ಮೈಸೂರು ವಿವಿಯಲ್ಲಿ ಪಿಎಚ್ಡಿ ಪಡೆದ ಸಿಕ್ಕಿಂ ಬುಡಕಟ್ಟು ಸಮುದಾಯದ ಯುವತಿ
ಮೈಸೂರು, ಮಾರ್ಚ್ 08; ಈಶಾನ್ಯ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂ ರಾಜ್ಯದ ಭುಟಿಯಾ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಡಿಕಿಲಾ ಎಂಬ ಯುವತಿ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಪ್ರತಿಕೋದ್ಯಮ ವಿಭಾಗದಿಂದ ಪಿಎಚ್ಡಿ ಪಡೆದ ಮೊದಲ ಸಿಕ್ಕಿಂ ಮೂಲದ ಯುವತಿ ಡಿಕಿಲಾ. 2015ರಲ್ಲಿ ಬೆಂಗಳೂರಿನ ಸಿಎಂಆರ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, 2016ರಲ್ಲಿ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎನ್.ಮಮತಾ ಅವರ ಮಾರ್ಗದರ್ಶನದಲ್ಲಿ ಪಿಎಚ್ಡಿ ಆರಂಭಿಸಿದ್ದರು.
'ನ್ಯೂಸ್ ಪೇಪರ್ ಅಂಡ್ ಡೆಮಾಕ್ರಸಿ ಇನ್ ದ ಸ್ಟೇಟ್ ಆಫ್ ಸಿಕ್ಕಿಂ' ಎಂಬ ವಿಷಯದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದಾರೆ. ಡಿಕಿಲಾ ಅವರು ಪ್ರಸ್ತುತ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಸ್ನೇಹಿತರೊಬ್ಬರ ಸೂಚನೆಯಂತೆ ಬೆಂಗಳೂರಿನ ಸಿಎಂಆರ್ ಕಾಲೇಜಿಗೆ ಸೇರಿದ್ದ ಡಿಕಿಲಾ ಅವರಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡುವ ಆಸೆ ಚಿಗುರಿತ್ತು. ಈಗ ಪಿಎಚ್ಡಿ ಪದವಿಯನ್ನು ಪಡೆದು ಹೊಸ ದಾಖಲೆ ಮಾಡಿದ್ದಾರೆ.
"ದೇಶದಲ್ಲೇ ಮೈಸೂರು ವಿಶ್ವವಿದ್ಯಾಲಯಕ್ಕೆ ಒಳ್ಳೆಯ ಹೆಸರು, ಘನತೆ ಇದೆ. ಇಲ್ಲಿಗೆ ಬಂದ ಬಳಿಕ ನನಗೆ ಎದುರಾದ ಪ್ರಮುಖ ಸಮಸ್ಯೆ ಭಾಷೆ. ಆದರೂ, ಕನ್ನಡವನ್ನು ತಕ್ಕಮಟ್ಟಿಗೆ ಅರ್ಥ ಮಾಡಿಕೊಳ್ಳುತ್ತೇನೆ. ಇಲ್ಲಿನ ವಾತಾವರಣ, ಕಲೆ, ಸಂಸ್ಕೃತಿ ನನಗೆ ತುಂಬಾ ಇಷ್ಟವಾಯಿತು" ಎಂದು ಡಿಕಿಲಾ ಹೇಳಿದ್ದಾರೆ.
ದಕ್ಷಿಣ ಸಿಕ್ಕಿಂ ಜಿಲ್ಲೆಯ ರವಾಂಗ್ಲ ಎಂಬ ಪಟ್ಟಣದವರು ಡಿಕಿಲಾ. ತಂದೆ ಛಾತುಕ್ ಭುಟಿಯಾ, ತಾಯಿ ಯಂಗ್ ಜೂನ್. ತಂದೆ ಶಿಕ್ಷಕರು, ಇಬ್ಬರು ಅಣ್ಣಂದಿರಿದ್ದು ಅವರು ಇಂಜಿನಿಯರ್ಗಳಾಗಿದ್ದಾರೆ.
"ಭುಟಿಯಾ ಬುಡಕಟ್ಟು ಸಮುದಾಯವಾದರೂ, ಆರ್ಥಿಕವಾಗಿ ಸದೃಢರಾಗಿದ್ದಾರೆ. ಲಿಪ್ಚಾ ಎಂಬ ಸಮುದಾಯದಲ್ಲಿ ಮಾತ್ರ ಹೆಚ್ಚಿನ ಬಡವರಿದ್ದಾರೆ. ಸಿಕ್ಕಿಂನಲ್ಲಿ ಹಿಂದೂಗಳು ಹೆಚ್ಚಾಗಿದ್ದರೂ, ಬೌದ್ಧ ಸಂಸ್ಕೃತಿಯ ಪ್ರಭಾವ ಹೆಚ್ಚಾಗಿದೆ. ಬೌದ್ಧ ದೇವಾಲಯಗಳು ಹೆಚ್ಚಾಗಿವೆ. ನೈಸರ್ಗಿಕ ಪರಿಸರವೂ ಉತ್ತಮವಾಗಿದೆ" ಡಿಕಿಲಾ ತಿಳಿಸಿದ್ದಾರೆ.












Click it and Unblock the Notifications