ಪೊಲೀಸ್ ಠಾಣೆಯಲ್ಲಿ ನಡೆಯಿತು ಸೀಮಂತ ಕಾರ್ಯಕ್ರಮ
ಮೈಸೂರು,ನವೆಂಬರ್ 28:- ಪೊಲೀಸರೆಂದರೆ ಸಾಕು ಅವರಿಗೆ ಮಾನವೀಯತೆ ಇಲ್ಲ ಎನ್ನುವುದು ಸರಿಸುಮಾರು ಎಲ್ಲರಿಂದಲೂ ಕೇಳಿ ಬರೋ ಮಾತು. ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ಎಲ್ಲರೂ ಅಚ್ಚರಿ ಪಡೋ ಘಟನೆ ನಡೆದಿದೆ, ಆದರೆ ಪೊಲೀಸ್ ಠಾಣೆಗಳಲ್ಲಿ ಇವೆಲ್ಲ ಸಾಧ್ಯನಾ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ.
ಕಳೆದೊಂದು ವರ್ಷದಿಂದ ಪೊಲೀಸ್ ವೃತ್ತಿಗೆ ಸೇರಿಕೊಂಡ ರೂಪಾ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ವಿವಾಹವಾಗಿ ಎರಡು ವರ್ಷವಾಗಿದ್ದು, ಅವರ ಪತಿ ಫ್ಯಾಕ್ಟರಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಾರೆ. ರೂಪಾ ಗರ್ಭವತಿಯಾಗಿದ್ದು ಅವರಿಗೀಗ ಏಳು ತಿಂಗಳು. ಅದಕ್ಕಾಗಿ ಹೆಬ್ಬಾಳು ಪೊಲೀಸ್ ಠಾಣೆಯ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗಳು ರೂಪಾ ಅವರಿಗೆ ಸೀಮಂತ ಮಾಡಿದ್ದಾರೆ.
ಅರಿಶಿನ ಕುಂಕುಮ,ಫಲ-ತಾಂಬೂಲ ನೀಡಿ, ಮಡಿಲು ತುಂಬಿದ್ದಾರೆ. ಇದರಿಂದ ರೂಪಾ ತುಂಬಾ ಸಂತಸ ಪಟ್ಟಿದ್ದು, ನನ್ನ ಸಹೋದ್ಯೋಗಿಗಳು ನನಗೆ ಸೀಮಂತ ಮಾಡಿರುವುದು ಖುಷಿ ತಂದಿದೆ ಎಂದಿದ್ದಾರೆ. ಎಲ್ಲರಲ್ಲೂ ಪೊಲೀಸ್ ಅಂದರೆ ಕಠಿಣ ಹೃದಯಿಗಳು ಎಂಬ ಭಾವನೆ ಸುಳ್ಳಾಯಿತು.