ಹುತಾತ್ಮ ಯೋಧರ ಪಾರ್ಥೀವ ಶರೀರ ಕಾಣುವ ನಿರೀಕ್ಷೆಯಲ್ಲಿ...!
ಮೈಸೂರು, ಫೆ.14: ಸಿಯಾಚಿನ್ ನಲ್ಲಿ ನಡೆದ ಹಿಮಪಾತದಲ್ಲಿ ವೀರಮರಣವನ್ನಪ್ಪಿದ ಮೈಸೂರು ಜಿಲ್ಲೆಯ ಯೋಧ ಮಹೇಶ್ ಮತ್ತು ಹಾಸನದ ನಾಗೇಶ್ ಅವರ ಪಾರ್ಥೀವ ಶರೀರ ಭಾನುವಾರ ರಾತ್ರಿ ರಾಜ್ಯಕ್ಕೆ ತಲುಪಲಿದೆ ಎಂಬ ಮಾಹಿತಿ ಇತ್ತಾದರೂ ಪ್ರತಿಕೂಲ ವಾತಾವರಣದ ಹಿನ್ನಲೆಯಲ್ಲಿ ವಿಳಂಬವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲಾ ಮತ್ತು ತಾಪಂ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಪ್ರಚಾರ ನಡೆಸಲು ತವರು ಜಿಲ್ಲೆಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. [ಸಿಯಾಚಿನ್ ಹೀರೋ ಮಹೇಶ್ ಪಾರ್ಥಿವ ಶರೀರ ಯಾವಾಗ ಬರುತ್ತೆ?]

ಯೋಧ ಮಹೇಶ್ ಅವರ ಪಾರ್ಥೀವ ಶರೀರ ಭಾನುವಾರ ರಾತ್ರಿ ಹುಟ್ಟೂರಿಗೆ ಆಗಮಿಸಲಿದೆ ಎಂಬ ಮಾಹಿತಿ ಬಂದಿತ್ತು. ಹೀಗಾಗಿ ಸಂಬಂಧಿಕರು ಕಾಯುತ್ತಿದ್ದರು. ಆದರೆ, ಭಾನುವಾರ ಪಾರ್ಥೀವ ಶರೀರವನ್ನು ರಾಜ್ಯಕ್ಕೆ ರವಾನಿಸಲು ಪ್ರತಿಕೂಲ ವಾತಾವರಣ ಇರುವುದರಿಂದ ಸಾಧ್ಯವಾಗುತ್ತಿಲ್ಲ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟ ಹನುಮಂತಪ್ಪ ಕೊಪ್ಪದ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಯಾವ ರೀತಿಯ ಪರಿಹಾರವನ್ನು ಘೋಷಣೆ ಮಾಡಿದ್ದೇವೆಯೋ ಅದೇ ಪರಿಹಾರವನ್ನು ಹುತಾತ್ಮರಾದ ಮಹೇಶ್ ಹಾಗೂ ನಾಗೇಶ್ ಅವರ ಕುಟುಂಬಕ್ಕೂ ನೀಡಲಾಗುವುದಾಗಿ ಹೇಳಿದ್ದಾರೆ.[ಹುತಾತ್ಮರ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ]
ಎಲ್ಲವೂ ಸರಿಹೋದರೆ ಹುತಾತ್ಮರಾದ ಯೋಧರಾದ ಮಹೇಶ್ ಹಾಗೂ ನಾಗೇಶ್ ಅವರ ಪಾರ್ಥೀವ ಶರೀರ ಸೋಮವಾರ ರಾಜ್ಯವನ್ನು ತಲುಪುವ ಸಾಧ್ಯತೆಯಿದೆ.












Click it and Unblock the Notifications