ಚಾಮುಂಡೇಶ್ವರಿಯಲ್ಲಿ ನನ್ನನ್ನು ಸೋಲಿಸಿದ್ದು ಜನರಲ್ಲ, ಕಾರ್ಯಕರ್ತರು, ಮತ್ತೆ ಅಲ್ಲಿ ಸ್ಪರ್ಧಿಸಲ್ಲ: ಸಿದ್ದರಾಮಯ್ಯ

ಮೈಸೂರು, ಜುಲೈ 17: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆದ ಸೋಲಿನ ನೋವನ್ನು ಸಿದ್ದರಾಮಯ್ಯ ಇನ್ನೂ ಮರೆತಂತಿಲ್ಲ. ಮತ್ತೆ ಇಲ್ಲಿ ಬಂದು ನಿಂತುಕೊಳ್ಳಿ, ನಿಮಗೆ ಸೋಲಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಕ್ಷೇತ್ರದ ಅನೇಕ ಜನರು ಮತ್ತು ಕಾರ್ಯಕರ್ತರು ದುಂಬಾಲು ಬಿದ್ದರೂ ಸಿದ್ದರಾಮಯ್ಯ ಮಾತ್ರ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಸುತಾರಾಂ ಒಲವು ಹೊಂದಿಲ್ಲ.

ಭಾನುವಾರ ಕೂಡ ಸಿದ್ದರಾಮಯ್ಯ ತಮ್ಮ ಅನಿಸಿಕೆಯನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದರು. ತಾನು ಚಾಮುಂಡೇಶ್ವರಿಯಿಂದ ಮತ್ತೊಮ್ಮೆ ಸ್ಪರ್ಧಿಸುತ್ತೇನೆಂದು ನೀವು ನಿರೀಕ್ಷಿಸಿದ್ದರೆ ಅದನ್ನು ತಲೆಯಿಂದ ತೆಗೆದುಹಾಕಿ ಎಂದು ಅವರು ಸ್ಪಷ್ಟಪಡಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಚಾಮುಂಡೇಶ್ವರಿಯಿಂದ ಮತ್ತೆ ನಿಲ್ಲಲ್ಲ. ನನ್ನನ್ನು ಮತ್ತೆ ಒತ್ತಾಯ ಮಾಡಬೇಡಿ. ಇದನ್ನು ತಲೆಯಿಂದ ತೆಗೆದುಹಾಕಿ. ನನ್ನನ್ನು ಖುಷಿಪಡಿಸಲೂ ಇನ್ಮುಂದೆ ಹೀಗೆ ಮಾತನಾಡಬೇಡಿ. ದಟ್ ಇಸ್ ವೆರಿ ವೆರಿ ಕ್ಲಿಯರ್. ಇದು ನನ್ನ ಕೊನೆಯ ಚುನಾವಣೆ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಹಾಗೆಯೇ, ತನಗೆ ಮತದಾರರ ಮೇಲೆ ಕೋಪ ಇಲ್ಲ ಎಂದೂ ಸಿದ್ದರಾಮಯ್ಯ ಇದೇ ವೇಳೆ ಅಭಿಪ್ರಾಯಪಟ್ಟರು.

ಇದು ಕೊನೆಯ ಚುನಾವಣೆ

ಇದು ಕೊನೆಯ ಚುನಾವಣೆ

"ವರುಣಾ, ಬಾದಾಮಿ, ಕೋಲಾರ, ಹುಣಸೂರು, ಕೊಪ್ಪಳದಲ್ಲಿ ನನ್ನನ್ನು ಕರೆಯುತ್ತಿದ್ದಾರೆ. ಆದರೆ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಅಂತ ನಾನು ಇನ್ನೂ ತೀರ್ಮಾನ ಮಾಡಿಲ್ಲ. ಇದು ನನ್ನ ಕೊನೆಯ ಚುನಾವಣೆ. ಇದಾದ ಬಳಿಕ ಯಾವ ಹುದ್ದೆ ಕೊಟ್ಟರು ನಾನು ಸ್ವೀಕರಿಸುವುದಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲೇ ನನ್ನ ಕೊನೆಯ ಸ್ಪರ್ಧೆ" ಎಂದು ಸಿದ್ದರಾಮಯ್ಯ ಹೇಳಿದರು.

ಮುಂದುವರಿದು ಮಾತನಾಡಿದ ಅವರು, "ಈ ಜಾತಿವಾದಿ ಸರ್ಕಾರ, ಭ್ರಷ್ಟಾ ಸರ್ಕಾರ, ಧರ್ಮ ಆಧಾರಿತ ಸರ್ಕಾರವನ್ನ ತೆಗೆದುಹಾಕಬೇಕು" ಎಂದು ಕರೆ ನೀಡಿದರು.

