ಉಕ್ರೇನ್ನಲ್ಲಿ ಸಿಲುಕಿದ ಮೈಸೂರಿನ ಇಬ್ಬರು ವಿದ್ಯಾರ್ಥಿಗಳು; ಆತಂಕದಲ್ಲಿ ಪೋಷಕರು
ಮೈಸೂರು, ಫೆಬ್ರವರಿ 25: ಯುದ್ದಪೀಡಿತ ಉಕ್ರೇನ್ ದೇಶದಲ್ಲಿ ಮೈಸೂರಿನ ಇಬ್ಬರು ವೈದ್ಯ ವಿದ್ಯಾರ್ಥಿಗಳು ಸಿಲುಕಿದ್ದು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ನಲ್ಲಿ ಮೈಸೂರಿನ ಅರ್ಜುನ್ ಹಾಗೂ ಐಸಿರಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವುದರಿಂದ ಆತಂಕದಲ್ಲಿ ಪೋಷಕರು ಮಕ್ಕಳಿಗೆ ರಕ್ಷಣೆ ನೀಡಿ ವಾಪಸ್ ಕರೆ ತರುವಂತೆ ಭಾರತೀಯ ರಾಯಭಾರಿ ಕಚೇರಿಗಳಿಗೆ ಮನವಿ ಮಾಡಿದ್ದಾರೆ.
ಐಸಿರಿ ಎಂಬ ಮೈಸೂರಿನ ಯುವತಿ ನಾಲ್ಕು ವರ್ಷಗಳ ಹಿಂದೆ ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ಗೆ ತೆರಳಿದ್ದು, ಅಲ್ಲಿನ ವೈದ್ಯಕೀಯ ವಿವಿಯಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ.
ಮೈಸೂರಿನ ಕುವೆಂಪು ನಗರದ ನಿವಾಸಿ, ಉದ್ಯಮಿ ಶಿವಕುಮಾರ್ ಪತ್ನಿಯಾಗಿರುವ ಗೀತಾ, ತಮ್ಮ ಪುತ್ರಿ ಐಸಿರಿ ಉಕ್ರೇನ್ನಲ್ಲಿ ಸಿಲುಕಿರುವ ಬಗ್ಗೆ ಮಾತನಾಡಿ, "ಗುರುವಾರ ಮಧ್ಯಾಹ್ನ 12 ಗಂಟೆಗೆ ಭಾರತಕ್ಕೆ ಬರಲು ವಿಮಾನವಿತ್ತು. ಇದಕ್ಕಾಗಿ ರಾತ್ರಿಯೇ ಮಗಳು ಸಿದ್ಧತೆ ಮಾಡಿಕೊಂಡಿದ್ದಳು. ಮಧ್ಯ ರಾತ್ರಿಯಾಗುತ್ತಿದ್ದಂತೆ ಆಕೆಯಿದ್ದ ವಾಸ ಸ್ಥಳ ವ್ಯಾಪ್ತಿಯಲ್ಲಿ ಬಾಂಬ್ಗಳ ಸುರಿಮಳೆಯಾಗಿ ವಿಮಾನ ಸೇವೆಯೇ ಸ್ಥಗಿತಗೊಂಡಿದೆ,'' ಎಂದು ಕಣ್ಣೀರಾದರು.

"ಮನೆಯಿಂದ ಹೊರ ಬರಲು ಸಾಧ್ಯವಾಗದೇ ಮಗಳು ತೊಂದರೆಯಲ್ಲಿದ್ದು, ಊಟ-ತಿಂಡಿ ಸಿಗದೇ ಪರದಾಡುವಂತಾಗಿದೆ. ಸ್ಥಳೀಯರಿಂದ ನೆರವು ಕೂಡ ಸಿಗುತ್ತಿಲ್ಲ,'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ನಲ್ಲಿ ಮೈಸೂರಿನ ಮತ್ತೊಬ್ಬ ವೈದ್ಯಕೀಯ ವಿದ್ಯಾರ್ಥಿ ಅರ್ಜುನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. "ವಾರದ ಹಿಂದೆಯೇ ದೇಶಕ್ಕೆ ಹಿಂದಿರುಗುವ ಬಗ್ಗೆ ಹೇಳುತ್ತಿದ್ದ. ಆದರೆ ಪರೀಕ್ಷೆ ಕಾರಣದಿಂದ ಅನುಮತಿ ಸಿಕ್ಕಿಲಿಲ್ಲ. ಈಗ ಮನೆಯಿಂದ ಹೊರಬರಲು ಸಾಧ್ಯವಾಗದೇ ಊಟ-ತಿಂಡಿಗೆ ಪರದಾಡುತ್ತಿದ್ದಾನೆ," ಎಂದು ಅರ್ಜುನ್ ಅವರ ಸೋದರ ರೋಹಿತ್ ಹೇಳಿದ್ದಾರೆ.
''ವೈದ್ಯಕೀಯ ಶಿಕ್ಷಣಕ್ಕಾಗಿ 4 ವರ್ಷದ ಹಿಂದೆಯೇ ಅರ್ಜುನ್ ವಿದೇಶಕ್ಕೆ ತೆರಳಿದ್ದನು. ಉಕ್ರೇನ್ನ ಸುಮಿ ನಗರದಲ್ಲಿ ವಾಸ ಮಾಡುತ್ತಿದ್ದನು. ಇದೀಗ ಯುದ್ಧದಿಂದ ಊಟ- ತಿಂಡಿಗೆ ಹೊರಗೆ ಹೋಗಲು ಸಾಧ್ಯವಾಗದೇ ಅಪಾರ್ಟ್ಮೆಂಟ್ನ ನೆಲ ಮಹಡಿಯಲ್ಲಿ ರಕ್ಷಣೆ ಪಡೆದಿದ್ದಾರೆ. ಸಂಜೆಯಷ್ಟೇ ಕರೆ ಮಾಡಿ ತಾನು ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ,'' ಎಂದು ಹೇಳಿದರು.

ಮೊದಲ ದಿನದಲ್ಲಿ 137 ಜನರು ಮರಣ
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಮೊದಲ ದಿನದಂದು 137 ಜನರು ಮರಣವನ್ನಪ್ಪಿದ್ದಾರೆ. ಇದು ಯುರೋಪ್ನಲ್ಲಿ ಎರಡನೇ ಮಹಾಯುದ್ಧದ ನಂತರ ನಡೆಯುತ್ತಿರುವ ಮೊದಲ ಭೀಕರ ಕದನವಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರದಂದು ಉಕ್ರೇನ್ ಮೇಲೆ ಸೇನಾ ಕಾರ್ಯಚರಣೆ ಘೋಷಿಸಿದ್ದರು.
ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಅಲ್ಲಿನ ಪ್ರಮುಖ ನಗರಗಳ ಮೇಲೆ ರಷ್ಯಾದ ಮಿಲಿಟರಿ ಪಡೆಗಳು ದಾಳಿ ನಡೆಸಲಾಗಿದೆ. ಈ ಬಿಕ್ಕಟ್ಟಿಗೆ ವಿಶ್ವದ ನಾಯಕರು ಆತಂಕ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಈ ಯುದ್ಧದಲ್ಲಿ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಏಕಾಂಗಿಯಾಗಿ ಉಳಿದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬೇಸರ ಹೊರಹಾಕಿದ್ದಾರೆ.












Click it and Unblock the Notifications