ಸಿದ್ದರಾಮಯ್ಯ ನನ್ನನ್ನು ಜೈಲಿಗೆ ಹಾಕಲು ಪ್ರಯತ್ನಿಸಿದ್ದರು; ಎಚ್ಡಿಕೆ
ಮೈಸೂರು, ಏಪ್ರಿಲ್ 21: ಸಿದ್ದರಾಮಯ್ಯ ಮಹಾನ್ ನಾಯಕ. ಹುಟ್ಟಿದಾಗಿನಿಂದಲೂ ಜಾತ್ಯಾತೀತ ಶಕ್ತಿಗಳನ್ನು ಬೆಳೆಸಿದ್ದಾರಾ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೆಸರು ಸುಳ್ಳಿನ ರಾಮಯ್ಯ ಅಂತ ಬದಲು ಮಾಡಬೇಕು. ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳುಹಿಸಲು ಸಿದ್ದರಾಮಯ್ಯ ಪ್ರಯತ್ನ ಮಾಡಿದ್ದರು. 12 ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಮರುಜೀವ ಕೊಡಲು ಯತ್ನಿಸಿದ್ದರು.
ನಾನು ಕೆ.ಎಸ್. ಈಶ್ವರಪ್ಪ ಪರ ವಕಾಲತ್ತು ವಹಿಸಲು ಲಾಯರ್ ಅಲ್ಲ. ಅವರ ಬಗ್ಗೆ ಯಾವ ಸಾಫ್ಟ್ ಕಾರ್ನರ್ ಇಲ್ಲ. ನಾನು ದಾಖಲೆಗಳ ಬಗ್ಗೆ ಮಾತನಾಡಿದ್ದೇನೆ. ಸಂತೋಷ ಅವರು ವಾಟ್ಸ್ಅಪ್ ಮೆಸೇಜ್ ಕಳುಹಿಸಿದ್ದಾರೆ. ಸಂಪೂರ್ಣ ತನಿಖೆ ಮಾಡಲು ಒತ್ತಾಯಿಸಿದ್ದೇನೆ. ಕೆ.ಎಸ್. ಈಶ್ವರಪ್ಪ ತಪ್ಪು ಮಾಡಿದ್ದರೆ, ಅವರೇ ಕಾರಣಕರ್ತರಾಗಿದ್ದರೆ ಬಂಧಿಸಿ. ಈಶ್ವರಪ್ಪ ನನ್ನಿಂದ ಹಣ ಕೇಳಿಲ್ಲ ಎಂದು ಸಂತೋಷ್ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಅಂತಾ ಹೇಳಿದ್ದೇನೆ ಎಂದರು.

ಸಿದ್ದರಾಮಯ್ಯಗೆ ನನ್ನ ಭಯ ಕಾಡುತ್ತಿದೆ
ಸಿದ್ದರಾಮಯ್ಯಗೆ ನನ್ನ ಭಯ ಕಾಡುತ್ತಿದೆ. ಅದಕ್ಕೆ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಬಿಜೆಪಿ ಭಯ ಇಲ್ಲ. ಎಲ್ಲಿ ನಾನು ಅಧಿಕಾರಕ್ಕೆ ಬಂದು ಬಿಡುತ್ತೇನೆ ಅನ್ನುವ ಭಯ ಇದೆ. 2006ರಿಂದಲೂ ಸಿದ್ದರಾಮಯ್ಯಗೆ ಭಯ ಇದೆ. ಎರಡು ಪಕ್ಷಗಳು 150 ಸೀಟ್ ಗೆದ್ದ ಮೇಲೆ ಮೈತ್ರಿ ಹೇಗೆ ಸಾಧ್ಯ. ಇವರಿಗೆ ಬಹುಮತ ಬಂದ ಮೇಲೆ ನನ್ನ ಯಾವೂರ ದಾಸಯ್ಯ ಕೇಳುತ್ತಾನೆ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಅಜಾನ್ ದಂಗಲ್ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, ಸರ್ಕಾರ ಎಲ್ಲಾ ಧಾರ್ಮಿಕ ಗುರುಗಳ ಸಭೆ ನಡೆಸಲಿ. ಸಿಎಂ ನೇತೃತ್ವ ವಹಿಸಲಿ, ಈ ಮೂಲಕ ಸ್ಪಷ್ಟವಾದ ಸಂದೇಶ ರವಾನೆ ಮಾಡಿ ಎಂದು ಸಲಹೆ ನೀಡಿದರು.
