ಮೈಸೂರು ಜಿಪಂ ಹಂಗಾಮಿ ಅಧ್ಯಕ್ಷರಾಗಿ ಸಾರಾ ನಂದೀಶ್ ಆಯ್ಕೆ
ಮೈಸೂರು, ಜನವರಿ 8 : ಕೊನೆಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ನಯೀಮಾ ಸುಲ್ತಾನಾ ನಜೀರ್ ಅಹಮದ್ ಅವರ ರಾಜೀನಾಮೆ ಅಂಗೀಕಾರವಾಗಿದ್ದು, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಸಹೋದರ ಸಾ.ರಾ.ನಂದೀಶ್ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮುಂದಿನ ಜಿಪಂ ಅಧ್ಯಕ್ಷರು ಆಯ್ಕೆಯಾಗುವವರೆಗೂ ಸಾ.ರಾ. ನಂದೀಶ್ ಅವರು ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಒಪ್ಪಂದದಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ನಯೀಮಾ ಸುಲ್ತಾನಾ ಅವರು ಈ ಹಿಂದೆಯೇ ಒಮ್ಮೆ ರಾಜೀನಾಮೆ ನೀಡಿದ್ದರೂ ನಾಟಕೀಯ ಬೆಳವಣಿಗೆಯಲ್ಲಿ ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆದಿದ್ದರು.
ಜಾತ್ಯತೀತ ಜನತಾದಳದ ಒಳ ಒಪ್ಪಂದದಂತೆ 20 ತಿಂಗಳಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಿದ್ದ ನಯೀಮಾ ಅವರು ಅವಧಿ ಮುಗಿದು 8 ತಿಂಗಳಾದರೂ ರಾಜೀನಾಮೆ ನೀಡಿರಲಿಲ್ಲ. ಇದರಿಂದ ಜಾ.ದಳದ ಸದಸ್ಯರು ಸಿಟ್ಟಿಗೆದ್ದು, ರಾಜೀನಾಮೆಗೆ ಒತ್ತಾಯಿಸಿದ್ದರು. ಆದರೆ ತಾವು 30 ತಿಂಗಳು ಆಗುವವರೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಆದರೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಮನವೊಲಿಕೆಯಿಂದ ರಾಜೀನಾಮೆಗೆ ಒಪ್ಪಿದ್ದರು.
ಸದಸ್ಯರ ಒತ್ತಡಕ್ಕೆ ಹಾಗೂ ಪಕ್ಷದ ಮುಖಂಡರ ಮನವಿಗೆ ಮಣಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನಾ ನಜೀರ್ ಅಹಮದ್ ಅವರು, ರಾಜೀನಾಮೆ ನೀಡಲು ಒಪ್ಪಿ ಆ.6ರಂದು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದರು. ಅನಂತರ 40 ದಿನಗಳ ಬಳಿಕ ಸೆ.17ರಂದು ರಾಜೀನಾಮೆ ಸಲ್ಲಿಸಿದ್ದರು. ಆದರೆ, ರಾಜಕೀಯ ಮೇಲಾಟಗಳಿಂದಾಗಿ ಸೆ.28ರಂದು ರಾಜೀನಾಮೆಯನ್ನು ಹಿಂದಕ್ಕೆ ಪಡೆದಿದ್ದರು.

ರಾಜೀನಾಮೆ ಹಿಂದಕ್ಕೆ ತೆಗೆಸಿದ್ದರು
ಉಪಾಧ್ಯಕ್ಷ ನಟರಾಜ್ ರಾಜೀನಾಮೆ ಹಿಂಪಡೆದಿದ್ದರಿಂದ ಅಧ್ಯಕ್ಷೆ ನಯೀಮಾ ಸುಲ್ತಾನಾ ಅವರ ರಾಜೀನಾಮೆ ಅಂಗೀಕಾರವಾದರೆ ಉಪಾಧ್ಯಕ್ಷ ಜಿ.ನಟರಾಜ್ ಅವರೇ ಹಂಗಾಮಿ ಅಧ್ಯಕ್ಷರಾಗಲಿದ್ದರು. ಹೀಗಾಗಿ ಹಂಗಾಮಿ ಅಧ್ಯಕ್ಷರ ಸ್ಥಾನದ ಮೇಲೆ ಕಣ್ಣಿಟ್ಟು ದಸರಾದಲ್ಲಿ ಕುದುರೆ ಸವಾರಿ ಮಾಡುವ ಆಸೆಯಲ್ಲಿದ್ದ ಸಾ.ರಾ.ನಂದೀಶ್ ಉಪಾಧ್ಯಕ್ಷರಿಗೆ ಟಾಂಗ್ ನೀಡಲು ಅಧ್ಯಕ್ಷರಿಂದ ರಾಜೀನಾಮೆ ಹಿಂದಕ್ಕೆ ತೆಗೆಸಿದ್ದರು.

ಗಡುವಿಗೆ ಮುನ್ನವೇ ರಾಜೀನಾಮೆ
ಅಕ್ಟೋಬರ್ 1ರಂದು ರಾಜೀನಾಮೆ ಅಂಗೀಕಾರಕ್ಕೆ ಗಡುವು ಇತ್ತು. ಆದರೆ, 3 ದಿನ ಮುನ್ನವೇ ನಯೀಮಾ ಸುಲ್ತಾನಾ ರಾಜೀನಾಮೆ ಹಿಂದಕ್ಕೆ ಪಡೆದಿದ್ದರು. ಇದೇ ರೀತಿ ಈ ಹಿಂದೆ ಜಿಪಂ ಅಧ್ಯಕ್ಷರಾಗಿದ್ದ ಮಾಜಿ ಶಾಸಕಿ ಸುನೀತಾ ವೀರಪ್ಪ ಗೌಡ ಅವರು ಎರಡು ಬಾರಿ ಗಡುವಿಗೆ ಮುನ್ನವೇ ರಾಜೀನಾಮೆ ಹಿಂದಕ್ಕೆ ಪಡೆದಿದ್ದರು.

ಮೂವರು ಶಾಸಕರ ನಡುವಿನ ಪ್ರತಿಭಟನೆ
2016ರ ಮೇ 7ರಂದು ನಡೆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಉಂಟಾಗಿದ್ದ ಹಗ್ಗಜಗ್ಗಾಟದಲ್ಲಿ ನಯೀಮಾ ಸುಲ್ತಾನಾ, ಬಿ.ಸಿ.ಪರಿಮಳಾ ಶ್ಯಾಂ ನಡುವೆ ಕೊನೇ ಗಳಿಗೆಯವರೆಗೆ ತೀವ್ರ ಹೋರಾಟ ನಡೆದಿತ್ತು. ಇದು ಜಾ.ದಳದ ಮೂವರು ಶಾಸಕರ ನಡುವಿನ ಪ್ರತಿಭಟನೆಯೂ ಆಗಿತ್ತು.

ದೇವೇಗೌಡರಿಂದ ಸೂಚನೆ
ಅಂತಿಮವಾಗಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸೂಚನೆ ಮೇರೆಗೆ ಅಲ್ಪಸಂಖ್ಯಾತ ಸಮುದಾಯದ ಮಹಿಳೆ ನಯೀಮಾ ಸುಲ್ತಾನಾ ಅವರು ಜಾ.ದಳ-ಬಿಜೆಪಿ ಮೈತ್ರಿ ಕೂಟದ ಅಧ್ಯಕ್ಷರಾಗಿದ್ದರು. ಮೊದಲ 20 ತಿಂಗಳ ಅವಧಿಗೆ ನಯೀಮಾ ಸುಲ್ತಾನಾ, ಉಳಿದ ಅವಧಿಗೆ ಪರಿಮಳ ಶ್ಯಾಂ ಅವರಿಗೆ ಬಿಟ್ಟುಕೊಡಲು ಒಪ್ಪಂದವಾಗಿತ್ತು.












Click it and Unblock the Notifications