ಸಾಲು-ಸಾಲು ರಜೆ: ಮೈಸೂರಿನ ಎಲ್ಲೆಲ್ಲೂ ಪ್ರವಾಸಿಗರ ದಂಡು
ಮೈಸೂರು, ಏಪ್ರಿಲ್ 15; ಬೇಸಿಗೆ ರಜೆಯ ಜೊತೆಗೆ ಸರ್ಕಾರಿ ಸಾಲು ರಜೆಗಳ ಹಿನ್ನಲೆಯಲ್ಲಿ ಪ್ರವಾಸಿಗರ ದಂಡು ಅರಮನೆ ನಗರಿ ಮೈಸೂರಿಗೆ ಹರಿದು ಬರುತ್ತಿದೆ. ಮೈಸೂರಿನ ಹೋಟೆಲ್ಗಳು ಭರ್ತಿಯಾಗುತ್ತಿದ್ದು, ಕೊರೊನಾ ನಂತರ ಮತ್ತೆ ಪ್ರವಾಸೋದ್ಯಮ ಗರಿಗೆದರಿದೆ.
ಅಂಬೇಡ್ಕರ್ ಜಯಂತಿ, ಗುಡ್ಫ್ರೈಡೇ ಹಾಗೂ ವಾರಾಂತ್ಯದ ಕಾರಣದಿಂದ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.
ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ನೂರಾರು ಪ್ರವಾಸಿಗರದ್ದೇ ಕಾರುಬಾರು ಕಂಡು ಬಂದಿತು. ಕೊರೊನಾ ಕಾರಣದಿಂದ ಪ್ರವಾಸೋದ್ಯಮ ಕ್ಷೇತ್ರ ಕಂಗೆಟ್ಟಿತ್ತು.

ಆದರೆ, ಈ ಬಾರಿಯ ಬೇಸಿಗೆ ರಜೆ, ಜೊತೆಯಾಗಿ ಬಂದಿರುವ ಸಾಲು-ಸಾಲು ಸರಕಾರಿ ರಜೆಗಳು ಪ್ರವಾಸೋದ್ಯಮ ನಂಬಿದ ಜನರಲ್ಲಿ ಸಂತಸ ಮೂಡಿಸಿದೆ. ವಿವಿಧ ರಾಜ್ಯ ಹಾಗೂ ವಿವಿಧ ದೇಶಗಳ ಸಾವಿರಾರು ಪ್ರವಾಸಿಗರು ಮೈಸೂರಿಗೆ ತಂಡೋಪತಂಡವಾಗಿ ಆಗಮಿಸಿದ್ದು, ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕೆಆರ್ಎಸ್, ನಂಜನಗೂಡು, ಶ್ರೀರಂಗಪಟ್ಟಣ, ನಿಮಿಷಾಂಬ, ತಲಕಾಡು ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಸ್ಥಳೀಯ ಪ್ರವಾಸೋದ್ಯಮ ಕಳೆ ಕಟ್ಟಿದೆ.
ಬೇಸಿಗೆ ರಜೆಯ ಜೊತೆಗೆ ಸಾಲು ಸಾಲು ರಜೆಗಳು ಇದ್ದ ಕಾರಣ ಪ್ರವಾಸಿಗರು ಕಳೆದ ಎರಡು-ಮೂರು ದಿನಗಳಿಂದ ಅರಮನೆ ನಗರಿಗೆ ಭೇಟಿ ನೀಡಲು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಮಕ್ಕಳ ಜೊತೆಗೆ ಪ್ರವಾಸಿಗರು ಅರಮನೆ, ಮೃಗಾಲಯಕ್ಕೆ ಭೇಟಿ ನೀಡಲು ಹೆಚ್ಚಿನ ಒಲವು ತೋರಿದರು.