ಇಬ್ಬರು ಪೊಲೀಸರ ಹತ್ಯೆಗೆ ಸ್ಕೆಚ್ ವಿಚಾರದ ಬಗ್ಗೆಯೂ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಅವರಿಗೆ ಪ್ರೆರೇಪಣೆ ಕೊಟ್ಟವರು ಯಾರು? ಪೊಲೀಸ್ ವಾಹನದ ಮೇಲೆ ನಿಂತು ಭಾಷಣ ಮಾಡಲು ಅವಕಾಶ ಕೊಟ್ಟವರು ಯಾರು. ಆತನನ್ನು ಏಕೆ ಬಂಧಿಸಿಲ್ಲ? ಆತ ಎಲ್ಲಿ ಹೋದ? ಎಂದು ಪ್ರಶ್ನಿಸಿದರು.

ನೈಸ್ ಕಂಪನಿಗೆ 100 ಕೋಟಿ ರೂ.
ಬೆಂಗಳೂರಿನ ಅಕ್ರಮ ಕಟ್ಟಡಗಳ ಮಾಹಿತಿ ನೀಡುತ್ತೇನೆ. ಬಿಜೆಪಿಯ ನಾಯಕರು, ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ತೆರವುಗೊಳಿಸಲು ಸಿದ್ಧರಿದ್ದೀರಾ? ಮೈಸೂರಿನಲ್ಲೂ ಮಾಹಿತಿ ಕೊಡುತ್ತೇನೆ. ಸರ್ಕಾರದ ಭೂಮಿ ನೈಸ್ ಕಂಪನಿಗೆ 100 ಕೋಟಿ ಕೊಟ್ಟು ಖರೀದಿ ಮಾಡಲಾಗಿದೆ. ಗಲಭೆ ಮಾಡಿದವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ. ಬುಲ್ಡೋಜ್ ಮಾಡಿದರೆ ಯಾರಿಗೂ ಲಾಭ ಇಲ್ಲ. ಸಂಪತ್ತು ಲೂಟಿ ಮಾಡಿರುವವರ ಬೆಂಕಿ ಹಚ್ಚುವವರ ವಿರುದ್ಧ ಕಾರ್ಯಾಚರಣೆ ಮಾಡಿ ಎಂದು ಸವಾಲು ಹಾಕಿದರು.
ಬಿಜೆಪಿ ಸರ್ಕಾರವೇ ಅಸಮರ್ಥ ಸರ್ಕಾರ. ಸಮಸ್ಯೆಗೆ ಪರಿಹಾರ ಕೊಡಲು ಸಾಧ್ಯವಾಗದ ಸರ್ಕಾರ. ಸಿಎಂ ಬರೀ ಬಾಯಿ ಮಾತಿನಲ್ಲಿ ಹೇಳುತ್ತಾರೆ. ದೆಹಲಿ ಆರ್ಎಸ್ಎಸ್ ಮುಖಂಡರಿಗೆ ತೋರಿಸುವುದಲ್ಲ. ನೀವು ಯಾರನ್ನೋ ಮೆಚ್ಚಿಸಲು ಸಿಎಂ ಅಲ್ಲ. ಜನರನ್ನು ಮೆಚ್ಚಿಸಲು ನೀವು ಅಧಿಕಾರ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರು ಬಿಜೆಪಿ ಜತೆ ಡೀಲ್
ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದಿಂದ ದೆಹಲಿಗೆ ಓಡಿಸಬೇಕು ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸಲು ಸಿದ್ದರಾಮಯ್ಯ ಮಾತೃಪಕ್ಷದ ವಿರುದ್ಧವೇ ಏನೆಲ್ಲಾ ಷಡ್ಯಂತ್ರ ನಡೆಸಿದರು ಎಂಬುದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಎಳೆಎಳೆಯಾಗಿ ಬಿಡಿಸಿಟ್ಟರು.
