ಮಳೆ ಬಂದರೆ ಕುದುರೆಮಾಳದ ಈ ಶಾಲೆ ಮುಳುಗುತ್ತದೆ!
ಮೈಸೂರು, ನವೆಂಬರ್ 2: ಮಳೆ ಬಂತೆಂದರೆ ಸಾಕು ಈ ಶಾಲೆ ಸೋರುತ್ತದೆ, ಕೊಠಡಿಗಳು ಬಿರುಕು ಬಿಟ್ಟಿದೆ. ಶೌಚಾಲಯಗಳು ನಿರ್ವಹಣೆ ಇಲ್ಲದೆ ಸೊರಗಿದೆ. ಇದು ನಗರ ಕೇಂದ್ರದಲ್ಲಿರುವ ಗೌತಮ ವಿದ್ಯಾರ್ಥಿನಿಲಯದ ಹಿಂಭಾಗದಲ್ಲಿರುವ ಕುದುರೆಮಾಳದ ಪೌರಕಾರ್ಮಿಕ ಮಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸ್ಥಿತಿ.
ಹಳ್ಳದ ಪ್ರದೇಶದಲ್ಲಿ ಈ ಶಾಲೆ ನಿರ್ಮಾಣವಾಗಿರುವುದರಿಂದ ಮಳೆ ನೀರೆಲ್ಲವೂ ಶಾಲೆ ಆವರಣದಲ್ಲಿ ಶೇಖರಣೆಯಾಗುತ್ತದೆ. ಕೊಠಡಿಗಳೆಲ್ಲವೂ ಅರ್ಧ ಭಾಗ ಮುಳುಗಡೆಯಾಗುತ್ತವೆ. ಶಿಥಿಲಗೊಂಡಿರುವ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದೆ. ಆದರೆ ಇನ್ನೂ ಕ್ರಮ ಆಗಿಲ್ಲ ಎಂದು ಸ್ಥಳೀಯ ಪೌರ ಕಾರ್ಮಿಕರು ಬುಧವಾರ ಶಾಲೆಗೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಪರಿಶೀಲನೆಗಾಗಿ ಭೇಟಿ ನೀಡಿದ ಸಂದರ್ಭದಲ್ಲಿ ದೂರಿದರು.
ಅದ್ದೂರಿ ಮೈಸೂರು ದಸರಾಗೆ ಖರ್ಚಾಗಿದ್ದೆಷ್ಟು?, ಲೆಕ್ಕ ಕೊಟ್ಟ ಸಚಿವರು
ಪೌರ ಕಾರ್ಮಿಕರ ಮಕ್ಕಳು ವೈದ್ಯರಾಗಬೇಕು, ಪೊಲೀಸ್ ಇಲಾಖೆ ಸೇರಬೇಕೆಂಬ ಆಸೆ ಹೊಂದಿದ್ದಾರೆ. ಆದರೆ ಅದಕ್ಕೆ ಬೇಕಾದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಪೌರ ಕಾರ್ಮಿಕರ ಮಕ್ಕಳು ಎಂಬ ಕಾರಣಕ್ಕೆ ತೀರ ಕಡೆಗಣನೆ ಮಾಡಲಾಗುತ್ತಿದೆ ಎಂದು ಶಾಲೆ ಪರಿಶೀಲಿಸಿದ ಎಂ.ಶಿವಣ್ಣ ಬೇಸರ ವ್ಯಕ್ತಪಡಿಸಿದರು.
