ಸಿದ್ದರಾಮನಹುಂಡಿಯ ರಾಮ ಮಂದಿರದ ವಿಶೇಷತೆಗಳು!
ಮೈಸೂರು, ಫೆಬ್ರವರಿ 22: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರವಾಗಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.
ಇಂತಹ ಟೀಕೆಗಳ ನಡುವೆಯೇ ಸಿದ್ದರಾಮಯ್ಯ ಅವರು ಸದ್ದಿಲ್ಲದೆ ತಮ್ಮ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಕಳೆದ ಒಂದು ವರ್ಷಗಳಿಂದ ರಾಮಮಂದಿರ ಕಾಮಗಾರಿ ಭರದಿಂದ ಸಾಗಿದ್ದು, ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಪ್ರತಿಬಾರಿ ಹಿಂದುತ್ವದ ಬಗ್ಗೆ ಮಾತನಾಡುವಾಗಲೆಲ್ಲಾ ಸಿದ್ದರಾಮಯ್ಯ, "ನನ್ನ ಹೆಸರಿನಲ್ಲೂ ರಾಮ ಇದೆ, ನಾನು ಕೂಡ ರಾಮನ ಭಕ್ತ" ಎನ್ನುತ್ತಾರೆ. "ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡಲ್ಲ" ಎನ್ನುವ ಮೂಲಕ ರಾಮನ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.
ರಾಮಮಂದಿರದ ನಿರ್ಮಾಣಕ್ಕೆ ಸಂಗ್ರಹವಾದ ದೇಣಿಗೆ ಲೆಕ್ಕ ಕೇಳುವ ಮೂಲಕವು ಸಿದ್ದರಾಮಯ್ಯ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ತಮ್ಮ ಹುಟ್ಟೂರು ಮೈಸೂರಿನ ಸಿದ್ದರಾಮನಹುಂಡಿಯಲ್ಲಿ 120 ಅಡಿ ಉದ್ದ ಹಾಗೂ 45 ಅಡಿ ಅಗಲವಾದ ಭವ್ಯ ರಾಮಮಂದಿರವನ್ನು ಅವರು ಕಟ್ಟಿಸುತ್ತಿದ್ದಾರೆ.

ಕೆಲವೇ ದಿನಗಳಲ್ಲಿ ರಾಮಮಂದಿರ ಪೂರ್ಣ
ಸಿದ್ದರಾಮನಹುಂಡಿಯಲ್ಲಿ ಕಳೆದ ಒಂದು ವರ್ಷಗಳಿಂದ ರಾಮಮಂದಿರ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 50ಕ್ಕೂ ಹೆಚ್ಚು ಕೇರಳ ಮತ್ತು ತಮಿಳುನಾಡು ಮೂಲದ ನುರಿತ ಕೆಲಸಗಾರರು ದಿನನಿತ್ಯ ರಾಮಮಂದಿರ ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ. ಕೆಲವೇ ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ.

ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ
ಹಲವು ವರ್ಷಗಳ ಹಿಂದೆ ಗ್ರಾಮದಲ್ಲಿದ್ದ ರಾಮಮಂದಿರ ಶಿಥಿಲಾವಸ್ಥೆಯಲ್ಲಿತ್ತು. ಇದನ್ನು ಮನಗಂಡ ಸಿದ್ದರಾಮಯ್ಯ, ದೇವಾಲಯ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ಗರ್ಭಗುಡಿ, ಪ್ರಾಂಗಣ ಹಾಗೂ ಹೊರಾಂಗಣ ಹೊಂದಿರುವ ಮಂದಿರವಿದು. ಗರ್ಭ ಗುಡಿಯ ಸುತ್ತ 10 ದೇವರುಗಳ ಸ್ಥಾಪನೆಗೆ ಪ್ರಭಾವಳಿಗಳ ನಿರ್ಮಾಣ ಕಾರ್ಯ ಬರದಿಂದ ಸಾಗಿದೆ. ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದ್ದು ಗ್ರಾಮಸ್ಥರು ಸಿದ್ದರಾಮಯ್ಯ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

9 ದಿನ ರಾಮನವಮಿ ಆಚರಣೆ
ಸಿದ್ದರಾಮನಹುಂಡಿಯಲ್ಲಿ 9 ದಿನಗಳ ಕಾಲ ರಾಮನವಮಿಯನ್ನು ಅದ್ದೂರಿಯಾಗಿ ಅಚರಿಸಲಾಗುತ್ತದೆ. ಪ್ರತಿದಿನ ಗ್ರಾಮದಲ್ಲಿ ರಾಮನಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಕೊನೆಯ ದಿನ ಗ್ರಾಮದಲ್ಲಿ ಮೆರವಣಿಗೆ ನಡೆಸುವ ಮೂಲಕ ರಾಮನವಮಿ ಆಚರಣೆ ನಡೆಯುತ್ತದೆ. ಇಂತಹ ದೇವಾಲಯವನ್ನು ಸಿದ್ದರಾಮಯ್ಯ ಅವರು ವಿಶೇಷ ಕಾಳಜಿ ವಹಿಸಿ ನಿರ್ಮಾಣ ಮಾಡಿಸುತ್ತಿದ್ದಾರೆ.

ವಿರೋಧಿಗಳಲ್ಲೂ ಅಚ್ಚರಿ
ಅಯೋಧ್ಯೆ ರಾಮಮಂದಿರ ನಿಧಿ ಸಮರ್ಪಣೆಗೆ ವಿರೋಧ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಈಗ ತಮ್ಮ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸುವ ಮೂಲಕ ರಾಮನ ಮೇಲೆ ತಮಗಿರುವ ಭಕ್ತಿ ಏನೆಂಬುದನ್ನು ಪರೋಕ್ಷವಾಗಿ ಸಾಬೀತು ಮಾಡಿದ್ದಾರೆ. ಸಿದ್ದರಾಮಯ್ಯ ನಡೆ ವಿರೋಧಿಗಳಲ್ಲಿಯೂ ಅಚ್ಚರಿ ಮೂಡಿಸಿದೆ.












Click it and Unblock the Notifications