2008-09ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ʼಆಪರೇಷನ್ ಕಮಲದ ಸರಕಾರʼವನ್ನು ಶತಾಯಗತಾಯ ಉಳಿಸಲು ಸಿದ್ದರಾಮಯ್ಯ ಅವರು ಬಿಜೆಪಿ ಜತೆ ಡೀಲ್ ಮಾಡಿಕೊಂಡು ಎಷ್ಟು ಹಣ ಪಡೆದುಕೊಂಡರು ಹಾಗೂ ಆ ನಂತರ ಎದುರಾದ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಯಾವ ರೀತಿ ಒಳಒಪ್ಪಂದ ಮಾಡಿಕೊಂಡರು ಎಂಬುದು ನನಗೆ ಗೊತ್ತಿದೆ. ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಈ ಬಗ್ಗೆ ಮಾತನಾಡಲಿ. ಬಿಜೆಪಿ "ಬಿ' ಟೀಂ ನಾನಾ ಅಥವಾ ಸಿದ್ದರಾಮಯ್ಯನಾ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ಹೆಲಿಕಾಪ್ಟರ್ ಜರ್ನಿ ರಹಸ್ಯ ಬಿಚ್ಚಿಟ್ಟ ಮಾಜಿ ಸಿಎಂ
ಮಾತು ಮುಂದುವರೆಸಿದ ಮಾಜಿ ಮುಖ್ಯಮಂತ್ರಿ ಎಚ್ಡಿಕೆ, "2008ರಲ್ಲಿ ಇದೇ ಸುಳ್ಳುರಾಮಯ್ಯನಾದ ನೀವು ಮತ್ತು ಅಂದಿನ ಮುಖ್ಯಮಂತ್ರಿ ಒಂದೇ ಹೆಲಿಕಾಪ್ಟರ್ನಲ್ಲಿ ಒಟ್ಟಿಗೆ ಹಾವೇರಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದಿರಿ. ಆಗ ನೀವಿಬ್ಬರೂ ಏನು ಚರ್ಚೆ ಮಾಡಿಕೊಂಡು ಬಂದಿರಿ? ಆಗ ನಡೆದ 8 ವಿಧಾನಸಭೆ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದು ಮೂರು ಸೀಟು ನಾನು ಗೆದ್ದೆ. ಒಂದು ಸೀಟನ್ನೂ ನೀವು (ಸಿದ್ದರಾಮಯ್ಯ) ಗೆಲ್ಲಲಿಲ್ಲ ಏಕೆ? ಆಗ ನೀವು ಬಿಜೆಪಿ ಬಿ ಟೀಂ ಆಗಿರಲಿಲ್ಲವಾ? ಅವತ್ತು ನಿಮಗೆ ಎಷ್ಟು ಹಣ ಸಂದಾಯ ಆಯಿತು ಎಂಬುದನ್ನು ನಿಮಗೆ ಹಣ ತಂದುಕೊಟ್ಟವರೇ ನನಗೆ ಹೇಳಿದ್ದಾರೆ. ಈಗ ಹೇಳಿ, ಯಾರು ಬಿಜೆಪಿ ಬಿ ಟೀಂ? ನಮ್ಮಪ್ಪನ ಹೆಸರಿನಲ್ಲಿ ಪ್ರಮಾಣ ಮಾಡಬೇಕಾ ನಿಮಗೆ?" ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಈ ಸರಕಾರ ಬರಲು ಅವರೇ ಕಾರಣ
