ಬಿಜೆಪಿಯಿಂದ ಸ್ವಾಯತ್ತ ಸಂಸ್ಥೆಗಳ ದುರುಪಯೋಗ: ಸಾರಾ ಮಹೇಶ್
ಮೈಸೂರು, ಸೆಪ್ಟೆಂಬರ್ 4:"ದೇಶದಲ್ಲಿ ವಿರೋಧ ಪಕ್ಷಗಳನ್ನು ದಮನ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದಕ್ಕಾಗಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ" ಎಂದು ಮಾಜಿ ಸಾರಾ ಮಹೇಶ್ ಬಿಜೆಪಿ ವಿರುದ್ಧ ಹರಿಹಾಯ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಹೆಸರು ಮಾಡಿರುವ ನಾಯಕನನ್ನು ಮಾನಸಿಕವಾಗಿ ದುರ್ಬಲ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಇಡೀ ದೇಶದಲ್ಲಿ ಯಾವುದೇ ವಿರೋಧ ಪಕ್ಷ ಇರಬಾರದು ಎಂದು ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ತನ್ನ ಕೆಲಸ ಮಾಡುತ್ತಿದೆ" ಎಂದರು.

"ಪ್ರಧಾನಿಗಳಿಗೆ ಭ್ರಷ್ಟಾಚಾರವನ್ನು ನಿರ್ನಾಮ ಮಾಡುವ ಗುರಿ ಇದ್ದರೆ ಸ್ವಾಗತ. ಆದರೆ ಇತ್ತೀಚಿನ ದಿನಗಳಲ್ಲಿ ನಿಮ್ಮ ಪಕ್ಷದ ನಾಯಕರು ನಮ್ಮ ಶಾಸಕರನ್ನು ಕರೆದೊಯ್ದಿದ್ದಾಗ ನಿಮ್ಮ ಇಡಿ ಅಧಿಕಾರಿಗಳು ಎಲ್ಲಿ ಹೋಗಿದ್ದರು?. ಆಗ ಇಡಿ ಅಧಿಕಾರಿಗಳು ದೇಶದಲ್ಲಿ ಇರಲಿಲ್ವಾ" ಎಂದು ಪ್ರಶ್ನಿಸಿದರು.
"ಆಪರೇಷನ್ ಕಮಲಕ್ಕೆ ಬಂದಂತಹ ಹಣ ಯಾವುದು ಎಂಬ ತನಿಖೆ ನಡೆಯಬೇಕು. ಹುಣಸೂರು, ಕೆ.ಆರ್. ನಗರ, ಬೆಳಗಾವಿ, ಶಿವಮೊಗ್ಗ, ಮುಂಬೈ ಬೆಂಗಳೂರು ಇಲ್ಲೆಲ್ಲ ನಡೆದ ಫೋನ್ ಸಂಭಾಷಣೆಗಳೆಲ್ಲದರ ಬಗ್ಗೆ ತನಿಖೆ ಮಾಡಲಿ" ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಗೆ ಸಾ.ರಾ ಮಹೇಶ್ ಪರೋಕ್ಷವಾಗಿ ಟಾಂಗ್ ನೀಡಿದರು.
"ಡಿ.ಕೆ ಶಿವಕುಮಾರ್ ಅವರನ್ನ ಬೆಂಬಲಿಸುತ್ತೇವೆ. ಪಕ್ಷ ಬೇರೆ ಇದ್ದರೂ ಬೆಂಬಲಿಸುತ್ತೇವೆ. ಡಿಕೆಶಿ ವಿಚಾರದಲ್ಲಿ ಸಹಕಾರ ನೀಡಲು ಮುಂದಾಗಿದ್ದೇವೆ. ವಿರೋಧ ಪಕ್ಷದಲ್ಲಿ ಕುಳಿತು ಹೋರಾಟ ಮಾಡಲಿದ್ದೇವೆ" ಎಂದರು.












Click it and Unblock the Notifications