ಶೋಭಾ ಫ್ಯಾಕ್ಟರ್: ಮೈಸೂರಿನಲ್ಲಿ ಬಿಜೆಪಿ ಸೂರು ಸುಭದ್ರವಿಲ್ಲ
ಮೈಸೂರು, ಮಾರ್ಚ್ 12: ಮೈಸೂರು ಜಿಲ್ಲೆಯಲ್ಲಿ ಕಳೆದ ವಿಧಾಸನಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಾಜ್ಯ ಬಿಜೆಪಿಗೆ ಈಗ ಲೋಕಸಭೆ ಚುನಾವಣೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ ಎಂಬಂತಾಗಿದೆ. ಎರಡೂ ಸಂದರ್ಭಗಳಲ್ಲಿ ಭಿನ್ನಮತವೇ ಮೇಲುಗೈ ಆಗಿದೆ. ವಿಧಾಸನಭೆ ಚುನಾವಣೆಯಲ್ಲಿ ಅದರ ಸಂಪೂರ್ಣ ಲಾಭ ಪಡೆದಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಒಬ್ಬ ಮುಖ್ಯಮಂತ್ರಿಯಾಗಿಯೂ ಸ್ವಂತ ಜಿಲ್ಲೆಯ ಮೇಲೆ ಮತ್ತಷ್ಟು ಹಿಡಿತ ಸಾಧಿಸಿದ್ದಾರೆ.
ಆದರೆ ಆಂತರಿಕ ಸಮಸ್ಯೆಗಳಿಂದ ನರಳುತ್ತಿರುವ ಬಿಜೆಪಿಗೆ ಮೈಸೂರಿನ ಸೂರು ಅಭದ್ರವಾಗಿದೆ. ಮುಖ್ಯವಾಗಿ, ಶೋಭಾ ಕರಂದ್ಲಾಜೆ ಫ್ಯಾಕ್ಟರ್ ಬಿಜೆಪಿಯನ್ನು ಬಾಧಿಸತೊಡಗಿದೆ. ಅತ್ತ ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡರಿಗೆ ಸೂರು ಕಲ್ಪಿಸಲು ಅಲ್ಲಿಂದ ಹೊರಬಿದ್ದ ಶೋಭಾ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಆಶ್ರಯ ಪಡೆಯಲು ಯತ್ನಿಸಿದ್ದಾರೆ. ಇಲ್ಲಿ ಬಿಜೆಪಿ ಕಟ್ಟಾಳು ಶೋಭಾ ಪ್ರವೇಶಕ್ಕೆ ತಡೆಯೊಡ್ಡಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಏನನ್ನುತ್ತಾರೋ ಎಂಬ ಭಯವೂ ಕಾಡುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಮೈಸೂರಿನಲ್ಲೀಗ ನಿಸ್ತೇಜ
ಒಂದು ವೇಳೆ ಶೋಭಾ ಅವರು ಅಲ್ಲಿಂದ ಹೊರಬಿದ್ದು, ಮೈಸೂರಿನತ್ತ ಮುಖ ಮಾಡಿದರೆ ಏನು ಗತಿ ಎಂಬುದು ಮೈಸೂರು ಬಿಜೆಪಿ ನಾಯಕರನ್ನು ಬಹುವಾಗಿ ಕಾಡಲಾರಂಭಸಿದೆ. ಹಾಗೆ ನೋಡಿದರೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಶೋಭಾ ಕರಂದ್ಲಾಜೆ ಅವರಿಗೆ ಜಿಲ್ಲೆಯ ಮೇಲೆ ಒಳ್ಳೆಯ ಹಿಡಿತ/ ಗುಡ್ ವಿಲ್ ಇತ್ತು. ಆದರೆ ಕಾಲಾಂತರದಲ್ಲಿ ಅದು ನಿಸ್ತೇಜಗೊಂಡಿದೆ.

ಶೋಭಾ ಎಂಟ್ರಿ ವಿರುದ್ಧ ಸಿಎಚ್ ವಿ ಗರಂ
ಮುಖ್ಯವಾಗಿ ಟಿಕೆಟ್ ಆಕಾಂಕ್ಷಿ ಸಿಎಚ್ ವಿಜಯಶಂಕರ್ ಅವರು ಶೋಭಾ ಎಂಟ್ರಿ ವಿರುದ್ಧ ಗರಂ ಆಗಿದ್ದಾರೆ. 'ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಶೋಭಾ ಕರಂದ್ಲಾಜೆ ಅವರ ಪಟ್ಟಾಭಿಷೇಕವಾದಾಗ ಪಕ್ಷಕ್ಕೆ ಉಂಟಾದ ಹಾನಿಯನ್ನು ಮರೆಯುವ ಹಾಗಿಲ್ಲ. ಶೋಭಾಗೆ ಪಟ್ಟ ಕಟ್ಟುವ ಭರದಲ್ಲಿ ಸ್ಥಳೀಯ ಸಂಸದರು, ಶಾಸಕರು, ಹಿರಿಯ ನಾಯಕರನ್ನು ಕಾಲ ಕಸವಾಗಿ ಕಾಣಲಾಯಿತು. ಅದರ ಪರಿಣಾಮ ಘೋರವಾಗಿತ್ತು. ವಿಧಾನಸಭೆಯ ವೇಳೆಗೆ ಪಕ್ಷ ಮಕಾಡೆ ಮಲಗಿತು' ಎಂದು ಟಿಕೆಟ್ ಕೈತಪ್ಪುವ ಆತಂಕದಲ್ಲಿರುವ ವಿಜಯಶಂಕರ್ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ.

ವಿಜಯಶಂಕರ್ ಮೈಸೂರಿಗೆ ತಕ್ಕ ಅಭ್ಯರ್ಥಿ ?
1998 ಮತ್ತು 2004ರಲ್ಲಿ ಮೈಸೂರಿನ ದೊರೆಯನ್ನೇ ಎರಡು ಬಾರಿ ಭಾರಿ ಪ್ರಮಾಣದಲ್ಲಿ ಮಣಿಸಿದ್ದ ವಿಜಯಶಂಕರ್ ಅವರಿಗೆ ಟಿಕೆಟ್ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ ಅನ್ನುತ್ತಾರೆ ಅವರ ಬೆಂಬಲಿಗರು. ಜತೆಗೆ, ಸಿದ್ದರಾಮಯ್ಯ ಅವರ ಜಿಲ್ಲೆಯಲ್ಲಿ ಬಿಜೆಪಿ ಗೆಲವು ಕಾಣಲು ಕುರುಬ ಜನಾಂಗಕ್ಕೆ ಸೇರಿದ ವಿಜಯಶಂಕರ್ ಅವರು ತಕ್ಕ ಅಭ್ಯರ್ಥಿ ಎಂಬ ಮಾತುಗಳೂ ಕೇಳಿಬರುತ್ತಿವೆ.
ಅಥವಾ ಪಕ್ಷವು ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವೆಂಬಂತೆ ಅಪ್ಪಚ್ಚು ರಂಜನ್ ಅಥವಾ ಮಲ್ಲಿಕಾರ್ಜುನಪ್ಪಗೆ ಮಣೆ ಹಾಕುತ್ತದಾ? ಕಾದುನೋಡಬೇಕಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್. ಸಿದ್ದರಾಜು ಏನನ್ನುತ್ತಾರೆ? ಇಂದು ಅಥವಾ ನಾಳೆಯೊಳಗೆ ಉತ್ತರ ತಿಳಿಯಲಿದೆ.

ಟಿಕೆಟ್ ಆಕಾಂಕ್ಷಿ ಸಿಎಚ್ ವಿಜಯಶಂಕರ್ ಯಾರು ಏನು?
1. 1994 ರಲ್ಲಿ ಹುಣಸೂರು ವಿಧಾನ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ, 2. 1998 ರಲ್ಲಿ ಮೈಸೂರು ಲೋಕಸಭಾ ಸದಸ್ಯರಾಗಿ ಆಯ್ಕೆ
3. 1999 ರಲ್ಲಿ ನಡೆದ ಮಧ್ಯಂತರ ಲೋಕಸಭಾ ಚುನವಾಣೆಯಲ್ಲಿ ಪರಾಜಿತರಾದರು 4. ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿದ್ದರು
5. 2004 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆ 6. ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದರು
7. 2009 ರಲ್ಲಿ ಲೋಕಸಭಾ ಚುನವಾಣೆಯಲ್ಲಿ ಪರಾಜಿತರಾದರು 8. ಹಾಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ಮತ್ತು
9. ಹಾಲಿ ಕರ್ನಾಟಕ ವಿಧಾನಪರಿಷತ್ ಸದಸ್ಯರು

ಈ ಬಾರಿಯೂ ವಿಜಯಶಂಕರ್ ಮತ್ತು ವಿಶ್ವನಾಥ್ ಮಧ್ಯೆ ಪೈಪೋಟಿ
2009ರ ಚುನಾವಣೆಯಲ್ಲಿ ಸಿಎಚ್ ವಿಜಯಶಂಕರ್ ಅವರು ಕಾಂಗ್ರೆಸ್ಸಿನ ಅಡಗೂರು ಎಚ್ ವಿಶ್ವನಾಥ್ ವಿರುದ್ಧ ಪರಾಜಿತರಾಗಿದ್ದರು. ಈ ಬಾರಿಯೂ ಸಿಎಚ್ ವಿಜಯಶಂಕರ್ ಮತ್ತು ಎಚ್ ವಿಶ್ವನಾಥ್ ಮಧ್ಯೆ ಪೈಪೋಟಿ ಏರ್ಪಡುತ್ತದಾ? ಇಂದು ಸಂಜೆಗೆ ಉತ್ತರ ದೊರೆಯುವ ಸಾಧ್ಯತೆಯಿದೆ.












Click it and Unblock the Notifications