'ಕಾರ್ಯಕರ್ತರ ಮೇಲೆ ಕೋಪ'

'ಕಾರ್ಯಕರ್ತರ ಮೇಲೆ ಕೋಪ'

"ನನ್ನನ್ನು ಸೋಲಿಸಿದ ಹಾಗೆ ಬೇರೆ ಯಾರನ್ನೂ ಸೋಲಿಸಬೇಡಿ. ನಾನೇನು ಅನ್ಯಾಯ ಮಾಡಿದ್ದೆ ಹೇಳಿ? ನಾನೇನು ದ್ರೋಹ ಮಾಡಿದ್ದೆ ಅದನ್ನು ಹೇಳಿ. ನನ್ನನ್ನು 35 ಸಾವಿರ ಮತಗಳಿಂದ ಸೋಲಿಸಿದಿರಿ. ಚಾಮುಂಡೇಶ್ವರಿಯಲ್ಲಿ ನನ್ನನ್ನ ಐದು ಬಾರಿ ಗೆಲ್ಲಿಸಿದಿರಿ, ಮೂರು ಬಾರಿ ಸೋಲಿಸಿದಿರಿ. ನನಗೆ ಮತದಾರರ ಬಗ್ಗೆ ಕೋಪ ಇಲ್ಲ, ಕಾರ್ಯಕರ್ತರ ಮೇಲೆಯೇ ಕೋಪ" ಎಂದು ಈ ವೇಳೆ ಸಿದ್ದರಾಮಯ್ಯ ಬೇಸರಪಟ್ಟರು.

"ನಮ್ಮ ಗುರಿ ಒಂದೇ ಇರಬೇಕು. ಆದರೆ, ಲಿಂಗಾಯತರನ್ನ ಒಡೆದ, ಮೇಲ್ವರ್ಗದವರ ವಿರೋಧಿ, ಸದಾಶಿವ ಆಯೋಗ ಜಾರಿ ಮಾಡಲಿಲ್ಲ ಎಂದು ಬಿಂಬಿಸಿದರು. ನಮ್ಮವರೇ ಅಪಪ್ರಚಾರ ಮಾಡಿದರು ಎಂದರು. ನಮ್ಮ ರಾಜ್ಯ ಉಳಿಯಬೇಕು ಅಂದ್ರೆ ಬಿಜೆಪಿ ತೊಲಗಬೇಕು. ನಾನು ಮಾತನಾಡಿದ್ರೆ ಬಿಜೆಪಿ ಅವರು 20 ಜನ ನನ್ನ ಮೇಲೆ ಬೀಳ್ತಾರೆ. ಆದರೆ ನಮ್ಮವರು ಉಸಿರೇ ಬಿಡಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರಕಾರದಲ್ಲಿ ಸರ್ವರಿಗೂ ಅನುಕೂಲ

ಕಾಂಗ್ರೆಸ್ ಸರಕಾರದಲ್ಲಿ ಸರ್ವರಿಗೂ ಅನುಕೂಲ

"ಸೋಲು ಗೆಲುವು ಪ್ರಜಾಪ್ರಭುತ್ವದಲ್ಲಿ ಇದ್ದೇ ಇರುತ್ತೆ. ಬಿಜೆಪಿ ಸರ್ಕಾರ ಬಂದು ನಾಲ್ಕು ವರ್ಷ ಆಯ್ತು. ವಾಲ್ಮೀಕಿ ಸಮಾಜದ ಸ್ವಾಮೀಜಿ 155 ದಿನದಿಂದ ಧರಣಿ ಮಾಡ್ತಿದ್ದಾರೆ. ಈ ಸರ್ಕಾರ ಮೀಸಲಾತಿ ಕೊಟ್ಟಿದ್ಯ? ಇದನ್ನ ಯಾರೂ ಹೇಳಲ್ಲ. ಅವರ ಬೇಡಿಕೆ ಈಡೇರಿಸಿದ್ದಾರಾ? ನಾನು ಕೊಟ್ಟ ಕಾರ್ಯಕ್ರಮ ಯಾರು ಕೊಟ್ಟಿಲ್ಲ. ನಾನು ಒಂದು ಜಾತಿಗೆ ಸೀಮಿತವಾಗಿ ಕಾರ್ಯಕ್ರಮ ಕೊಡಲಿಲ್ಲ. ಶ್ರೀರಾಮುಲು ಹಾಗೇ ಮಾಡ್ತೀನಿ ಹೀಗೆ ಮಾಡ್ತೀನಿ ಅಂದ. ನಾನು ಕೆಲಸ ಮಾಡೇ ಮಾಡ್ತಿನಿ ರಕ್ತದಲ್ಲಿ ಬರೆದು ಕೊಡ್ತೀನಿ ಅಂದಾ ಶ್ರೀರಾಮುಲು. ರಾಮುಲು ಹೇಳಿದ ಕೆಲಸ ಮಾಡಿದ್ನಾ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

