ಸಿದ್ದರಾಮಯ್ಯ ವಿರುದ್ದ ಮೈಸೂರಿನಲ್ಲಿ ದಾಖಲಾಗಿದ್ದ ಪ್ರಕರಣ ಬೆಂಗಳೂರಿಗೆ ವರ್ಗ
ಮೈಸೂರು, ಮೇ 11:ಅಕ್ರಮ ಭೂ ಒತ್ತುವರಿ, ಸರ್ಕಾರಿ ಅಧಿಕಾರ ದುರ್ಬಳಕೆ ಆರೋಪ ದೂರಿನನ್ವಯ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನಲ್ಲಿ ದಾಖಲಾಗಿದ್ದ ಪ್ರಕರಣ ವಿಚಾರಣೆ ಬೆಂಗಳೂರಿಗೆ ವರ್ಗಾವಣೆಗೊಂಡಿದೆ.
ಮೈಸೂರು ನ್ಯಾಯಾಲಯದಿಂದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಮಾಡುವ ಆದೇಶವನ್ನು ಇಂದು ಶನಿವಾರ ನಾಗರೀಕ ಹಿರಿಯ ನ್ಯಾಯಾಧೀಶ, ಸಿಜೆಎಂ ಯಶವಂತ ಕುಮಾರ್ ನೀಡಿದ್ದಾರೆ.
ಏನಿದು ಪ್ರಕರಣ?
ಅಕ್ರಮ ಭೂ ಸ್ವಾಧೀನ ಆರೋಪದಡಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿಂದೆ ಹಿನಕಲ್ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಮ್ಮ ಎಂಬುವವರ ಸರ್ವೇ ನಂ 70/4a ನಲ್ಲಿ ಜಾಗ ಭೂಸ್ವಾಧೀನ ಮಾಡಿರಲಿಲ್ಲ. ಆದರೂ ಸಾಕಮ್ಮ ಎಂಬುವವ ಸ್ವಾಧೀನವಾಗದ ಜಮೀನನ್ನು ಸಿದ್ದರಾಮಯ್ಯನವರು ಖರೀದಿಸಿದ್ದರು.

ಬಳಿಕ ಮುಡಾದಿಂದ ಅನುಮತಿ ಪಡೆಯದೆ ಸರ್ವೇ ನಂ70/4a ರಲ್ಲಿ ಸರ್ಕಾರಿ ಜಾಗದಲ್ಲಿ ಮಾಜಿ ಸಿಎಂ ಮನೆಯನ್ನು ಸಹ ನಿರ್ಮಿಸಿದ್ದರು. ಇದಾದ ಬಳಿಕ ಇದೇ ಮನೆಯನ್ನು 2003ರಲ್ಲಿ ಬೇರೆಯವರಿಗೆ ಮಾರಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬುವವರು ಮೈಸೂರಿನ ಲಕ್ಷ್ಮೀಪುರ ಠಾಣೆಯಲ್ಲಿ ದೂರು ಸಹ ನೀಡಿದ್ದರು.
ಇನ್ನು ಪ್ರಕರಣದ ಕುರಿತು ಬಿ ರಿಪೋರ್ಟ್ ಹಾಕಿದ್ದ ಲಕ್ಷ್ಮೀಪುರಂ ಪೊಲೀಸರ ನಿಲುವು ಪ್ರಶ್ನಿಸಿ ದೂರುದಾರ ಗಂಗರಾಜು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಅಂದಿನ ಮುಡಾ ಅಧ್ಯಕ್ಷ ಸಿ ಬಸವೇಗೌಡ, ಅಂದಿನ ಮುಡಾ ಆಯುಕ್ತ ಧ್ರುವಕುಮಾರ್, ಸದ್ಯ ಮುಡಾ ಆಯುಕ್ತ ಪಿ. ಎಸ್ ಕಾಂತರಾಜ್ ವಿರುದ್ಧ ಸಹ ದೂರು ದಾಖಲಿಸಿದ್ದಾರೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 68 ದಾಖಲೆಗಳ ಪರಿಶೀಲನೆ ನಡೆದಿದ್ದು, ಬಾಕಿ 30 ಕ್ಕೂ ಅಧಿಕ ದಾಖಲೆಗಳ ಪರಿಶೀಲನೆ ಮಾಡಬೇಕಾಗಿದೆ. ಜೂನ್ 10ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪರಿಶೀಲನೆ ಕೈಗೆತ್ತಿಕೊಳ್ಳಲಿದೆ.












Click it and Unblock the Notifications