ಚಾಮುಂಡಿ ದೇಗುಲ ಮುಂಭಾಗ 101 ಕಾಯಿ ಒಡೆದ ಸಾ.ರಾ.ಮಹೇಶ್ ಬೆಂಬಲಿಗರು
ಮೈಸೂರು, ಜೂನ್ 8 : ಜೆಡಿಎಸ್ ಪಕ್ಷ ನಿರೀಕ್ಷೆಗೂ ಮೀರಿದ ಅವಕಾಶ ನನಗೆ ನೀಡಿದೆ. ಮೈತ್ರಿ ಸರಕಾರದ ಇತಿಮಿತಿ ಅರಿತು ಕೆಲಸ ಮಾಡುತ್ತೇನೆ ಎಂದು ನೂತನ ಸಚಿವ ಸಾ.ರಾ.ಮಹೇಶ್ ಹೇಳಿದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದಂಪತಿ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಅವರು, ಶಾಸಕನಾಗಿ ಮೊದಲೇ ತಿಳಿಸಿದಂತೆ ಚುಂಚನಕಟ್ಟೆ ಶ್ರೀರಾಮ ಸಹಕಾರ ಕಾರ್ಖಾನೆಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ಆಸೆಯಿತ್ತು. ಅದರತ್ತ ನನ್ನ ಮೊದಲ ಗಮನ ಎಂದರು.
ಈ ಭಾಗದ ಕಬ್ಬು ಬೆಳೆಗಾರರಿಗೆ ಈ ಕಾರ್ಖಾನೆ ಆದಾಯದ ಮೂಲವಾಗಿದೆ. ಈ ಕಾರ್ಖಾನೆ ನಂಬಿರುವ ಕಾರ್ಮಿಕರ ಉದ್ಯೋಗಗಳು ಉಳಿಯುತ್ತವೆ. ರೈತರ ಬೆಳೆಗಳಿಗೆ ನೀರು ಕೊಡುವುದು ನನ್ನ ಪ್ರಾಥಮಿಕ ಆದ್ಯತೆ ಎಂದರು.

ಖಾತೆ ಹಂಚಿಕೆ ಕುರಿತು ಮಾತನಾಡಿದ ಸಾ.ರಾ.ಮಹೇಶ್, ನಾನು ಇಂಥದ್ದೇ ಖಾತೆ ಬೇಕು ಎಂದು ಕೇಳಿಲ್ಲ. ಪಕ್ಷ ಕೊಡುವ ಖಾತೆಯನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ಕೊಡಗು ಉಸ್ತುವಾರಿ ಕೂಡ ನಾನು ಕೇಳಿಲ್ಲ. ಒಂದು ವೇಳೆ ಜವಾಬ್ದಾರಿ ಕೊಟ್ಟರೆ ನಿಭಾಯಿಸುವೆ ಎಂದು ಹೇಳಿದರು.
ಈ ವೇಳೆ ಸಚಿವರ ಬೆಂಬಲಿಗರು ದೇವಾಲಯದ ಮುಂಭಾಗ ನೂರೊಂದು ಈಡುಗಾಯಿ ಒಡೆದು, ಹರಕೆ ಸಮರ್ಪಿಸಿದರು.












Click it and Unblock the Notifications