಗೂ ಎಚ್. ಡಿ. ಕುಮಾರ ಸ್ವಾಮಿ ಅವರ ಸಹೋದರ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು, ಜೆಡಿಎಸ್ ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇದ್ದು, ಸೂಟ್ ಕೇಸ್ ತಂದವರಿಗೆ ಮುಂದೆ ಸ್ಥಾನ ಸಿಗುತ್ತದೆ. ನಿಷ್ಠಾವಂತ ಕಾರ್ಯಕರ್ತರಿಗೆ ಹಿಂದೆ ಸೀಟು ಸಿಗಲಿದೆ ಎಂದು ಹೇಳಿದ್ದರು.
ಅದಾದ ನಂತರ, ರೇವಣ್ಣ ಆಗಲೀ ಪಕ್ಷದ ಧುರೀಣ ದೇವೇಗೌಡರಾಗಲೀ ಪ್ರಜ್ವಲ್ ಮಾತನ್ನು ಒಪ್ಪಿಕೊಂಡಿರಲಿಲ್ಲ. ಅವರ ಮಾತನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು.
ಆದರೆ, ಇದೀಗ ಕುಮಾರಸ್ವಾಮಿ ಅವರ ಬಾಯಿಂದ ಈ ಹೇಳಿಕೆ ಬಂದಿರುವುದು ಜೆಡಿಎಸ್ ಪಕ್ಷವು ನಡೆದ ಬಂದ ದಾರಿಯ ಬಗ್ಗೆ ನಾಗರಿಕರು ಮತ್ತೆ ಆಲೋಚಿಸುವಂತೆ ಮಾಡಿದೆ. ಕುಮಾರಸ್ವಾಮಿಯವರು ಸಮಜಾಯಿಷಿ ನೀಡಿರಬಹುದು. ಆದರೆ, ಅವರು ಹಿಂದೆ ಆ ಸಂಸ್ಕೃತಿ ಇತ್ತು ಎಂದು ಹೇಳಿರುವುದು ವಿರೋಧ ಪಕ್ಷಗಳಿಗೆ ಆಡಿಕೊಳ್ಳಲು ಅವಕಾಶ ನೀಡಿದಂತಾಗಿದೆ.
ಮಾಜಿ ಸಂಸದರ ಈ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಮಾಜಿ ಸಚಿವ ವಿಶ್ವನಾಥ್ ಆಗಮಿಸಿದ್ದರು. ಜೆಡಿಎಸ್ ಸೇರ್ಪಡೆ ನಂತರ, ವಿಶ್ವನಾಥ್ ಅವರು ಪಾಲ್ಗೊಳ್ಳುತ್ತಿರುವ ಪಕ್ಷದ ಮೊದಲ ಕಾರ್ಯಕ್ರಮವೂ ಹೌದು.
ಪ್ರೊ.ಕೆ.ಎಸ್.ರಂಗಪ್ಪ ಜೆಡಿಎಸ್ ಸೇರ್ಪಡೆ: ಮೈಸೂರಿನ ಸಾ.ರಾ.ಸಭಾಂಗಣದಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರನ್ನು ಅಧಿಕೃತವಾಗಿ ಜೆಡಿಎಸ್ ಗೆ ಬರಮಾಡಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ನಗರ ಜೆಡಿಎಸ್ ಅಧ್ಯಕ್ಷ ಹರೀಶ್ ಗೌಡ ಗೈರಾಗಿದ್ದು ಗಮನ ಸೆಳೆಯಿತು. ಈ ಬಗ್ಗೆ ಕೇಳಿದಾಗ ಉತ್ತರಿಸಿದ ಎಚ್.ಡಿ. ಕುಮಾರಸ್ವಾಮಿ, ಇದೊಂದು ಕಾರ್ಯಕರ್ತರ ಸಭೆ. ಯಾರನ್ನೂ ಆಹ್ವಾನ ಮಾಡುವ ಅಗತ್ಯವಿಲ್ಲ. ಹರೀಶ್ ಗೈರಾಗಿರುವ ಕಾರಣ ನನಗೆ ಗೊತ್ತಿಲ್ಲ. ಈ ಕುರಿತು ವಿಚಾರಣೆ ನಡೆಸುತ್ತೇನೆ ಎಂದರು.












Click it and Unblock the Notifications