ದಸರಾ ಆನೆಗಳ ತೂಕದಲ್ಲಿ ಗಣನೀಯ ಹೆಚ್ಚಳ
ಮೈಸೂರು, ಅಕ್ಟೋಬರ್ 8: ದಸರಾ ಜಂಬೂ ಸವಾರಿಗೆ ಪಾಲ್ಗೊಳ್ಳಲು ಆಗಮಿಸಿರುವ ಎಲ್ಲ ಆನೆಗಳ ತೂಕವು ಗಣನೀಯವಾಗಿ ಹೆಚ್ಚಳಗೊಂಡಿದೆ. ಇಲಾಖೆಯು ನೀಡುತ್ತಿರುವ ವಿಶೇಷ ಆಹಾರವೇ ಇದಕ್ಕೆ ಕಾರಣವಾಗಿದೆ.
ಸತತ ಎಂಟನೇ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊರುತ್ತಿರುವ ಆನೆ ಅರ್ಜುನ ತನ್ನ ತೂಕವನ್ನು 240 ಕೆಜಿಗಳಷ್ಟು ಹೆಚ್ಚಿಸಿಕೊಂಡಿದೆ. ಮೈಸೂರಿಗೆ 40 ದಿನಗಳ ಹಿಂದೆ ಆಗಮಿಸಿದಾಗ ಅರ್ಜುನನ ತೂಕ 5800 ಕೆಜಿಗಳಷ್ಟಿದ್ದರೆ ಇಂದು 240 ಕೆಜಿ ಜಾಸ್ತಿ ಆಗಿ 6040 ಕೆಜಿಗಳಿಗೆ ತಲುಪಿದೆ.
ಅರಣ್ಯ ಇಲಾಖೆ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲಾ ಆನೆಗಳಿಗೂ ವಿಶೇಷ ಪೌಷ್ಟಿಕ ಆಹಾರ ನೀಡುತ್ತಿದೆ. ಆನೆ ಕ್ಯಾಂಪ್ ನಲ್ಲಿ ನಿತ್ಯ ರಾಗಿ ಮುದ್ದೆ, ಸೊಪ್ಪು, ಹುಲ್ಲು ಭತ್ತ ನೀಡಲಾಗುತ್ತಿದ್ದರೆ ಇಲ್ಲಿ ಅವಲಕ್ಕಿ, ಅನ್ನ, ಗೋಧಿ, ಉದ್ದು, ಹೆಸರು ಕಾಳು ಜತೆಗೆ ಬೀಟ್ ರೂಟ್, ಕ್ಯಾರಟ್, ಸೌತೆ ಕಾಯಿ ಮತ್ತು ಮೂಲಂಗಿ ಮಿಶ್ರಣವನ್ನು ನೀಡಲಾಗುತ್ತಿದೆ.

ಆನೆಗಳು ತೂಕ ಹೆಚ್ಚಿಸಿಕೊಳ್ಳಲೆಂದೇ ಈ ಪೌಷ್ಟಿಕ ಆಹಾರವನ್ನು ನೀಡಲಾಗುತಿದ್ದು ಇದರಿಂದಾಗಿ ಆನೆಗಳ ದೈಹಿಕ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಆನೆಗಳಿಗೆ ಪ್ರತೀ ದಿನ ಬೆಳಿಗ್ಗೆ 5.30 ಗಂಟೆ ಹಾಗೂ ಸಂಜೆ 5 ಗಂಟೆಗೆ ಎರಡು ಹೊತ್ತು ಆಹಾರವನ್ನು ನೀಡಲಾಗುತ್ತಿತ್ತು.
ಅರ್ಜುನ ಅಲ್ಲದೆ ಅಭಿಮನ್ಯುವಿನ ತೂಕ 325 ಕೆಜಿ ಜಾಸ್ತಿ ಆಗಿದ್ದು ಈಗಿನ ತೂಕ 5745 ಕೆಜಿಗಳಿಗೆ ಏರಿಕೆಯಾಗಿದೆ. ಈಶ್ವರ ಆನೆಯ ತೂಕ 275 ಕೆಜಿ ಜಾಸ್ತಿ ಆಗಿದ್ದು ಈಗ 4270 ಕೆಜಿ ಆಗಿದೆ. ವಿಜಯ ಆನೆ ಮಾತ್ರ ಕೇವಲ 95 ಕೆಜಿ ತೂಕ ಹೆಚ್ಚಿಸಿಕೊಂಡಿದ್ದು ಇದರ ಈಗಿನ ತೂಕ 2920 ಕೆಜಿಗಳಾಗಿವೆ. ಧನಂಜಯ ಆನೆ 250 ಕೆಜಿ ತೂಕ ಹೆಚ್ಚಿಸಿಕೊಂಡಿದ್ದು ಈಗಿನ ತೂಕ 4710 ಕೆಜಿಗಳಿಗೆ ಏರಿಕೆ ಆಗಿದೆ. ಕಳೆದ ಆಗಸ್ಟ್ 26ರಂದು ಆನೆಗಳು ಕ್ಯಾಂಪಿನಿಂದ ಇಲ್ಲಿಗೆ ಆಗಮಿಸಿದ್ದು ದಸರಾ ನಂತರ ಕ್ಯಾಂಪಿಗೆ ತೆರಳಲಿವೆ.











Click it and Unblock the Notifications