ಮಾಜಿ ಸಿಎಂ ಪುತ್ರನ ಕ್ಷೇತ್ರದಲ್ಲಿ ಅನಿಷ್ಠ ಪದ್ಧತಿ ಇಂದಿಗೂ ಜೀವಂತ
ಮೈಸೂರು.ಮಾರ್ಚ್ 09: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯನವರ ಕ್ಷೇತ್ರವಾದ ವರುಣಾದಲ್ಲಿ ಅನಿಷ್ಠ ಪದ್ಧತಿ ಆಚರಣೆ ಇನ್ನೂ ಜಾರಿಯಲ್ಲಿದ್ದು, ಅನಿಷ್ಠ ಪದ್ಧತಿ ಆಚರಣೆಯಿಂದ ನಾಲ್ಕು ಕುಟುಂಬಗಳು ನರಕಯಾತನೆ ಅನುಭವಿಸುತ್ತಿವೆ.
ಕೇವಲ ನಿವೇಶನ ವಿಚಾರವಾಗಿ ನಾಲ್ಕು ಕುಟುಂಬಗಳನ್ನು ಸಮುದಾಯದ ಮುಖಂಡರು ಬಹಿಷ್ಕಾರಕ್ಕೆ ಒಳಪಡಿಸಿದ್ದಾರೆ. ನಂಜನಗೂಡು ತಾಲೂಕಿನ ಎಸ್.ಹೊಸಕೋಟೆಯಲ್ಲಿ ಜನತೆ ಮಾನವೀಯತೆಯನ್ನೇ ಮರೆತರೇ ಎಂಬ ಪ್ರಶ್ನೆಗಳೆದ್ದಿದೆ. ಗ್ರಾಮದ ಉಪ್ಪಾರ ಸಮುದಾಯದ ಮುಖಂಡರಿಂದಲೇ ಸ್ವಜಾತಿಯವರಿಗೆ ಬಹಿಷ್ಕಾರ ಹಾಕಲಾಗಿದೆ.
ಹತ್ತಾರು ವರ್ಷಗಳಿಂದ ಬಹಿಷ್ಕಾರದ ನರಕಯಾತನೆಯನ್ನು ರೇವಮ್ಮ, ಮಾದಶೆಟ್ಟಿ ಕುಟುಂಬಗಳು ಅನುಭವಿಸುತ್ತಿವೆ. ಮುಖಂಡರು ಹಲವಾರು ನಿರ್ಬಂಧಗಳನ್ನು ಹೇರಿ ಬಹಿಷ್ಕರಿಸಿದ್ದು, ಗ್ರಾಮದಲ್ಲಿ ಯಾರೂ ಕೂಡ ಕೆಲಸಕ್ಕೆ ಕರೆಯುವಂತಿಲ್ಲ. ಜೊತೆಗೆ ಯಾರೂ ಕೂಡ ಮಾತನಾಡಿಸುವಂತಿಲ್ಲ, ಅಂಗಡಿಗಳಲ್ಲಿ ಪದಾರ್ಥಗಳನ್ನು ಕೊಡುವಂತಿಲ್ಲ.

ಬಹಿಷ್ಕಾರದಿಂದ ಮುಕ್ತಿ ಕೊಡಿಸುವಲ್ಲಿ ನಂಜನಗೂಡು ತಾಲೂಕು ಆಡಳಿತ ನಿಷ್ಕ್ರೀಯವಾಗಿದ್ದು, ತಹಶೀಲ್ದಾರ್ ಅವರು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸದೇ ಬೇಜವಾಬ್ದಾರಿ ತೋರಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ರನ ಕ್ಷೇತ್ರದಲ್ಲಿಯೇ ಹೀಗಾದರೆ ಬೇರೆ ಕ್ಷೇತ್ರದ ಕಥೆಯೇನು ಎಂಬ ಪ್ರಶ್ನೆ ಕೇಳಿ ಬಂದಿದೆ.
ಕೂಡಲೇ ಸರ್ಕಾರ ನೀಡಿರುವ ನಿವೇಶನದ ಹಕ್ಕು ಪತ್ರ ನೀಡಬೇಕು. ಬಹಿಷ್ಕಾರದಿಂದ ಮುಕ್ತಿ ನೀಡಿ ಅನ್ಯೋನ್ಯವಾಗಿ ಇರಿಸುವಂತೆ ಮಾಡಬೇಕು ಎಂದು ನೊಂದ ಕುಟುಂಬ ಕೂಡ ಮನವಿ ಮಾಡುತ್ತಿದೆ.












Click it and Unblock the Notifications