ಬೇರೆಡೆಗೆ ಸೇರಿದ ಮಕ್ಕಳು; " ಮೂರು ವರ್ಷಗಳಿಂದಲೂ ಈ ಪರಿಸ್ಥಿತಿ ಇದೆ. ಅಲ್ಲದೇ ಪಕ್ಕದಲ್ಲಿ ಶೌಚಾಲಯದ ನೀರು ಹರಿಯುತ್ತದೆ. ಗಬ್ಬು ವಾಸನೆ, ಹದಗೆಟ್ಟ ಶೌಚಾಲಯ ಸೇರಿದಂತೆ ಇನ್ನಿತರ ಪೂರಕ ಸೌಲಭ್ಯಗಳ ಕೊರತೆ ಹಾಗೂ ಅವ್ಯವಸ್ಥೆಗಳಿಂದಲೇ ಈ ಶಾಲೆಯ 35ಕ್ಕೂ ಹೆಚ್ಚು ಮಕ್ಕಳನ್ನು ಪೋಷಕರು ಪಕ್ಕದ ಬೇರೆ ಶಾಲೆಗಳಿಗೆ ಸೇರಿಸಿದ್ದಾರೆ" ಸ್ಥಳೀಯರು ಆಯೋಗದ ಅಧ್ಯಕ್ಷರ ಮುಂದೆ ಬವಣೆ ತೋಡಿಕೊಂಡರು.
ಶಾಲೆಯ ಕೊಠಡಿ, ಶೌಚಾಲಯ, ಕಟ್ಟಡವನ್ನ ವೀಕ್ಷಣೆ ಮಾಡಿದ ಶಿವಣ್ಣ ಸರ್ಕಾರ ಇಂಥ ಮಕ್ಕಳ ಮತ್ತು ಈ ತಳ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಬೊಮ್ಮಾಯಿಯವರ ಸರ್ಕಾರ ಬಹಳ ಮುತುವರ್ಜಿ ವಹಿಸುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕ ಎಂದರು.
ಪೌರ ಕಾರ್ಮಿಕರ ಜೊತೆ ಸಮಾಲೋಚನೆ ನಡೆಸಿದ ಅಧ್ಯಕ್ಷರು ಸರ್ಕಾರಿ ಸೌಲಭ್ಯ ಸವಲತ್ತುಗಳು ತಲುಪುತ್ತಿದೆಯಾ ಎಂದು ಅವರ ಸಮಸ್ಯೆಗಳನ್ನು ಆಲಿಸಿದ್ದು, ಪೌರ ಕಾರ್ಮಿಕರ ಶಾಲೆಯ ಅವ್ಯವಸ್ಥೆ ಕಂಡು ಅಸಮಧಾನ ವ್ಯಕ್ತಪಡಿಸಿದರು.
ಡಿಡಿಪಿಐ, ಬಿಇಒಗೆ ನೋಟಿಸ್; "ಪೌರ ಕಾರ್ಮಿಕರ ಮಕ್ಕಳು ಕೂಡ ಅದೇ ಕೆಲಸದಲ್ಲಿ ಮುಂದುವರಿಯಬಾರದು ಎಂಬ ಕಾರಣಕ್ಕೆ ಅವರನ್ನು ಶಿಕ್ಷಿತರಾಗಿ ಮಾಡಲು ಒತ್ತು ನೀಡಲಾಗುತ್ತಿದೆ. ಆದರೆ ಅದಕ್ಕೆ ಆಡಳಿತಾತ್ಮಕವಾಗಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಏಕೆಂದರೆ ಸ್ಥಳ ಪರಿಶೀಲನೆಗೆ ಬರುವ ಮುನ್ನ ಡಿಡಿಪಿಐ, ಬಿಇಒ ಅವರನ್ನು ಬರುವಂತೆ ಸೂಚನೆ ನೀಡಲಾಗಿತ್ತು. ಆದರೆ ಅವರು ಪೌರ ಕಾರ್ಮಿಕರ ಶಾಲೆಯ ಪರಿಶೀಲನೆಗೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ. ಅವರಿಗೆ ಆಯೋಗದಿಂದ ನೋಟಿಸ್ ಜಾರಿಗೊಳಿಸಲಾಗುವುದು " ಎಂದು ಎಂ. ಶಿವಣ್ಣ ಹೇಳಿದರು.
ಈ ಶಾಲೆಯಲ್ಲಿ ಒಂದರಿಂದ 7ನೇ ತರಗತಿವರೆಗೆ ಪ್ರಸಕ್ತ 74 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ 42 ಮಂದಿ ವಿಶೇಷಚೇತನ ಮಕ್ಕಳು ಹಾಗೂ 32 ಸಾಮಾನ್ಯ ಮಕ್ಕಳು ಇದ್ದಾರೆ.