"ನಮ್ಮ ಸರ್ಕಾರದಲ್ಲಿ ಎಲ್ಲಾ ಜಾತಿಯ ಬಡವರಿಗೆ ಅನುಕೂಲ ಮಾಡಿದ್ದೇವೆ. ಅನ್ನ ಭಾಗ್ಯ, ಕ್ಷೀರ ಭಾಗ್ಯ, ಸಾಲಮನ್ನ, ಇಂದಿರಾಕ್ಯಾಂಟೀನ್, ಶೂ ಭಾಗ್ಯ ಎಲ್ಲವನ್ನು ಒಂದು ಜಾತಿಗೆ ಮಾಡಿದ್ವಾ? ಪರಿಶಿಷ್ಟ ಜಾತಿ, ವರ್ಗದವರಿಗೆ ಮೀಸಲಾತಿ ತರಲು ಕಾನೂನು ಮಾಡಿದ್ದು ನಮ್ಮ ಸರ್ಕಾರ" ಎಂದು ಅವರು ತಿಳಿಸಿದರು.

ಚಾಮುಂಡೇಶ್ವರಿಯಲ್ಲಿ ನಾನು ಮಾಡಿದಷ್ಟು ಯಾರೂ ಮಾಡಿಲ್ಲ

ಚಾಮುಂಡೇಶ್ವರಿಯಲ್ಲಿ ನಾನು ಮಾಡಿದಷ್ಟು ಯಾರೂ ಮಾಡಿಲ್ಲ

"ಯಾವುದೇ ಪಕ್ಷ ಚುನಾವಣೆಯಲ್ಲಿ ಕಾರ್ಯಕರ್ತರ ಮೇಲೆ ಅವಲಂಬಿತವಾಗಿರುತ್ತದೆ. ಅಭ್ಯರ್ಥಿ ಆಗುವವರು ಪಕ್ಷದ ಅಭ್ಯರ್ಥಿ ಅಷ್ಟೇ. ಮನೆ ಮನೆಗೆ ಹೋಗಿ ಮತ ಕೇಳೋರು ಕಾರ್ಯಕರ್ತರು. ನಾನು ಹತ್ತು ವರ್ಷ ಚಾಮುಂಡೇಶ್ವರಿಯಲ್ಲಿ ನಿಂತಿರಲಿಲ್ಲ. 2018 ರಲ್ಲಿ ಸ್ಪರ್ಧಿಸಿದಾಗ ಅನೇಕ ಬೂತ್‌ಗಳಲ್ಲಿ ಕಾರ್ಯಕರ್ತರು ನಿಂತಿರಲಿಲ್ಲ. ಹೀಗಾಗಿ ನಾನು ಸೋಲಬೇಕಾಯ್ತು. ಸೋಲು ಗೆಲುವು ಸಹಜ. ಹಾಗಂತ ನಾನು ವ್ಯಥೆ ಪಡೋಕೆ ಹೋಗಲ್ಲ. ಅಳೋಕೆ ಹೋಗಲ್ಲ. ಬಾದಾಮಿಗೆ ಎರಡೇ ದಿನ ಹೋಗಿದ್ದು. ಆದರೂ ಅಲ್ಲಿ ನನ್ನನ್ನ ಗೆಲ್ಲಿಸಿದರು" ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

"ಚಾಮುಂಡೇಶ್ವರಿ ಅತಿ ಹೆಚ್ಚು ಕೆಲಸ ಮಾಡಿದ್ದೇವೆ. ಇದನ್ನು ಯಾರೂ ಮಾಡಿಲ್ಲ. ಇದನ್ನ ಎಲ್ಲಿ ಬೇಕಾದರೂ ಹೇಳ್ತೇನೆ. ನಾನು 1983 ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದಾಗ ಚಾಮುಂಡೇಶ್ವರಿ ಹೇಗಿತ್ತು, ಈಗ ಹೇಗಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಿ. ಇಂದು ಮೂಲಭೂತ ಸೌಲಭ್ಯ ಸಿಕ್ಕಿದ್ರೆ ಸಿದ್ದರಾಮಯ್ಯ ಶಾಸಕರಾಗಿ, ಸಿಎಂ ಆಗಿದ್ರಿಂದ. ನಾನು ಮಾಡಿದ ಕೆಲಸವನ್ನ ಯಾವ ಮಂತ್ರಿಯೂ ಮಾಡಿಲ್ಲ" ಎಂದು ಸಿದ್ದರಾಮಯ್ಯ ಹೇಳಿಕೊಂಡರು.

2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಿ.ಟಿ. ದೇವೇಗೌಡ ಭಾರೀ ಅಂತರದಿಂದ ಸಿದ್ದರಾಮಯ್ಯರನ್ನು ಸೋಲಿಸಿದ್ದರು. ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಎದುರು ಸಿದ್ದರಾಮಯ್ಯ ಸ್ವಲ್ಪದರಲ್ಲಿ ಸೋಲಿನಿಂದ ತಪ್ಪಿಸಿಕೊಂಡಿದ್ದರು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+