ಮೈಸೂರು ಮೃಗಾಲಯದಲ್ಲಿ ಈಗ ಪ್ರಾಣಿಗಳಿಗೂ ಷವರ್ ಸ್ನಾನ; ಜನರಿಂದ ಮೆಚ್ಚುಗೆ
ಮೈಸೂರು, ಮಾರ್ಚ್ 20: ದಿನೇ ದಿನೇ ಹೆಚ್ಚುತ್ತಿರುವ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ನಾವು ಫ್ಯಾನ್, ಏರ್ ಕಂಡೀಷನರ್ ಅಥವಾ ಪದೇ ಪದೇ ಸ್ನಾನ ಮಾಡಿ ಶರೀರವನ್ನು ತಂಪಾಗಿ ಇಟ್ಟುಕೊಳ್ಳುತ್ತೇವೆ. ಕಾಡಿನಲ್ಲಿರುವ ಪ್ರಾಣಿಗಳಾದರೆ ಸಮೀಪದ ನೀರಿನ ತಾಣಕ್ಕೆ ಹೋಗಿ ಮೈ ತಂಪು ಮಾಡಿಕೊಳ್ಳುತ್ತವೆ. ಆದರೆ ಮಾನವನ ಕೃತಕ ಬಂಧನದಲ್ಲಿರುವ ಪ್ರಾಣಿಗಳು ಏನು ಮಾಡಬೇಕು? ಏಕೆಂದರೆ ಅವಕ್ಕೆ ಮಾತೇ ಬರುವುದಿಲ್ಲವಲ್ಲ.
ಆದರೆ ಪ್ರಾಣಿಗಳ ಕಷ್ಟವನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿರುವ ಮೈಸೂರಿನ ಜಯಚಾಮರಾಜ ಮೃಗಾಲಯದ ಅಧಿಕಾರಿಗಳು, ಪ್ರಾಣಿಗಳಿಗೂ ಷವರ್ ವ್ಯವಸ್ಥೆ ಕಲಿಸಿಕೊಟ್ಟು ಮಾವೀಯತೆ ಮೆರೆದಿದ್ದಾರೆ. ಪ್ರಾಣಿಗಳ ಶರೀರವನ್ನು ತಂಪಾಗಿಡಲು ಮೃಗಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ನಂಜನಗೂಡು; ಗೌತಮ ಪಂಚ ಮಹಾರಥೋತ್ಸವಕ್ಕೆ ಕೋವಿಡ್ ಅಡ್ಡಿ
ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳಿಗಾಗಿ ನೀರು ಸಿಂಪಡಿಸುವ ಯಂತ್ರಗಳು ಮತ್ತು ಆನೆಗಳಿಗಾಗಿ ವಿಶೇಷವಾಗಿ ಸಿದ್ಧಪಡಿಸಿರುವ ಶವರ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಸಿಗೆ ಬಂದರೆ ಸಾಕು ಮೂಕ ಪ್ರಾಣಿಗಳ ವೇದನೆ ಹೇಳತೀರದು. ಇದನ್ನು ಅರಿತುಕೊಂಡಿರುವ ಅಧಿಕಾರಿಗಳು, ಮೃಗಾಲಯದ ಪ್ರಾಣಿಗಳಿಗೆ ಸ್ಪ್ರಿಂಕ್ಲರ್ನ್ನು ಅಳವಡಿಸಿದ್ದಾರೆ. ಈ ಮೂಲಕ ಪ್ರಾಣಿಗಳ ಮೇಲೆ ನೀರು ಸಿಂಚನ ಮಾಡಲಾಗುತ್ತಿದೆ. ಪ್ರಾಣಿಗಳು ತಂಪಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ.
ಪ್ರತಿಯೊಂದು ಪ್ರಾಣಿಯ ಪಂಜರದ ಬಳಿಯೂ ನೀರಿನ ಸ್ಪ್ರಿಂಕ್ಲರ್ನ್ನು ಅಳವಡಿಸಲಾಗಿದೆ. ಮಧ್ಯಾಹ್ನದ ವೇಳೆ ಈ ಸ್ಪ್ರಿಂಕ್ಲರ್ ಚಾಲನೆ ಮಾಡಲಾಗುತ್ತದೆ. ಸ್ಪ್ರಿಂಕ್ಲರ್ಗಳಿಂದ ಚಿಮ್ಮುವ ನೀರನ್ನು ಮೃಗಾಲಯದ ಪ್ರಾಣಿಗಳು ಎಂಜಾಯ್ ಮಾಡುತ್ತಿವೆ.
ಇದರ ಜೊತೆಗೆ ಬೇಸಿಗೆ ಹಿನ್ನೆಲೆ ಪ್ರಾಣಿಗಳ ಆಹಾರ ಪದ್ಧತಿಯಲ್ಲೂ ಬದಲಾವಣೆ ಮಾಡಲಾಗಿದೆ. ಸಸ್ಯಹಾರಿ ಪ್ರಾಣಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ನೀಡಲಾಗುತ್ತಿದೆ. ಎಳನೀರು ಸೇರಿದಂತೆ ದ್ರವರೂಪದ ಪದಾರ್ಥಗಳನ್ನ ನೀಡಲಾಗುತ್ತಿದೆ.
ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಆಡಳಿತ ಮಂಡಳಿ ಈ ಕ್ರಮಕೈಗೊಂಡಿದ್ದು, ಬೇಸಿಗೆ ಅಂತ್ಯವಾಗುವವರೆಗೆ ಈ ರೀತಿ ಪ್ರಾಣಿಗಳಿಗೆ ಕೊಡುವ ಆಹಾರ ಪದ್ಧತಿಯಲ್ಲೂ ಬದಲಾವಣೆ ಇರುತ್ತದೆ. ಇದರ ಜೊತೆ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೂ ತಂಪಾದ ವಾತಾವರಣ ನಿರ್ಮಾಣವಾಗಿದೆ.
ಪ್ರಾಣಿಗಳಿಗೆ ತಂಪಾದ ವಾತಾವರಣ ನಿರ್ಮಾಣ ಮಾಡಿರುವುದರಿಂದ ಝೂನ ಪ್ರಾಣಿಗಳು ಲವಲವಿಕೆಯಿಂದ ಇವೆ. ಅಧಿಕಾರಿಗಳ ಈ ಪ್ರಯತ್ನಕ್ಕೆ ಪ್ರವಾಸಿಗರು ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ.