ಮೈಸೂರಿನ ರಾಜವಂಶಸ್ಥರ ಸಮಾಧಿ ಮಧುವನಕ್ಕೆ ಜೀರ್ಣೋದ್ಧಾರ
ಮೈಸೂರು, ಜೂನ್ 26: ಮೈಸೂರಿನ ಯದುವಂಶದ ರಾಜವಂಶಸ್ಥರ ಸಮಾಧಿ ಸ್ಥಳವಾದ ಮಧುವನದ ಕಾಯಕಲ್ಪಕ್ಕೆ ನಿರ್ಧರಿಸಲಾಗಿದ್ದು, ಕಳೆದ ಎರಡು ದಿನಗಳಿಂದ ಅರಮನೆ ಕೆಲಸಗಾರರು ಸಮಾಧಿ ಸ್ಥಳದ ಜೀರ್ಣೋದ್ಧಾರ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ನಗರದ ಮುಖ್ಯ ರಸ್ತೆಯಲ್ಲಿ 12 ಎಕರೆ ವಿಶಾಲವಾದ ಜಾಗದಲ್ಲಿರುವ ಮಧುವನ, ಮೈಸೂರನ್ನು ಆಳಿದ ಯದುವಂಶಸ್ಥರ ಸಮಾಧಿ ಸ್ಥಳ. ಹೊಯ್ಸಳ ಶೈಲಿಯಲ್ಲಿ ಸಮಾಧಿ ನಿರ್ಮಾಣವಾಗಿದೆ. ಸಮಾಧಿಯ ಸುತ್ತ ಆಗಿಂದಾಗ್ಗೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆಯಾದರೂ ಪೂರ್ಣ ಪ್ರಮಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಯುವುದು ಅಪರೂಪ.

ಇದೀಗ ಅರಮನೆ ಕೆಲಸಗಾರರು, ಎರಡು ದಿನಗಳಿಂದ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ, ಶ್ರೀಕಂಠದತ್ತ ನರಸಿಂಹರಾಜ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.
ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಟ್ರಸ್ಟ್ ಅಧ್ಯಕ್ಷರಾಗಿದ್ದು, ಮಧುವನದ ಜೀರ್ಣೋದ್ಧಾರ ಕಾರ್ಯದ ನಂತರ ಸಮಾಧಿ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಇನ್ನೂ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗಿಲ್ಲ.












Click it and Unblock the Notifications