'ಸಿದ್ದರಾಮಯ್ಯ ವಾಚ್ ಸರ್ಕಾರದ ಆಸ್ತಿಯಾಗಲಿ'
ಮೈಸೂರು, ಫೆಬ್ರವರಿ 25 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹ್ಯೂಬ್ಲೋಟ್ ಕಂಪನಿಯ ವಜ್ರ ಖಚಿತ ವಾಚ್ ಅನ್ನು ಸರ್ಕಾರಕ್ಕೆ ನೀಡಿ, ಮುಂದಿನ ಮುಖ್ಯಮಂತ್ರಿಗಳು ಅದನ್ನು ಧರಿಸಲು ಅನುವು ಮಾಡಿಕೊಡುವಂತೆ' ಮಾಜಿ ಸಂಸದ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ವಿಶ್ವನಾಥ್ ಅವರು, 'ಸರ್ಕಾರದ ಬಳಿ ನಿಜಲಿಂಗಪ್ಪನವರ ಒಂದು ವಾಚ್ ಇದೆ. ಅಂತೆಯೇ ಸಿದ್ದರಾಮಯ್ಯ ಅವರು ತಮ್ಮ ದುಬಾರಿ ವಾಚ್ ಅನ್ನು ಸರ್ಕಾರಕ್ಕೆ ನೀಡಲಿ' ಎಂದು ಹೇಳಿದರು. [ವಾಚು ಹರಾಜು ಹಾಕಲು ಸಿದ್ಧರಾದ ಸಿದ್ದರಾಮಯ್ಯ!]

'ಜನರು ಮುಖ್ಯಮಂತ್ರಿಗಳಿಂದ ಸರಳತೆ ಬಯಸುತ್ತಾರೆ. ಆದ್ದರಿಂದ ಮುಖ್ಯಮಂತ್ರಿಗಳು ಸರಳವಾಗಿ ಬದುಕಬೇಕು. ತಮ್ಮ ಸಮಾಜವಾದಿ ತತ್ವದ ಮೂಲಕ ಯುವಕರಿಗೆ ಮಾದರಿಯಾಗಬೇಕು' ಎಂದು ವಿಶ್ವನಾಥ್ ಸಲಹೆ ಕೊಟ್ಟರು.
ಹರಾಜು ಹಾಕುವ ಸಾಧ್ಯತೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಾಚ್ ಅನ್ನು ಹರಾಜು ಹಾಕುವ ಸಾಧ್ಯತೆ ಇದೆ. ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್ ಅವರು ವಾಚ್ ಹರಾಜು ಹಾಕುವ ಬಗ್ಗೆ ಸುಳಿವು ನೀಡಿದ್ದಾರೆ. 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚ್ ವಿಚಾರದಲ್ಲಿ ಜನರು ಮೆಚ್ಚುವ ನಿರ್ಣಯ ಕೈಗೊಳ್ಳಲಿದ್ದಾರೆ' ಎಂದು ಬುಧವಾರ ಹೇಳಿದ್ದಾರೆ. [ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್]
ಎಚ್ಚರಿಕೆಯ ಗಂಟೆ : 'ಈ ಬಾರಿಯ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಮತಬಾಂಧವರು ನೀಡಿರುವ ಎಚ್ಚರಿಕೆಯ ಕರೆ ಗಂಟೆ. ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕೆಂದು ಪಕ್ಷ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಶಾಸಕರು ಹಾಗೂ ಸಚಿವರಿಗಿಂತ ಜನರಿಗೆ ಆಯ್ಕೆ ಬಿಡಬೇಕು' ಎಂದು ವಿಶ್ವನಾಥ್ ಹೇಳಿದರು. [ 30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]
'ಇತ್ತೀಚೆಗೆ ಜನಪ್ರತಿನಿಧಿಗಳ ಕುಟುಂಬದ ಸದಸ್ಯರು ಚುನಾವಣೆ ಕಣದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ನಡವಳಿಕೆಗಳಿಂದ ಪಕ್ಷದ ಮೇಲೆ ಪರಿಣಾಮ ಬೀರುತ್ತಿದೆ' ಎಂದು ಒಪ್ಪಿಕೊಂಡ ವಿಶ್ವನಾಥ್ ಅವರು, 'ಮತದಾರರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ ಪಕ್ಷ ತನ್ನ ಬಲಿಷ್ಠತೆಯನ್ನು ಕಳೆದುಕೊಳ್ಳುತ್ತಿದೆ' ಎಂದರು. [ಚುನಾವಣೆಯಲ್ಲಿ ಗೆದ್ದವರು ಬಿದ್ದವರು, ಎಲ್ರೂ ನಮ್ಮವರೇ!]












Click it and Unblock the Notifications