ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಮೆರಗು ತಂದ ಕಿಚ್ಚ ಸುದೀಪ್
Recommended Video

ಮೈಸೂರು, ಆಗಸ್ಟ್ 13: ಒಂದೆಡೆ ಬಣ್ಣ ಬಣ್ಣದ ಬೆಳಕಿನ ನಡುವೆ ಹೊಸ ಹೊಸ ಸೊಬಗಿನಿಂದ ಹರಿಯುವ ಜಲಪಾತ, ಮತ್ತೊಂದೆಡೆ ಜನ ಸಾಗರ. ಇವುಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ.
ಇಂಪಾದ ಸಂಗೀತ, ತಂಪೆರೆಯುತ್ತಿರುವ ಮಳೆ. ಮಳೆಯ ನಡುವೆಯೂ ಕೊಡೆ ಹಿಡಿದು ಸಂಭ್ರಮವನ್ನು ಕಣ್ತುಂಬಿಕೊಂಡ ಪ್ರವಾಸಿಗರು, ಸುತ್ತಮುತ್ತಲಿನ ಗ್ರಾಮಸ್ಥರು. ಇದು ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತೋತ್ಸವ ಸಮಾರೋಪ ಸಮಾರಂಭದಲ್ಲಿ ಕಂಡು ಬಂದ ದೃಶ್ಯಗಳು.
ಜನಮನ ಸೂರೆಗೊಂಡಿದ್ದ ಚುಂಚನಕಟ್ಟೆಯ ಜಲಪಾತೋತ್ಸವ ಕಾರ್ಯಕ್ರಮ ಭಾನುವಾರ ಸಂಜೆ ಮಳೆಯ ಸಿಂಚನದ ನಡುವೆಯೂ ವರ್ಣರಂಜಿತವಾಗಿ ಸಮಾರೋಪಗೊಂಡಿತು. ಸಮಾರೋಪ ಸಮಾರಂಭಕ್ಕೆ ಚಲನಚಿತ್ರನಟರು ಬಂದು ಮೆರುಗು ನೀಡಿದರು.

ನವವಧುವಿನಂತೆ ಸಿಂಗಾರಗೊಂಡಿದ್ದ ಇಲ್ಲಿನ ಶ್ರೀರಾಮದೇವಾಲಯ, ಬಸವನ ವೃತ್ತದಲ್ಲಿನ ಬಣ್ಣ ಬಣ್ಣಗಳ ವಿದ್ಯುತ್ ಬೆಳಕಿನ ಚಿತ್ತಾರ ಉತ್ಸವಕ್ಕೆ ವಿಶೇಷ ಕಳೆ ತಂದಿತ್ತು.
ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಿತ್ರ ನಟ ಕಿಚ್ಚ ಸುದೀಪ್, ಸಚಿವ ಸಾ.ರಾ.ಮಹೇಶ್ ಅವರ ಜನಪರ ಕಾರ್ಯಕ್ರಮಗಳು ಹೆಚ್ಚು ಜನಮನ್ನಣೆ ಗಳಿಸಲಿ, ಇನ್ನೂ ಹೆಚ್ಚಿನ ಅಧಿಕಾರವನ್ನು ಅವರಿಗೆ ಕರುಣಿಸಲಿ. ಮುಂದಿನ ವರ್ಷಗಳಲ್ಲಿ ಜಲಪಾತೋತ್ಸವ ಮತ್ತಷ್ಟು ವಿಜೃಂಭಣೆಯಿಂದ ನಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ತಾಲ್ಲೂಕಿನ ಜನತೆಯ ಪ್ರೀತಿ ವಿಶ್ವಾಸ ನಮ್ಮ ಮೇಲೆ ಇರಲಿ. ನಾನು ಇರುವವರೆಗೂ ನಿಮ್ಮಗಳ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದರು.

ವೀರಭದ್ರನ ಕುಣಿತ, ನೃತ್ಯ ರೂಪಕ, ಚಲನ ಚಿತ್ರ ಹಿನ್ನೆಲೆ ಗಾಯಕ ಅರ್ಜುನ್ ಜನ್ಯ ಮತ್ತು ತಂಡದವರ ಸುಗಮ ಸಂಗೀತ, ಡಾ.ಪಿ.ಕೆ. ರಾಜಶೇಖರ್ ಹಾಗೂ ತಂಡದವರಿಂದ ಜಾನಪದ ಗೀತೆ ಗಾಯನ, ಜ್ಯೋಗಿ ಖ್ಯಾತಿಯ ಸುನೀತಾ, ನಾಗೇಶ್ ಕಂದೇಗಾಲ, ವಿನಯ್ ನಾಡಿಗರ್, ಮಂಗಳ ರವಿ, ಮಹೇಂದ್ರ ಮತ್ತು ಶುಭ ರಾಘವೇಂದ್ರ ತಂಡ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ನೆರೆದಿದ್ದವರ ಮನಸೂರೆಗೊಂಡಿತು. ನಿರೂಪಣೆಯನ್ನು ಅನುಶ್ರೀ ನೆರವೇರಿಸಿದರು.












Click it and Unblock the Notifications