ಮೈಸೂರಿಗೆ 24x7 ನೀರು ಬಿಡಲು 85 ಕೋಟಿ ಬಿಡುಗಡೆಗೆ ಅಸ್ತು
ಮೈಸೂರು, ಮೇ 28: ಅಮೃತ್ ಯೋಜನೆಯಡಿ ಮೈಸೂರು ನಗರಕ್ಕೆ 24x7 ನೀರು ಸರಬರಾಜು ಮಾಡುವ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನದ ಪಾಲು 85 ಕೋಟಿ ರೂಗಳನ್ನು ರಾಜ್ಯ ಸರ್ಕಾರದಿಂದಲೇ ಒದಗಿಸಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಜೆಎನ್ ನರ್ಮ್ ಯುಐಜಿ -ಸ್ಥಿತ್ಯಂತರ ಹಂತದಡಿಯಲ್ಲಿ ಪೂರ್ಣಗೊಂಡಿರುವ ಈ ಯೋಜನೆಗಳಿಗೆ ಮತ್ತಷ್ಟು ಹಣ ಅಗತ್ಯವಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.
ಕೃಷ್ಣರಾಜ ಸಾಗರ ಜಲಾಶಯ ಅಣೆಕಟ್ಟೆ ಎಡಭಾಗದ ವಿಶ್ವೇಶ್ವರಯ್ಯ ನಾಲೆಯ ಮುಖ್ಯ ನಾಲೆ ಮತ್ತು ಶಾಖಾ ನಾಲೆಗಳು ಶಿಥಿಲವಾಗಿರುವುದರಿಂದ ಇವುಗಳ ಅಭಿವೃದ್ಧಿ ಕಾಮಗಾರಿಗೆ ಮೊದಲನೇ ಹಂತದ ಆಧುನಿಕ ಕಾಮಗಾರಿಗಳನ್ನು 300 ಕೋಟಿ ಅಂದಾಜು ಮೊತ್ತದಲ್ಲಿ ಹಾಗೂ ಎರಡನೇ ಹಂತದ ಆಧುನೀಕರಣ ಕಾಮಗಾರಿಗಳನ್ನು 222.37 ಕೋಟಿ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಿದೆ.

ಮೈಸೂರಿನಲ್ಲಿ ನೂತನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಶಾಖೆಯ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ, ಹೆಚ್ಚುವರಿಯಾಗಿ ಉಂಟಾಗಿರುವ ಮಾರ್ಪಾಟು ಕಾಮಗಾರಿಗಳಿಗೆ 168.9 ಕೋಟಿ ರೂಪಾಯಿಯ ಪರಿಷ್ಕೃತ ಮೊತ್ತಕ್ಕೆ ಸಚಿವ ಸಂಪುಟ ಸಭೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಮೈಸೂರಿನಲ್ಲಿ ಆಸ್ಪತ್ರೆಯ ಶಾಖೆ ಆರಂಭಗೊಳ್ಳುವುದರಿಂದ ಆ ಭಾಗದ ಹೃದಯ ರೋಗಿಗಳಿಗೆ ಅನುಕೂಲವಾಗಲಿದೆ ಮತ್ತು ತ್ವರಿತಗತಿಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂಬ ದೃಷ್ಟಿಯಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ.












Click it and Unblock the Notifications