ಉಪ್ಪಾರ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ- ಸಿದ್ದರಾಮಯ್ಯ
ಭೋವಿ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ನಾವು ಮಾಡಿದ್ದೇವೆ. ಇದೇ ರೀತಿ ಉಪ್ಪಾರ ಸಮಾಜ ಅಭಿವೃದ್ಧಿ ನಿಗಮವನ್ನು ಈ ವರ್ಷ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಂಜನಗೂಡು, ಮೇ 15: ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಉಪ್ಪಾರ ಸಮಾಜದ ಅಭಿವೃದ್ಧಿಗೆ ನಿಗಮ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಂಜನಗೂಡಿನಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ಭಗೀರಥ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಹರ್ಷಿ ಭಗೀರಥ ಅವರು ಮನುಕುಲದ ಒಳಿತಿಗಾಗಿ ಅಸಾಧ್ಯವಾದ ಸಾಧನೆ ಮಾಡಿದ್ದಾರೆ. ಅವರು ಯುಗ ಪುರುಷ. ಅಂತಹ ಮಹಾ ಪುರುಷರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವುದು ಎಂದರೆ ರಾಜ್ಯದ ಆರೂವರೆ ಕೋಟಿ ಜನರು ಆಚರಿಸಿದಂತೆ. ಉಪ್ಪಾರ ಸಮಾಜದ ಶಿಕ್ಷಣ ಸಂಸ್ಥೆಗೆ ಹಾಸ್ಟೇಲ್ ನಿರ್ಮಾಣಕ್ಕೆ ಜಾಗ ಕೇಳಿದರೆ ಕೊಡುತ್ತೇವೆ. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ವಿದ್ಯಾಸಿರಿ ಯೋಜನೆ:
ಭೋವಿ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ನಾವು ಮಾಡಿದ್ದೇವೆ. ಇದೇ ರೀತಿ ಉಪ್ಪಾರ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸುತ್ತೇವೆ. ನಾನು ಮಾತು ಕೊಟ್ಟರೆ ಮಾಡೇ ಮಾಡುತ್ತೇನೆ. ಅದಕ್ಕೇ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಾನು ಉಪ ಮುಖ್ಯಮಂತ್ರಿಯಾಗಿದ್ದಾಗ ವಸತಿ ಶಾಲೆಗಳನ್ನು ಆರಂಭಿಸಿದೆ. ಈಗ ರಾಜ್ಯದ ಎಲ್ಲಾ 749 ಹೋಬಳಿಗಳಲ್ಲೂ ವಸತಿ ಶಾಲೆ, ಹಾಸ್ಟೆಲ್ ಪ್ರಾರಂಭಕ್ಕೆ ಕ್ರಮ ವಹಿಸಿದ್ದೇವೆ. ಹಾಸ್ಟೆಲ್ ಸಿಗದ ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಿರುವ ವಿದ್ಯಾಸಿರಿ ಯೋಜನೆಯಿಂದ 3 ಲಕ್ಷ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಕ್ಕಿದೆ. 1.5 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕೊಡುತ್ತಿದ್ದೇವೆ. ಈ ಎಲ್ಲಾ ಸೌಲಭ್ಯಗಳು ಎಲ್ಲಾ ಸಮಾಜದ ಜನರಿಗೆ ತಲುಪುತ್ತಿವೆ. ನಮ್ಮದು ಸರ್ವರನ್ನು ಒಳಗೊಂಡ ಸರ್ಕಾರ ಎಂದರು.
ಅನ್ನಭಾಗ್ಯ ಯೋಜನೆ:
ಅನ್ನಭಾಗ್ಯ ಯೋಜನೆ ಕೇವಲ ಅಹಿಂದಾ ವರ್ಗಕ್ಕೆ ಅಲ್ಲ, ಎಲ್ಲಾ ವರ್ಗದ ಬಡವರಿಗೂ ಸೌಲಭ್ಯ ದೊರೆಯುತ್ತಿದೆ. ರಾಜ್ಯದಲ್ಲಿ 4 ಕೋಟಿ ಜನರಿಗೆ ತಲಾ 7 ಕೆ.ಜಿ. ಅಕ್ಕಿ ಸಿಗುತ್ತಿದೆ ಎಂದು ಅವರು ತಿಳಿಸಿದರು.












Click it and Unblock the Notifications