ಮಾತೆತ್ತಿದರೆ ಸಿದ್ದರಾಮಯ್ಯ ಈ ಸರಕಾರವನ್ನು ಬೈಯ್ಯುತ್ತಾರೆ. ಆದರೆ ಈ ಸರಕಾರ ಬರಲು ಅವರೇ ಕಾರಣ. ಅವರು ನಡೆಸಿದ ಷಡ್ಯಂತ್ರದಿಂದಲೇ ಈ ಸರಕಾರ ಬಂತು. ಮಾತೆತ್ತಿದರೆ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತಾರೆ. ನಿಮ್ಮ ಪಕ್ಷದ ಶಾಸಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರತಿ ಸಭೆಯಲ್ಲೂ ಅವರು ಸಂದಾಯ ಮಾಡುತ್ತಿದ್ದ ರೀತಿಯಲ್ಲಿ ನಾನು ಸಂದಾಯ ಮಾಡಬೇಕಿತ್ತಾ? ಕೆಲ ಅಧಿಕಾರಿಗಳನ್ನು ನಾನು ಸಿಎಂ ಆಗಿದ್ದಾಗ ಬಾಗಿಲಿಗೂ ಬಿಟ್ಟುಕೊಂಡಿರಲಿಲ್ಲ. ಆದರೆ, ಅವರು ಜಾತಿ ಮತ್ತು ಹಣದ ಕಾರಣಕ್ಕೆ ಅಂಥವರಿಗೆಲ್ಲ ಮಣೆ ಹಾಕಿದರು. ನಾನು ಜಾತಿ ಬಳಸಿ ಅಧಿಕಾರ ನಡೆಸಲಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ನೇರ ವಾಗ್ದಾಳಿ ನಡೆಸಿದರು.
ನಿಮ್ಮ ನಾಲಿಗೆಯಲ್ಲಿ ಮೂಳೆ ಇದೆಯಾ? ಎಂದು ಸಿದ್ದರಾಮಯ್ಯಗೆ ಕೇಳಿದ ಎಚ್ಡಿಕೆ, ಹತ್ತೇ ನಿಮಿಷದಲ್ಲಿ ಸಂತೋಷ್ ಆತ್ಮಹತ್ಯೆ ಪ್ರಕರಣದ ಹಿಂದಿರುವ ಸತ್ಯವನ್ನು ಜನರ ಮುಂದೆ ಇಡಬಹುದು. ಸರಕಾರಕ್ಕೆ ಇಷ್ಟನ್ನು ಹೇಳುವ ಧೈರ್ಯ ಸಿದ್ದರಾಮಯ್ಯ ಅವರಿಗಿದೆಯಾ? ನಾನೇನು ಬಿಜೆಪಿ ಸರಕಾರಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದೀನಾ? ನನ್ನ ಹೋರಾಟದಿಂದಲೇ ಯಡಿಯೂರಪ್ಪ ಬಿಜೆಪಿ ಬಿಟ್ಟರು. ಅದರ ಲಾಭದಿಂದ ಸಿಎಂ ಆದ ವ್ಯಕ್ತಿ ಈಗ ಸಂತೆ ಭಾಷಣ ಮಾಡುತ್ತಿದ್ದಾರೆ ಎಂದು ಛೇಡಿಸಿದರು.

