ಮೈಸೂರಿನಲ್ಲಿ ಜೋಡಿ ಕೊಲೆ; ಬೆಚ್ಚಿಬಿದ್ದ ಸಾಂಸ್ಕೃತಿಕ ನಗರಿ!
ಮೈಸೂರು, ಅಕ್ಟೋಬರ್ 22: ಸಾಂಸ್ಕೃತಿಕ ನಗರಿ ಮೈಸೂರು ಮತ್ತೆ ಬೆಚ್ಚಿಬಿದ್ದಿದೆ. ಕಳೆದು ಹದಿನೈದು ದಸರಾ ಗುಂಗಿನಲ್ಲಿದ್ದ ಮೈಸೂರಿನಲ್ಲಿ ಡಬಲ್ ಮರ್ಡರ್ ಸಾಕಷ್ಟು ಸದ್ದು ಮಾಡುತ್ತಿದೆ. ಮೈಸೂರಿನ ಹೊರವಲಯದಲ್ಲಿ ಜೋಡಿ ಕೊಲೆಯಾಗಿದ್ದು, ಮಗನೇ ತಂದೆ ಹಾಗೂ ತಂದೆಯ ಜೊತೆಗಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಮೈಸೂರಿನ ಶ್ರೀನಗರದಲ್ಲಿ ಈ ಘಟನೆ ನಡೆದಿದ್ದು, ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಕೊಲೆ ಮಾಡಿದ ಸಾಗರ್ ನಾಪತ್ತೆಯಾಗಿದ್ದಾನೆ. ಶಿವಪ್ರಕಾಶ್ ಕೆ.ಜಿ. ಕೊಪ್ಪಲು ನಿವಾಸಿಯಾಗಿದ್ದು, ಲತಾ ಮೈಸೂರಿನ ಶ್ರೀನಗರದಲ್ಲಿ ವಾಸಿಸುತ್ತಿದ್ದರು. ಗುರುವಾರ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಏಕಾಏಕಿ ಲತಾ ಮನೆಗೆ ನುಗ್ಗಿದ ಸಾಗರ್ ಮೊದಲು ತಂದೆಯನ್ನು ಮಚ್ಚಿನಿಂದ ಕೊಲೆ ಮಾಡಿದ್ದಾನೆ.
ನಂತರ ಲತಾಳಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದು, ಲತಾ ಮೇಲೆ ಹಲ್ಲೆಗೆ ಮುಂದಾದಾಗ ತಡೆಯಲು ಬಂದ ಲತಾ ಪುತ್ರ ನಾಗಾರ್ಜುನಿಗೂ ಸಾಗರ್ ಮಚ್ಚಿನಿಂದ ಹಲ್ಲೆಗೈದು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಗಾಯಗೊಂಡಿರುವ ನಾಗಾರ್ಜುನ ಆಸ್ಪತ್ರೆ ದಾಖಲು ಮಾಡಲಾಗಿದೆ. ಈ ಕುರಿತು ಮೈಸೂರಿನ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಷ್ಟಕ್ಕೂ ಆಗಿದ್ದೇನು?
ಶಿವಪ್ರಕಾಶ್ ಹಾಗೂ ಲತಾ ಕಳೆದ 14 ವರ್ಷಗಳಿಂದ ಪರಸ್ಪರ ಜೊತೆಗಿದ್ದರು. ಇಬ್ಬರ ನಡುವೆ ಪ್ರೇಮಾಂಕುರವಿತ್ತು. ಅಸಲಿಗೆ ಲತಾ ಪತಿ ಶಿವಪ್ರಕಾಶ್ ಸ್ನೇಹಿತರಾಗಿದ್ದರು. ಲತಾ ಪತಿ ಅಕಾಲಿಕ ಮರಣ ಹೊಂದಿದ ನಂತರ ಶಿವಪ್ರಕಾಶ್ ಹಾಗೂ ಲತಾ ನಡುವೆ ಉತ್ತಮ ಬಾಂಧವ್ಯ ಇತ್ತು. ಲತಾಳ ಇಬ್ಬರು ಮಕ್ಕಳಿಗೆ ಮದುವೆ ಹಾಗೂ ಪುತ್ರ ನಾಗಾರ್ಜುನ ವಿದ್ಯಾಭ್ಯಾಸಕ್ಕೂ ಶಿವಪ್ರಕಾಶ್ ನೆರವಾಗಿದ್ದರು.
ಇದು ಪ್ರಕಾಶ್ ಪುತ್ರ ಸಾಗರ್ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಕೊಲೆ ನಡೆದಿದೆ ಅಂತ ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ ಶ್ರೀನಗರದಲ್ಲಿ ಲತಾರಿಗೆ ಶಿವಪ್ರಕಾಶ್ ಸ್ವಂತ ಮನೆಯನ್ನು ಸಹ ಕಟ್ಟಿಸಿಕೊಟ್ಟಿದ್ದರು. ಈ ವಿಚಾರದಲ್ಲಿ ಶಿವಪ್ರಕಾಶ್ ಮೊದಲನೇ ಹೆಂಡತಿ ಹಾಗೂ ಪುತ್ರ ಸಾಗರ್ ಸಾಕಷ್ಟು ವಿರೋಧಿಸಿದ್ದರು. ಆದರೆ ಯಾರ ಮಾತು ಕೇಳದ ಶಿವಪ್ರಕಾಶ್ ಹೆಚ್ಚಾಗಿ ಲತಾಳ ಜತೆ ಕಾಲ ಕಳೆಯುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಸಾಗರ್ ಬರ್ಬರವಾಗಿ ಹತ್ಯೆಗೈದಿದ್ದಾನೆ.

ಸಾಗರ್ ನಾಪತ್ತೆ!
ಮತ್ತೊಂದೆಡೆ ತಂದೆ ಅನ್ನುವ ಮಮಕಾರವನ್ನು ಮರೆತು ಹತ್ಯೆಗೈದ ಸಾಗರ್ ನಾಪತ್ತೆ ಆಗಿದ್ದು, ಮೈಸೂರು ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಲತಾಳನ್ನ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಲತಾರ ಪುತ್ರ ನಾಗಾರ್ಜುನ ಮೇಲೂ ಹಲ್ಲೆ ನಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಬೆಚ್ಚಿಬಿದ್ದ ಮೈಸೂರು!
ಇನ್ನು ಜೋಡಿ ಕೊಲೆ ಸುದ್ದಿಯಿಂದ ಮೈಸೂರು ಬೆಚ್ಚಿಬಿದ್ದಿದೆ. ಮೇಲ್ನೋಟಕ್ಕೆ ವೈಯಕ್ತಿಕ ಕಾರಣಕ್ಕೆ ಈ ಕೊಲೆ ನಡೆದಿದೆ ಅನ್ನುವ ವಿಚಾರ ಗೊತ್ತಾದರೂ, ಮೈಸೂರಿನಲ್ಲಿ ಮೇಲಿಂದ ಮೇಲೆ ಅಪರಾಧ ಚಟುವಟಿಕೆ ನಡೆಯುತ್ತಿರುವುದು ಜನರನ್ನು ತಲ್ಲಣಗೊಳಿಸಿದೆ.












Click it and Unblock the Notifications