ಇನ್ನೂ ಕೆಲವರು ಮೈಸೂರಿನ ಹೊರ ವಲಯದಲ್ಲಿರುವ ಕೆಆರ್ಎಸ್, ಚಾಮುಂಡಿ ಬೆಟ್ಟ ಸೇರಿದಂತೆ ಇತರ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲು ಉತ್ಸಾಹ ತೋರಿದರು. ಬೆಂಗಳೂರು ಅಲ್ಲದೆ ರಾಜ್ಯದ ನಾನಾ ಭಾಗದ ಪ್ರವಾಸಿಗರು ಮೈಸೂರಿನ ಕಡೆಗೆ ಆಗಮಿಸಿದ್ದರು.
ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ನಗರದ ಬಹುತೇಕ ಹೋಟೆಲ್ ರೂಂಗಳು ಭರ್ತಿಯಾಗಿದ್ದವು. ಕೆಲವರು ಹೋಟೆಲ್ ರೂಂ ಇಲ್ಲದೆ ಪರದಾಡಬೇಕಾಯಿತು.
"ಮೈಸೂರಿನ ಬಹುತೇಕ ಹೋಟೆಲ್ಗಳು ಬುಕ್ ಆಗಿವೆ. ಈ ಬಾರಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿನ ಕಡೆಗೆ ಭೇಟಿ ನೀಡಿದ್ದಾರೆ. ಕೊರೊನಾ ನಂತರ ಇದು ನಿಜಕ್ಕೂ ಸಂತಸ ಉಂಟು ಮಾಡಿದೆ. ಕೋವಿಡ್ ನಂತರ ಹೋಟೆಲ್ ಉದ್ಯಮ ನಿಧಾನವಾಗಿ ಗರಿಗೆದರುತ್ತಿದೆ. ಪ್ರವಾಸಿಗರು ನಿಧಾನವಾಗಿ ಮೈಸೂರಿನ ಕಡೆ ಮುಖ ಮಾಡಿದ್ದಾರೆ" ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.
ಕಳೆದ ಎರಡು ವರ್ಷದ ಹಿಂದೆ 5 ಲಕ್ಷ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿದ್ದರು. ಮೈಸೂರಿಗೆ ಅಂದಾಜು ಶೇ 60ರಷ್ಟು ಪ್ರವಾಸಿಗರು ನೆರೆಯ ಕೇರಳ, ತಮಿಳುನಾಡಿನಿಂದ ಆಗಮಿಸುತ್ತಾರೆ. ಉಳಿದಂತೆ ಬಹುತೇಕ ಪ್ರವಾಸಿಗರು ಆಂಧ್ರ ಪ್ರದೇಶ, ಮಹಾರಾಷ್ಟ್ರ, ವಿದೇಶಗಳಿಂದ ಆಗಮಿಸುತ್ತಾರೆ.
ಮೈಸೂರು ಅರಮನೆಗೆ 15ರಿಂದ 20 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಅರಮನೆಯ ಸೌಂದರ್ಯವನ್ನಲ್ಲದೇ, ಇತರ ಸ್ಥಳಗಳನ್ನು ಕಣ್ತುಂಬಿಕೊಂಡರು. ನಂತರ ದೇಶದಲ್ಲಿ ನಂ.1 ಮೃಗಾಲಯ ಎಂಬ ಕೀರ್ತಿಗೆ ಪಾತ್ರ ವಾಗಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೂ ಪ್ರವಾಸಿಗರ ದಂಡು ತೆರಳಿ ಸಂಭ್ರಮಿಸಿತು.
ಚಾಮುಂಡಿಬೆಟ್ಟಕ್ಕೆ ಬೆಳಗಿನಿಂದಲೇ ಪ್ರವಾಸಿಗರು ಆಗಮಿಸುತ್ತಿದ್ದುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೇ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳಿದ್ದರಿಂದ ದೇವಾಲಯದ ಸಿಬ್ಬಂದಿ ಪರದಾಡುವಂತಾಯಿತು.
ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಹಲವು ಭಕ್ತರು ದೇವಾಲಯದ ಹೊರಗಿ ನಿಂದಲೇ ದೇವಿಯ ದರ್ಶನ ಪಡೆದು ವಾಪಸ್ಸಾಗುವ ದೃಶ್ಯ ಕಂಡುಬಂತು.












Click it and Unblock the Notifications