ಸಿದ್ದರಾಮಯ್ಯ ಸರಕಾರದ ವೈಫಲ್ಯದಿಂದಲೇ ಹಂಡೀಭಾಗ್ ಸಾವು
ಪೊಲೀಸ್ ಅಧಿಕಾರಿ ಕಲ್ಲಪ್ಪ ಹಂಡಿಭಾಗ್ ಅವರು ಮೃತಪಟ್ಟಾಗ ನಾನು ಅವರ ಪರವಾಗಿ ಹೋರಾಟ ಮಾಡಿದೆ. ಆಗ ನಾನು ರಾಜಕೀಯ ಮಾಡಲಿಲ್ಲ. ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಿದೆ. ಅಂದಿನ ಸಿದ್ದರಾಮಯ್ಯ ಸರಕಾರದ ವೈಫಲ್ಯದಿಂದಲೇ ಹಂಡೀಭಾಗ್ ಸಾವಿಗೀಡಾದರು. ಅದಕ್ಕೆ ಬಿಜೆಪಿ ಕೂಡ ಕಾರಣ. ಆ ಪಕ್ಷದ ಶಾಸಕರು ಅಲ್ಲಿ ಏನೆಲ್ಲಾ ಮಾಡಿದ್ದರು ಎನ್ನುವುದು ಸರಕಾರಕ್ಕೆ ಗೊತ್ತಿತ್ತು. ಹಾಗೆಯೇ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನೂ ಅರೆಸ್ಟ್ ಮಾಡಿ ಎಂದು ನಾನು ಹೇಳಿದೆನಾ? ಎಲ್ಲದರಲ್ಲೂ ವಿನಾಕಾರಣ ರಾಜಕಾರಣ ಮಾಡಬಾರದು. ದ್ವೇಷವಿದ್ದರೆ ಅದು ಬೇರೆ. ಒಂದು ವೇಳೆ ಜೈಲಿಗೆ ಹೋಗಿ ಬಂದ ಮೇಲೆ ನಿರಪರಾಧಿ ಎಂದಾದರೆ ಏನು ಮಾಡುವುದು? ದಾಖಲೆ ಇದ್ದರೆ ಜೈಲಿಗೆ ಕಳುಹಿಸಿ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನಾಯಕರು ವೈಯಕ್ತಿಕ ನೆಲೆಗಟ್ಟಿನಲ್ಲಿ, ದ್ವೇಷದಿಂದ ಹೋರಾಟ ಮಾಡ್ತಿದ್ದಾರೆ. ಸರಕಾರ ಐದೇ ನಿಮಿಷದಲ್ಲಿ ಇದೆಲ್ಲವನ್ನು ಬಗೆಹರಿಸಬಹುದು. ಪಾರದರ್ಶಕತೆ ಇದ್ದರೆ ಎಲ್ಲವನ್ನೂ ಜನರ ಮುಂದೆ ಇಡಬಹುದು. ಆದರೆ, ಸರಕಾರ ಅದಾವುದನ್ನೂ ಮಾಡದೇ ಸುಮ್ಮನಿದೆ ಎಂದು ಅವರು ದೂರಿದರು.

ಯಾರೊಂದಿಗೂ ಮೈತ್ರಿ ಇಲ್ಲ
ರಾಜ್ಯದಲ್ಲಿ ಉಂಟಾಗಿರುವ ಧಾರ್ಮಿಕ ನಂಬಿಕೆಗಳ ಕುರಿತ ಗದ್ದಲಗಳನ್ನು ಬಗೆಹರಿಸಲು ಸರಕಾರ ಕೂಡಲೇ ಎಲ್ಲ ಧರ್ಮಗಳ ಮುಖಂಡರ ಸಭೆ ಕರೆದು ಚರ್ಚೆ ನಡೆಸಬೇಕು. ಈ ಮೂಲಕ ಸ್ಪಷ್ಟವಾದ ಸಂದೇಶ ರವಾನೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯ ಮಾಡಿದರು.
ಬಿಜೆಪಿ ಜೊತೆಯಾಗಲಿ, ಯಾರ ಜತೆಯೂ ನಾನು ಮೈತ್ರಿ ಮಾಡಿಕೊಳ್ಳುವುದಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು 150 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಿವೆ. ಇವರಿಗೆ ಬಹುಮತ ಬಂದ ಮೇಲೆ ನನ್ನನ್ನು ಯಾವ ಊರು ದಾಸಯ್ಯ ಬೆಂಬಲ ಕೊಡಿ ಎಂದು ಕೇಳುತ್ತಾನೆ? 150 ಸೀಟು ಗೆಲ್ಲುವ ಉಮೇದು ಇರುವವರಿಗೆ ಮೈತ್ರಿ ವಿಚಾರ ಏಕೆ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯರನ್ನು ಎಚ್.ಡಿ. ಕುಮಾರಸ್ವಾಮಿ ಕುಟುಕಿದರು.












Click it and Unblock the Notifications