ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್ಗೆ ಬಾ ಅಂದಿಲ್ಲ, ಬಿಜೆಪಿಗೆ ಮಾತ್ರ ಹೋಗಬೇಡ ಅಂದಿದ್ದಾರೆ: ಜಿಡಿಟಿ
ಮೈಸೂರು, ಜುಲೈ 21: ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ನಾನಾ ರಾಜಕೀಯ ಪಕ್ಷಗಳ ಈಗಿನಿಂದಲೇ ತಯಾರಿ ನಡೆಸಿವೆ. ಆದರೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ನಡೆ ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ.
ಸದ್ಯ ಜಿಟಿ ದೇವೇಗೌಡ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷದ ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಿಲ್ಲ. ಇತ್ತ ಕಾಂಗ್ರೆಸ್ಗೆ ಸೇರ್ಪಡೆ ಆಗುತ್ತಾರೆ ಎಂಬ ನಿರ್ಧಾರವನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಹಾಗಂತ ಬಿಜೆಪಿ ಸಂಗವನ್ನೂ ತೊರೆದಿಲ್ಲ. ಈ ಎಲ್ಲಾ ಕಾರಣಗಳಿಂದ ಜಿಟಿಡಿ ನಡೆ ಬಗ್ಗೆ ಯಾರಿಗೂ ಏನು ತಿಳಿಯದಾಗಿದೆ. ಜೊತೆಗೆ ಜಿ.ಟಿ.ದೇವೇಗೌಡರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಗುರುವಾರ ಮೈಸೂರಿನಲ್ಲಿ ಮಾತನಾಡಿದ ದೇವೇಗೌಡ, ಕಾಂಗ್ರೆಸ್ನಿಂದ ಆಹ್ವಾನವಿದಿಯೇ ಎಂಬ ಪ್ರಶ್ನೆಗೆ ಉತ್ತರಿಸಿ, " ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಾ ಎಂದು ಕರೆದಿಲ್ಲ. ಬಿಜೆಪಿಗೆ ಮಾತ್ರ ಹೋಗಬೇಡ ಅಂದಿದ್ದರು, ಆದರೆ ಜೆಡಿಎಸ್ನಲ್ಲೇ ಇರು ಎಂದೂ ಹೇಳಿಲ್ಲ. ಈ ಬಗ್ಗೆ ಅವರ ಹೇಳಿಕೆಯನ್ನು ಮೊದಲ ಬಾರಿಗೆ ಬಹಿರಂಗವಾಗಿ ಹೇಳುತ್ತಿದ್ದೇನೆ. ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂಬುದನ್ನು ಇನ್ನೂ ಎರಡು ಮೂರು ತಿಂಗಳಿನಲ್ಲಿ ತೀರ್ಮಾನ ಮಾಡುತ್ತೇನೆ" ಎಂದರು.

ಸಿದ್ದರಾಮಯ್ಯ ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತಿರುವ ಕಾರಣ ಪುನಃ ಅದೇ ಕ್ಷೇತ್ರಕ್ಕೆ ಬರಲು ಆತಂಕವಿದೆ. ಸಿದ್ದರಾಮಯ್ಯರಿಗೆ ಸಿಎಂ ಆಗುವ ಆಸೆ ಇದ್ದು, ಗೆಲ್ಲಲು ಸುಲಭ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಅಲ್ಲದೆ ಚುನಾವಣಾ ಸಂದರ್ಭದಲ್ಲಿ ರಾಜ್ಯ ಪ್ರವಾಸ ಮಾಡಬೇಕು. ಅದಕ್ಕಾಗಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವುದಿಲ್ಲ ಎಂದರು.
ಸಿದ್ದರಾಮಯ್ಯಗೆ ತಿರುಗೇಟು
ಈಗಿನ ಚಾಮುಂಡೇಶ್ವರಿ ಶಾಸಕ ಏನು ಕಡೆದು ಕಟ್ಟೆ ಹಾಕಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಸಾಫ್ಟ್ ಆಗಿಯೇ ತಿರುಗೇಟು ಕೊಟ್ಟ ಶಾಸಕ ಜಿ.ಟಿ ದೇವೇಗೌಡ, ಸಿದ್ದರಾಮಯ್ಯ ಶಾಸಕ, ಸಚಿವ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಎಲ್ಲಾ ಆದವರು. ನಾನು ಕೇವಲ ಶಾಸಕ ಕೆಲವು ತಿಂಗಳ ಮಾತ್ರ ಮಂತ್ರಿಯಾಗಿದ್ದೆ. ನಾನು ಸಿದ್ದರಾಮಯ್ಯ ನವರಷ್ಟು ಕೆಲಸ ಮಾಡಲು ಸಾಧ್ಯನಾ?, ನಾನು ಯಾವತ್ತು ನಾನೇ ಅಭಿವೃದ್ಧಿ ಮಾಡಿದ್ದೇನೆಂದು ಎಲ್ಲೂ ಹೇಳಿಲ್ಲ. ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ್ಧಾರೆ ಎಂದು ಕ್ರೆಡಿಟ್ ಕೊಟ್ಟಿದ್ದೇನೆ. ನಾನು ಏನು ಅಭಿವೃದ್ಧಿ ಕಾರ್ಯ ಮಾಡಿದ್ದೇನೆಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications