ಮೈಸೂರಿನಲ್ಲಿ ಶಾಂತಿಯುತವಾಗಿ ಭಾರತ್ ಬಂದ್ ಆಚರಣೆ
ಮೈಸೂರು, ಜನವರಿ 8 : ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಅನೇಕ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ನ ಬಿಸಿ ಮೈಸೂರಿಗರಿಗೆ ಅಷ್ಟೇನೂ ತಟ್ಟಿಲ್ಲ.
ಇಂದು ಬೆಳಗ್ಗೆಯಿಂದ ಮೈಸೂರಿನ ಲೋಕಲ್ ಬಸ್ ಸಂಚಾರ ಪ್ರಾರಂಭವಾಗಿದ್ದು, ಜನರ ಬೇಡಿಕೆಯಂತೆ ಬಸ್ ಸಂಚಾರ ಸೇವೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಎಸ್.ಆರ್ ಟಿ.ಸಿ ಡಿವಿಷನ್ ಟ್ರಾಫಿಕ್ ಆಫೀಸರ್ ಶ್ರೀನಿವಾಸ್ , ಎಲ್ಲ ಕಡೆಗಳಲ್ಲೂ ಮಾಹಿತಿ ಪಡೆದು ಕೊಳ್ಳುತ್ತಿದ್ದೇವೆ. ಎಲ್ಲಿಯೂ ಗಲಾಟೆ ಗದ್ದಲಗಳು ಕೇಳಿ ಬಂದಿಲ್ಲ. ಈ ಹಿನ್ನೆಲೆ ಬಸ್ ಸಂಚಾರ ಸೇವೆ ಇದೆ ಎಂದು ಮಾಹಿತಿ ನೀಡಿದರು.
3,300ಬಸ್ ಗಳ ಪೈಕಿ ಬಹುತೇಕ 60ರಿಂದ 70% ರಷ್ಟು ಬಸ್ ಗಳು ಸಂಚಾರ ಆರಂಭಿಸುತ್ತಿವೆ. 20 ಕ್ಕೂ ಹೆಚ್ಚು ಜನರು ಬಂದರೆ ಆಯಾ ಸ್ಥಳಗಳಿಗೆ ಬಸ್ ಸಂಚಾರ ಸೇವೆ ಒದಗಿಸುತ್ತೇವೆ. ಇಲ್ಲಿಯವರೆಗೂ ಎಲ್ಲಿಯೂ ಗಲಾಟೆ ಅಥವಾ ಅವಘಡಗಳು ಕೇಳಿ ಬಂದಿಲ್ಲ. ಈ ಹಿನ್ನೆಲೆ ಬಸ್ ಸಂಚಾರ ಏರ್ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಚಾಮರಾಜ ನಗರ ಹಾಗೂ ಗುಂಡ್ಲುಪೇಟೆ , ಟಿ.ನರಸೀಪುರ , ಕೊಳ್ಳೇಗಾಲ ಭಾಗಕ್ಕೆ ಬಸ್ ಸೇವೆ ಇದ್ದು ಮಂಡ್ಯ, ಬೆಂಗಳೂರು, ರಾಮನಗರ , ಈ ಭಾಗಗಳಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಈ ಭಾಗದ ಪ್ರಯಾಣಿಕರು ಬಸ್ ಗಾಗಿ ಕಾದು ಕುಳಿತಿದ್ದಾರೆ. ಇನ್ನು ನಗರದಲ್ಲಿ ಯಾವುದೇ ಗಲಾಟೆ ನಡೆಯದೆ ಶಾಂತಿಯುತವಾಗಿ ಬಂದ್ ಆಚರಿಸಲಾಗುತ್ತಿದೆ.

ಪ್ರಧಾನಿ ಮೋದಿ ವಿರುದ್ಧ ಘೋಷಣೆ
ಇನ್ನು ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಎಐಟಿಯುಸಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ನರೇಂದ್ರ ಮೋದಿಯನ್ನು ಭೂತ ಎಂದು ಬಿಂಬಿಸುವ ಸಲುವಾಗಿ ವ್ಯಕ್ತಿಯೊಬ್ಬರು ಮುಖಕ್ಕೆ ಬಣ್ಣ ಬಳಿದುಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಇದೇ ವೇಳೆ ತಮಟೆ ಬಡಿದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಅಂಚೆ ನೌಕರರಿಂದ ಪ್ರತಿಭಟನೆ
ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಹೂಡಿರುವ ಮುಷ್ಕರಕ್ಕೆ ಮೈಸೂರಿನ ಅಂಚೆ ನೌಕರರೂ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೈಸೂರು ವಿಭಾಗದಲ್ಲಿರುವ 65 ಅಂಚೆ ಕಚೇರಿಗಳ ಸೇವೆ ಸ್ಥಗಿತಗೊಂಡಿದೆ. ನಗರದಲ್ಲಿರುವ 38 ಅಂಚೆ ಕಚೇರಿಗಳು ಬಂದ್ ಆಗಿದ್ದು ಪ್ರತಿಭಟನಾ ಮೆರವಣಿಗೆಯಲ್ಲಿ ಅಂಚೆ ನೌಕರರು ಪಾಲ್ಗೊಂಡಿದ್ದಾರೆ.

ಬೆಂಬಲ ಸೂಚಿಸಿದ ಬ್ಯಾಂಕ್ ನೌಕರರು
ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದಿಂದಲೂ ಪ್ರತಿಭಟನೆ ನಡೆಯಿತು. ನಗರದ ದೊಡ್ಡ ಗಡಿಯಾರ ಬಳಿಯ ಕಾರ್ಪೊರೇಷನ್ ಬ್ಯಾಂಕ್ ಬಳಿ ಜಮಾಯಿಸಿದ ಬ್ಯಾಂಕ್ ನೌಕರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಎರಡು ದಿನಗಳೂ ಬ್ಯಾಂಕ್ ಕಾರ್ಯನಿರ್ವಹಿಸದೇ ಕಾರ್ಮಿಕ ಸಂಘಟನೆಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದರು.

ಪರೀಕ್ಷೆ ಸ್ಥಗಿತಗೊಳಿಸಿದ ಪೊಲೀಸರು
ಮೈಸೂರಿನಲ್ಲಿ ಜಿಲ್ಲಾಡಳಿತದಿಂದ ಶಾಲಾ, ಕಾಲೇಜಿಗೆ ರಜೆ ಘೋಷಣೆ ಮಾಡಿದ್ದರೂ ಮೈಸೂರಿನ ಬಿಜಿಎಸ್ ವಿದ್ಯಾಪೀಠ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆ ನಡೆಯುತ್ತಿತ್ತು. ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಪರೀಕ್ಷೆ ನಡೆಸಿದ ಸಂಸ್ಥೆ, ನಿಯಮ ವಿರೋಧಿಸಿದ್ದರಿಂದ ಇಬ್ಬರು ಪೊಲೀಸರು ಪರೀಕ್ಷೆ ಸ್ಥಗಿತಗೊಳಿಸಿದರು.












Click it and Unblock the Notifications