ತಿ.ನರಸೀಪುರ ಕುಂಭಮೇಳದ ಪೂರ್ಣ ಮಾಹಿತಿ ನೀಡಿದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ
ಮೈಸೂರು, ಫೆಬ್ರವರಿ 14: ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 17ರಿಂದ ಮೂರು ದಿನ ಕುಂಭ ಮೇಳ ನಡೆಯಲಿದೆ ಎಂದು ಮೈಸೂರಿನ ಆದಿಚುಂಚನಗಿರಿ ಮಠದ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.
1989ರಿಂದ ಆರಂಭವಾಗಿ ಪ್ರತಿ ಮೂರು ವಷ೯ಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಇಲ್ಲಿಯವರೆಗೆ 10ಕುಂಭ ಮೇಳ ನಡೆದಿದ್ದು, ಈ ಬಾರಿ 11ನೇ ಕುಂಭಮೇಳ ನಡೆಯಲಿದೆ. ಫೆ.17ರಂದು ಬೆಳಗ್ಗೆ 9ಕ್ಕೆ ತ್ರಯೋದಶಿ, ಶ್ರೀ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಅನುಜ್ಞೆ ಪುಣ್ಯಾಹ, ಗಣಹೋಮ ಪೂರ್ಣಾಹುತಿ ಅಭಿಷೇಕ ಮಹಾಮಂಗಳಾರತಿ ನಡೆಯಲಿದೆ.
ಸಂಜೆ 5ಕ್ಕೆ ನಡೆಯಲಿರುವ ಅಗಸ್ತ್ಯೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಞಾ ಕಾರ್ಯಕ್ರಮ ಹಾಗೂ ಅಂಕುರಾರ್ಪಣೆ ಕಾರ್ಯಕ್ರಮಕ್ಕೆ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡುವರು. ಅತಿಥಿಗಳಾಗಿ ಸಂಸದರಾದ ಪ್ರತಾಪ ಸಿಂಹ, ಆರ್.ಧ್ರುವನಾರಾಯಣ, ಎಲ್.ಆರ್.ಶಿವರಾಮೇಗೌಡ, ಮೈಸೂರು ಜಿ.ಪಂ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಭಾಗವಹಿಸುವರು. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು ಎಂದು ಸ್ವಾಮೀಜಿ ಹೇಳಿದರು.

ಫೆ.18ರಂದು ಬೆಳಗ್ಗೆ 11ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ಸಚಿವ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಶಾಸಕರಾದ ತನ್ವೀರ್ ಸೇಠ್, ಕೆ.ಮಹದೇವ್ , ಎಲ್.ನಾಗೇಂದ್ರ, ಬಿ.ಹರ್ಷವರ್ಧನ್, ಅನಿಲ್ ಕುಮಾರ್, ಎಸ್.ಎ.ರಾಮದಾಸ್, ರವೀಂದ್ರ ಶ್ರೀಕಂಠಯ್ಯ, ಎಂ.ಶ್ರೀನಿವಾಸ್ ಮೊದಲಾದವರು ಭಾಗವಹಿಸಲಿದ್ದಾರೆ.
ಈ ಸಂದರ್ಭ ಶ್ರೀಲಗಧಮಹರ್ಷಿ ಜ್ಯೋತಿರ್ ವಿಜ್ಞಾನ ಸಂಶೋಧನಾ ಸಂಸ್ಥೆಯ ಸ್ಥಾಪಕ ಡಾ.ಜಿ.ಬಿ.ಅರಮೇಶ ಶಾಸ್ತ್ರಿ ಅವರು ಮಾಘಸ್ನಾನದ ಮಹತ್ವ ಕುರಿತು ಉಪನ್ಯಾಸ ನೀಡುವರು. ಶಾಸಕ ಅಶ್ವಿನ್ ಕುಮಾರ್ ಅಧ್ಯಕ್ಷತೆ ವಹಿಸುವರು.
ಜ.19ರಂದು ಬೆಳಿಗ್ಗೆ 8.30ಕ್ಕೆ ವಿವಿಧ ಮಹಿಳಾ ಸಂಘಟನೆಯ ಮಹಿಳೆಯರಿಂದ ಸಾಮೂಹಿಕ ಲಲಿತಾ ಸಹಸ್ರನಾಮ ಪಠನ, 10ಕ್ಕೆ ಧರ್ಮಾಚಾರ್ಯರ ಯಾಗಶಾಲಾ ಪ್ರವೇಶ ಮತ್ತು ಚಂಡಿಕಾ ಹೋಮದ ಪೂರ್ಣಾಹುತಿ ನಡೆಯಲಿದ್ದು, ಬೆಳಿಗ್ಗೆ 9.35ರಿಂದ ಮಹೋದಯ ಪುಣ್ಯ ಮಾಘಸ್ನಾನ ಕಾರ್ಯ ಜರುಗಲಿದೆ.
ಅಲ್ಲದೇ, ಮಧ್ಯಾಹ್ನ 12ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಅತಿಥಿಗಳಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಪರಮೇಶ್ವರ ನಾಯಕ್, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಅಡಗೂರು ಎಚ್.ವಿಶ್ವನಾಥ್, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ, ಮಾಜಿ ಸಂಸದ ಜಿ.ಮಾದೇಗೌಡ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಇತರರು ಭಾಗವಹಿಸುವರು. ಸಚಿವ ಜಿ.ಟಿ.ದೇವೇಗೌಡ ಸಮಾರೋಪ ಭಾಷಣ ಮಾಡುವರು ಎಂದು ಸ್ವಾಮೀಜಿ ಮಾಹಿತಿ ನೀಡಿದರು.












Click it and Unblock the Notifications