ಮೈಸೂರಿನಲ್ಲಿ ಯುವಕರಿಂದ ಸ್ವಯಂ ರಕ್ತದಾನ
ಮೈಸೂರು, ಏಪ್ರಿಲ್ 10: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕ್ ಗಳಲ್ಲಿ ಉಂಟಾಗಿರುವ ರಕ್ತದ ತೀವ್ರ ಕೊರತೆಯನ್ನು ನೀಗಿಸಲು ಬಿ.ವೈ ವಿಜಯೇಂದ್ರ ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಇಂದು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 20 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದಾರೆ.
ರಕ್ತದಾನದ ನಂತರ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ""ಮೈಸೂರಿನಲ್ಲಿ ಕೊರೊನಾ ವೈರಸ್ ಭೀತಿ ಇದ್ದು, ಹೀಗಾಗಿ ಸಂಪೂರ್ಣ ಲಾಕ್ ಡೌನ್ ಆಗಿದ್ದರಿಂದ ರಕ್ತದಾನಕ್ಕೂ ಇದರ ಬಿಸಿ ತಟ್ಟಿದೆ. ಸಾಂಸ್ಕೃತಿಕ ನಗರಿಯಲ್ಲಿ ರಕ್ತದಾನಿಗಳ ಸಂಖ್ಯೆ ತೀರಾ ಇಳಿಮುಖವಾಗಿದ್ದು, ಇತರ ಚಿಕಿತ್ಸೆಗಳಿಗೂ ತೊಂದರೆಯಾಗುತ್ತಿದೆ'' ಎಂದು ಹೇಳಿದರು.

ಸದ್ಯ ರಾಜ್ಯ ಸರ್ಕಾರ ರಕ್ತದಾನ ಶಿಬಿರಗಳಿಗೂ ಬ್ರೇಕ್ ಹಾಕಿದ್ದು, ಪ್ರತಿದಿನ ಶೇ 60 ರಷ್ಟು ರಕ್ತದ ಕೊರತೆ ಎದುರಿಸುವಂತಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದೆ ವೈದ್ಯಕೀಯ ಕ್ಷೇತ್ರದಲ್ಲೂ ಅಪಾಯ ಸಂಭವಿಸುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ನಡೆಯುವ ಚಿಕಿತ್ಸೆಗಳಿಗೆ ಸುಮಾರು 300 ರಿಂದ 400 ಬಾಟಲ್ ಗಳಷ್ಟು ರಕ್ತ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಿ.ವೈ ವಿಜಯೇಂದ್ರ ಅವರ 20 ಕ್ಕೂ ಹೆಚ್ಚು ಅಭಿಮಾನಿಗಳು ಬಂದು ರಕ್ತದಾನ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವೆಂದರು.
ಈಗಾಗಲೇ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಲು ಮನೆಯಿಂದ ಕರೆದುಕೊಂಡು ಹೋಗಿ ರಕ್ತದಾನದ ನಂತರ ಸುರಕ್ಷಿತವಾಗಿ ಅವರ ಮನೆಗೇ ತಲುಪಿಸುವ ಉತ್ತಮ ವ್ಯವಸ್ಥೆ ಇದೆ. ಅಲ್ಲದೇ ರಕ್ತದಾನಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ.
ಇದರಿಂದ ಮುಂದೆ ಅವರಿಗೆ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅಗತ್ಯವಿದ್ದಾಗ ಪ್ರಮಾಣಪತ್ರ ತೋರಿಸಿ ಉಚಿತವಾಗಿ ರಕ್ತ ಪಡೆಯಬಹುದು. ರಕ್ತದಾನಿಗಳು ಸಂಪರ್ಕಿಸುವ ದೂರವಾಣಿ ಸಂಖ್ಯೆಗಳು ಈ ಕೆಳಗಿನಂತಿದೆ.
9243781900, 9243781901
ಬಿ.ವೈವಿಜಯೇಂದ್ರ ಅಭಿಮಾನಿ ಬಳಗದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾತನಾಡಿ, ನಮ್ಮ ಯುವನಾಯಕರಾದ ಬಿ.ವೈ.ವಿಜಯೇಂದ್ರಣ್ಣ ರವರ ಆದೇಶದ ಮೇರೆಗೆ ನಮ್ಮ ಸಂಘಟನೆಯ ವತಿಯಿಂದ ಉಚಿತ ಔಷಧಿಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಡಯಾಲಿಸಿಸ್ ಅಗತ್ಯ ಉಳ್ಳವರು, ಗರ್ಭಿಣಿಯರು ಮತ್ತು ರಕ್ತದ ಅಗತ್ಯ ಇರುವವರಿಗೆ ರಕ್ತದ ಕೊರತೆ ಇದೆ. ಅದನ್ನು ಮನಗಂಡು ನಮ್ಮ ಸಂಘಟನೆಯಿಂದ ರಕ್ತದಾನ ಮಾಡಲಾಗಿದ್ದು, ಇನ್ನುಮುಂದೆ ಪ್ರತಿದಿನ ಸ್ವಯಂಪ್ರೇರಿತರಾಗಿ ಎಲ್ಲ ಯುವಕರು ರಕ್ತದಾನ ಮಾಡಿ ಜೀವ ಉಳಿಸಿ ಎಂದು ಮನವಿ ಮಾಡಿದರು.












Click it and Unblock the Notifications