ಮೈಸೂರು-ಗೋವಾ ನಡುವೆ ಎಕ್ಸ್ಪ್ರೆಸ್ ರೈಲು ಆರಂಭಿಸಲು ಬೇಡಿಕೆ
ಮೈಸೂರು, ಜನವರಿ 16; ಮೈಸೂರಿನಿಂದ ಮಂಗಳೂರು, ಉಡುಪಿ ಮೂಲಕ ಗೋವಾಕ್ಕೆ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಸಾವಿರಾರು ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಾರೆ ಎಂದು ಬೇಡಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಉಡುಪಿ, ಮಂಗಳೂರು, ಉತ್ತರ ಕನ್ನಡ ಭಾಗದ ಸುಮಾರು 5 ಲಕ್ಷ ಜನರು ಮೈಸೂರು ಮತ್ತು ಮೈಸೂರಿನ ಸುತ್ತಮುತ್ತ ವಾಸವಾಗಿದ್ದಾರೆ. ಮೈಸೂರು-ಗೋವಾ ರೈಲು ಸಂಚಾರ ಆರಂಭಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಲಾಗಿದೆ.
ಈಗ ಊರಿಗೆ ತೆರಳಲು ಜನರು ಬಸ್, ಕಾರು ಅವಲಂಬಿಸಬೇಕಿದೆ. ಆದರೆ ಇದರಿಂದಾಗಿ ವೃದ್ಧರು, ಮಹಿಳೆಯರಿಗೆ ತೊಂದರೆ ಆಗುತ್ತಿದೆ. ರೈಲು ಸಂಚಾರ ಆರಂಭಗೊಂಡರೆ ಜನರಿಗೆ ಸಹಾಯಕವಾಗಲಿದೆ ಎಂದು ವಿವರಣೆ ನೀಡಲಾಗಿದೆ.

ಹಲವಾರು ಸಂದರ್ಭಗಳಲ್ಲಿ ಕೇಂದ್ರ ರೈಲ್ವೆ ಸಚಿವರು, ಮೈಸೂರು ಸಂಸದರಿಗೆ ಮೈಸೂರು-ಗೋವಾ ನಡುವೆ ರೈಲು ಸಂಚಾರ ಆರಂಭಿಸುವಂತೆ ಬೇಡಿಕೆ ಇಡಲಾಗಿದೆ. ಆದರೆ ಇದುವರೆಗೂ ಯಾವುದೇ ಸ್ಪಂದನೆ ಸಿಕಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಿಂದ ಚೆನ್ನೈಗೆ ವಂದೇ ಭಾರತ್ ಮತ್ತು ಶತಾಬ್ದಿ ರೈಲು ಸೇರಿ ಎರಡು ರೈಲು ಸೇವೆ ಇದೆ. ಇದೇ ಮಾದರಿಯಲ್ಲಿ ಮೈಸೂರು, ಕರಾವಳಿ ಮಾರ್ಗವಾಗಿ ಗೋವಾಕ್ಕೆ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಮೈಸೂರಿನಲ್ಲಿ ಸುಮಾರು 13 ಸಂಘಸಂಸ್ಥೆಗಳು ದಕ್ಷಿಣ ಕನ್ನಡ, ಮಂಗಳೂರು ಮತ್ತು ಉತ್ತರ ಕನ್ನಡ ಭಾಗದಲ್ಲಿ ಬೇರುಗಳನ್ನು ಹೊಂದಿವೆ. ಆದ್ದರಿಂದ ರೈಲು ಸೇವೆ ಆರಂಭಿಸಿದರೆ ಅನುಕೂಲವಾಗಲಿದೆ ಎಂದು ಮನವಿ ಮಾಡಲಾಗಿದೆ.
ಫೆಬ್ರವರಿಯಲ್ಲಿ ಮಂಡನೆಯಾಗಲಿರುವ 2023-24ನೇ ಸಾಲಿನ ಸಾಮಾನ್ಯ ಬಜೆಟ್ನಲ್ಲಿ ರೈಲ್ವೆ ಬಜೆಟ್ ಸಹ ಸೇರಿರುತ್ತದೆ. ಈ ಬಜೆಟ್ನಲ್ಲಿ ಈ ರೈಲು ಘೋಷಣೆಯಾಗಲಿದೆಯೇ? ಎಂದು ಕಾದು ನೋಡಬೇಕಿದೆ.
ಸಾಂಸ್ಕೃತಿಕ ನಗರಿ-ಕರಾವಳಿ; ಸಾಂಸ್ಕೃತಿಕ ನಗರ ಮೈಸೂರು ಮತ್ತು ಮಂಗಳೂರು ನಡುವೆ ಸುಮಾರು 250 ಕಿ. ಮೀ. ದೂರವಿದೆ. ರಸ್ತೆ ಮೂಲಕ ಈ ಮಾರ್ಗದಲ್ಲಿ ಸಂಚಾರ ನಡೆಸಲು ಕನಿಷ್ಠ 5 ಗಂಟೆಗಳು ಬೇಕು. ಹಗಲು ಹೊತ್ತಿನಲ್ಲಿ ಇಷ್ಟು ದೂರ ಕ್ರಮಿಸುವುದು ತ್ರಾಸದಾಯಕವಾಗಿದೆ. ಆದ್ದರಿಂದ ರೈಲು ಸೇವೆ ಆರಂಭವಾದರೆ ಅನುಕೂಲವಾಗಲಿದೆ ಎಂಬುದು ಜನರ ಬೇಡಿಕೆಯಾಗಿದೆ.

ಮೈಸೂರು ಮತ್ತು ಗೋವಾ ನಡುವೆ ವಿಮಾನ ಸೇವೆ ಇದೆ. ಆದರೆ ಕರಾವಳಿ ಮೂಲಕ ಸಂಚಾರ ನಡೆಸುವ ರೈಲು ಸೇವೆ ಬೇಕು ಎಂಬುದು ಬೇಡಿಕೆಯಾಗಿದೆ. ದಸರಾ ಮತ್ತು ವಿವಿಧ ರಜೆ ದಿನಗಳ ಸಂದರ್ಭದಲ್ಲಿ ನೂರಾರು ಜನರು ಉಭಯ ನಗರಗಳ ನಡುವೆ ಸಂಚಾರ ನಡೆಸುತ್ತಾರೆ.












Click it and Unblock the Notifications