ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯರಿಗೆ ಸರಿಯಾದ ಗೌರವ ಸಿಗುತ್ತಿಲ್ಲ: ಎಚ್.ವಿಶ್ವನಾಥ್
ಮೈಸೂರು, ಅಕ್ಟೋಬರ್ 23: ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೌರವ ಸಿಗುತ್ತಿಲ್ಲ. ಮೊದಲು ಅವರು ಹೊಗಳುಭಟ್ಟರಿಂದ ದೂರ ಇರಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಚಿವ ಕೆ.ಎಸ್ ಈಶ್ವರಪ್ಪ ಅವರ ಭಯ ಸಿದ್ದರಾಮಯ್ಯಗೆ ಕಾಡುತ್ತಿದೆ. ಅವರಿಂದಲೇ ಅಧಿಕಾರ ಕಳೆದುಕೊಂಡಿದ್ದಾರೆ. ರಾಜ ಮಹಾರಾಜರು ಸಹ ಹೊಗಳುಭಟ್ಟರನ್ನು ನಂಬಿ ಉಳಿದಿಲ್ಲ. ನಿಮಗೆ ಈಗಲೂ ಮನವಿ ಮಾಡುತ್ತೇನೆ ಎಂದು ಹೇಳಿದರು.
ಬಿಹಾರದಲ್ಲಿ ಕೊರೊನಾ ಲಸಿಕೆ ವಿಚಾರದ ಪ್ರಣಾಳಿಕೆ ಬಿಡುಗಡೆ ವಿಚಾರವನ್ನು ರಾಜಕೀಯಕ್ಕೆ ತರಬೇಡಿ. ಮತ ಹಾಕಿ ಗೆಲ್ಲಿಸಿದರೆ ಮಾತ್ರ ಲಸಿಕೆ ಕೊಡ್ತೀರಾ? ಸೋಲಿಸಿಬಿಟ್ಟರೆ ಜನರನ್ನು ಸಾಯಿಸಿ ಬಿಡ್ತಿರಾ?. ಯಾವುದೇ ಪಕ್ಷವಾಗಲಿ ಕೊರೊನಾ ವಿಚಾರ ರಾಜಕೀಯ ಚರ್ಚೆಗೆ ಬಳಸಿಕೊಳ್ಳಬಾರದು. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕಾಡುಮನುಷ್ಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂಎಲ್ಸಿ ಎಚ್.ವಿಶ್ವನಾಥ್, ಕಾಡು ಮನುಷ್ಯ ಅಂದರೆ ಅರಣ್ಯ ಸಂರಕ್ಷಕರಿಗೆ ಮಾಡುವ ಅಪಮಾನವಾಗಿದೆ. ಈಗ ಎಷ್ಟೋ ಜನ ನಾವು ಕಾಡು ಜನ ಅಂತ ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷನನ್ನು ಕಾಡುಮನುಷ್ಯ ಅನ್ನುವುದು ಸರಿಯೇ ಎಂದು ಪ್ರಶ್ನಿಸಿದರು.
ನಮ್ಮ ಮೈಸೂರಿನ ಭಾಷೆಯ ಮೇಲೆ ಹಿಡಿತ ನಿಮಗೆ ಇರಲಿ. ರಾಜಕೀಯ ಮುತ್ಸದ್ದಿಯಾಗಿ ಬಳಸಿರುವ ಮಾತುಗಳನ್ನು ವಾಪಸ್ ಪಡೆಯಿರಿ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಎಂಎಲ್ಸಿ ಎಚ್.ವಿಶ್ವನಾಥ್ ಕೆಂಡಾಮಂಡಲರಾಗಿದ್ದಾರೆ.












Click it and Unblock the Notifications