ಮೈಸೂರು ಜಿಲ್ಲಾ ಪಂಚಾಯತ್ ಕಣದಲ್ಲಿ ಮಂಡ್ಯದ ಟೆಕ್ಕಿ
ಮೈಸೂರು, ಫೆಬ್ರವರಿ 18 : "ನನಗೆ ಓಟು ಕೊಡಿ.. ನೀವು ವೋಟು ಕೊಟ್ಟರೆ ನನಗೆ ಜನ ಸೇವೆ ಮಾಡಲು ಅವಕಾಶ ಸಿಗುತ್ತೆ.. ದಯವಿಟ್ಟು ಮರೆಯದೆ ವೋಟ್ ಮಾಡಿ" ಹೀಗೆಂದು ಮೈಸೂರು ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಗ್ರಾಮದ ಮನೆಮನೆಗೆ ಭೇಟಿ ನೀಡಿ ಅಂಗಲಾಚುತ್ತಿದ್ದಾರೆ.
ಇದರಲ್ಲೇನು ವಿಶೇಷ? ಎಲೆಕ್ಷನ್ ಅಂದ ಮೇಲೆ ಇದೆಲ್ಲ ಇದ್ದಿದ್ದೇ ಎಂದು ನೀವಂದು ಕೊಳ್ಳಬಹುದು. ಆದರೆ ಇದರಲ್ಲೇ ವಿಶೇಷ ಇರುವುದು.
ಇದೀಗ ಓಟು ಕೊಡಿ ಎಂದು ಅಂಗಲಾಚುತ್ತಿರುವ ಅಭ್ಯರ್ಥಿ ರಾಜಕೀಯದಲ್ಲಿ ಪಳಗಿದ ವ್ಯಕ್ತಿಯಲ್ಲ. ಬದಲಾಗಿ ಒಬ್ಬ ಸಾಫ್ಟ್ವೇರ್ ಇಂಜಿನಿಯರ್. ಕೈತುಂಬಾ ಪಗಾರ ಬರುತ್ತಿದ್ದ ಕೆಲಸ ಬಿಟ್ಟು ರಾಜಕೀಯಕ್ಕೆ ಏಕೆ ಬಂದ್ರು? ಅಂತ ಹುಡುಕುತ್ತಾ ಹೋದರೆ ಒಂದಷ್ಟು ಕುತೂಹಲಕಾರಿ ವಿಚಾರಗಳು ಹೊರಬರುತ್ತವೆ. [ಮುಗಿದ ಮೊದಲ ಹಂತದ ಜಿಪಂ, ತಾಪಂ ಚುನಾವಣೆ]

ಕೃಷಿಕನಾಗಿ ಬದಲಾದ ಟೆಕ್ಕಿ : ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್.ನಗರ ತಾಲೂಕಿನವರಾಗಿ ಮೈಸೂರಿನಲ್ಲಿ ನೆಲೆ ನಿಂತಿರುವ ಶಶಿಧರ್ ಒಂದು ಕಾಲದಲ್ಲಿ ಪ್ರತಿಷ್ಠಿತ ಐಬಿಎಂ ಸಾಫ್ಟ್ ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದರು.
2002ರಿಂದ 2011ರವರೆಗೆ ಕಾರ್ಯನಿರ್ವಹಿಸಿದ ಅವರಿಗೆ ಕೆಲಸ ಸಾಕು ಬೇರೇನಾದರು ಮಾಡೋಣ ಎಂಬ ಐಡಿಯಾ ಬಂದಿತ್ತು. ಕೈಗೆ ಲಕ್ಷಾಂತರ ರೂ ಸಂಬಳ ಬರುತ್ತಿದ್ದರೂ ನೆಮ್ಮದಿಯಿರಲಿಲ್ಲ. ಯಾವುದಾದರೂ ನೆಮ್ಮದಿ ತರುವ ಕ್ಷೇತ್ರವನ್ನು ಹುಡುಕುತ್ತಿದ್ದವರಿಗೆ ಕೈಬೀಸಿ ಕರೆದದ್ದು ಕೃಷಿ.
ತಮ್ಮೂರಿನಲ್ಲಿದ್ದ ಜಮೀನಿನಲ್ಲಿ ಕೃಷಿ ಆರಂಭಿಸಿದರು. ಅದರ ಜತೆಗೆ ಕುರಿ ಸಾಕಣೆಯನ್ನೂ ಶುರು ಮಾಡಿದರು. ಮೊದಲಿಗೆ ಅದು ಕಷ್ಟವಾಗಿ ಕಂಡುಬಂತಾದರೂ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಿ ಯಶಸ್ಸು ಕಾಣತೊಡಗಿದರು. [ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ : ಬಿಜೆಪಿ ಪ್ರಣಾಳಿಕೆ]

ರಾಜಕೀಯಕ್ಕೆ ಧುಮುಕಿದ ಶಶಿಧರ್ : ಈ ನಡುವೆ ರಾಜಕೀಯದತ್ತ ಒಲವು ಬಂದಿದ್ದರಿಂದ, ಅಲ್ಲದೆ ಮೋದಿ ಅವರ ಕಾರ್ಯಕ್ರಮವನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಅವರಲ್ಲಿರುವ ಆಸಕ್ತಿ ಮತ್ತು ತುಡಿತವನ್ನು ನೋಡಿ ಬಿಜೆಪಿ ಮುಖಂಡರು ಮೈಸೂರು ಜಿಲ್ಲಾ ಪಂಚಾಯತ್ ಗೆ ಹಿನಕಲ್ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು. ಅದರಂತೆ ಚುನಾವಣಾ ಅಖಾಡಕ್ಕಿಳಿದಿರುವ ಶಶಿಧರ್ ಅವರು ಇದೀಗ ಜನರ ಮುಂದೆ ಬಂದಿದ್ದಾರೆ. ರಾಜಕೀಯ ಅವರ ಕೈಹಿಡಿಯುತ್ತಾ ಕಾದುನೋಡಬೇಕಿದೆ.
ಹಾಗೆ ನೋಡಿದರೆ ಶಶಿಧರ್ ಅವರ ತಂದೆ ಎಸ್. ನಾಗರಾಜ್ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ನಿವೃತ್ತರಾದವರು. ಇವರ ಪತ್ನಿಯೂ ಸಾಫ್ಟ್ವೇರ್ ಇಂಜಿನೀಯರ್, ತಂಗಿ ಮತ್ತು ಭಾವನೂ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಅಮೆರಿಕಾದಲ್ಲಿ ನೆಲೆಸಿದ್ದಾರೆ.

ಸದಾ ಹುಮ್ಮಸ್ಸಿನಿಂದ ಮತಯಾಚನೆಯಲ್ಲಿ ತೊಡಗಿರುವ ಶಶಿಧರ್ ರಾಜಕೀಯ ಭವಿಷ್ಯ ಏನಾಗುತ್ತದೆ ಎಂಬುದು ಫೆ.23ರಂದು ಹೊರಬರುವ ಚುನಾವಣಾ ಫಲಿತಾಂಶ ನಂತರವಷ್ಟೆ ತಿಳಿದುಬರಲಿದೆ.












Click it and Unblock the Notifications