ನಂಜನಗೂಡು ಬಂದ್ ಯಶಸ್ವಿ : ಸಿದ್ದು ವಿರುದ್ಧ ಆಕ್ರೋಶ
ನಂಜನಗೂಡು, ಜೂನ್ 20 : ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈ ಬಿಟ್ಟಿರುವುದಕ್ಕೆ ಅವರ ತವರು ಕ್ಷೇತ್ರ ನಂಜನಗೂಡಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು, ಬೆಂಬಲಿಗರು ಕರೆ ನೀಡಿದ್ದ ನಂಜನಗೂಡು ಬಂದ್ ಸೋಮವಾರ ಸಂಪೂರ್ಣ ಯಶಸ್ಸು ಕಂಡಿದೆ.
ಬಂದ್ಗೆ ವರ್ತಕರು ಸ್ಪಂದಿಸಿ ಅಂಗಡಿ ಮುಂಗಟ್ಟು, ಹೋಟೆಲ್, ಪೆಟ್ರೋಲ್ ಬಂಕ್ಗಳನ್ನು ಮುಚ್ಚಿದ್ದರು. ಶಾಲೆ, ಸಿನಿಮಾ ಮಂದಿರಗಳು ಕೂಡ ಬಾಗಿಲು ತೆರೆಯಲಿಲ್ಲ. [ಶ್ರೀನಿವಾಸಪ್ರಸಾದ್ ರನ್ನು ಕೈಬಿಟ್ಟಿದ್ದಕ್ಕೆ ಮೈಸೂರಲ್ಲಿ ಆಕ್ರೋಶ]

ಊಟಿ ರಸ್ತೆಯ ಚಿಂತಮಣಿ ಗಣಪತಿ ದೇವಸ್ಥಾನದ ಮುಂದೆ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು, ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಕುಳಿತು ಧರಣಿ ನಡೆಸಿದರಲ್ಲದೆ, ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ, ಸೋನಿಯಾಗಾಂಧಿ, ರಾಹುಲ್ಗಾಂಧಿ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಬಳಿಕ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಹುಲ್ಲಹಳ್ಳಿ ವೃತ್ತದ ಬಳಿ ಸಮಾವೇಶಗೊಂಡು ರಸ್ತೆ ತಡೆ ಮಾಡಿ, ಅಪೋಲೋ ವೃತ್ತದ ಬಳಿ ಸಿದ್ದರಾಮಯ್ಯರವರ ಪ್ರತಿಕೃತಿ ದಹಿಸಿದರು. [ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್]

ಸುಮಾರು 2 ಗಂಟೆಗೂ ಹೆಚ್ಚು ಕಾಲ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ 212ನ್ನು ತಡೆದಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಅಂತಾರಾಜ್ಯ ಹಾಗೂ ಮೈಸೂರು ಕಡೆಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವಂತಾಯಿತು.

ಸೋಮವಾರವಲ್ಲದೆ, ಹುಣ್ಣಿಮೆಯೂ ಆಗಿದ್ದರಿಂದ ಶ್ರೀಕಂಠೇಶ್ವರನ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಬಂದ್ನಿಂದಾಗಿ ಊಟ ಮಾಡಲು ಹೋಟೆಲ್ಗಳಿಲ್ಲದೆ, ಊರುಗಳಿಗೆ ತೆರಳಲು ಬಸ್ಗಳಿಲ್ಲದೆ ಪರದಾಡಿದರು. [ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರಾ ರಮ್ಯಾ?]

ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಹೆಚ್ಚುವರಿ ಅಧೀಕ್ಷಕರಾದ ಕಲಾಕೃಷ್ಣಸ್ವಾಮಿ, ಎಎಸ್ಪಿ ದಿವ್ಯಾ ಸಾರಾ ಥಾಮಸ್ ಬೆಳಿಗ್ಗೆಯಿಂದಲೇ ನಗರದಲ್ಲಿ ಮೊಕ್ಕಾಂ ಹೂಡಿದ್ದರು. ವೃತ್ತ ನಿರೀಕ್ಷಕ ಎಂ.ಸಿ ರವಿಕುಮಾರ್, ಪಿಎಸ್ಐಗಳಾದ ಚೇತನ್, ಧನರಾಜ್, ಶಶಿಕುಮಾರ್, ಪುನೀತ್ ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ನ್ನು ಏರ್ಪಡಿಸಲಾಗಿತ್ತು. [ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ]












Click it and Unblock the Notifications