ಹಣ ಕಳವು ಆರೋಪ ಹೋರಿಸಿದ್ದಕ್ಕೆ ರೈಲ್ವೆ ಉದ್ಯೋಗಿ ಆತ್ಮಹತ್ಯೆ
ಮೈಸೂರು, ಜನವರಿ. 08 : ಹಣ ಕಳವು ಆರೋಪ ಹೋರಿಸಿದ್ದಕ್ಕೆ ಮನನೊಂದ ರೈಲ್ವೆ ಉದ್ಯೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಸಂಜೆ ಮೈಸೂರಿನ ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ಶಿವರಾಂಪುರ ನಿವಾಸಿ ಶೇನಾಜ್(33) ಎಂದು ಗುರುತಿಸಲಾಗಿದೆ. ಈತ ಅರಸಿಕೆರೆಯಲ್ಲಿ ರೈಲ್ವೆ ಕಮರ್ಶಿಯಲ್ ವಿಭಾಗದಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಕಳೆದ 6 ತಿಂಗಳ ಹಿಂದೆ ಕಮರ್ಶಿಯಲ್ ವಿಭಾಗದಲ್ಲಿದ್ದ 10 ಲಕ್ಷ ರೂ. ನಾಪತ್ತೆಯಾಗಿತ್ತು.

ನಾಪತ್ತೆಯ ಹಿಂದೆ ಐವರ ಹೆಸರು ಕೇಳಿ ಬಂದಿದ್ದು, ಅದರಲ್ಲಿ ಶೇನಾಜ್ ನು ಶಾಮೀಲಾಗಿದ್ದ ಎಂದು ಈತನ ವಿರುದ್ಧ ಅರಸಿಕೆರೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದರಿಂದ ತೀವ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಅರಸಿಕೆರೆಯಿಂದ ಶೇನಾಜ್ ನನ್ನು ಮೈಸೂರಿನ ಅಶೋಕಪುರಂ ರೈಲ್ವೆ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿತ್ತು. ಶುಕ್ರವಾರ ಮನೆಯಿಂದ ತೆರಳಿದ ಈತ, ಲಷ್ಕರ್ ಠಾಣೆಯ ಹಿಂದಿರುವ ಖಾಸಗಿ ವಸತಿಗೃಹದಲ್ಲಿ ತಂಗಿದ್ದ ಎನ್ನಲಾಗಿದೆ.
ಸಂಜೆಯಾದರೂ ವಸತಿಗೃಹದ ಬಾಗಿಲು ತೆರೆಯದೇ ಇರುವುದನ್ನು ಗಮನಿಸಿದ ವಸತಿ ಗೃಹ ಸಿಬ್ಬಂದಿಗಳು ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ನೋಡಿದರೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications