ನಾವೂ ಬದುಕುವುದು ಅನಿವಾರ್ಯ: ಅಡ್ಡಂಡ ಕಾರ್ಯಪ್ಪ
ಮೈಸೂರು, ಡಿಸೆಂಬರ್ 23: ಕಲಾವಿದರು ಸಾಧನೆ ಇಲ್ಲದೆ ಸತ್ತರೆ ಅದು ಸಾವಿಗೆ ಅವಮಾನ. ಆದರ್ಶವಿಲ್ಲದೆ ಬದುಕಿದರೆ ಅದು ಬದುಕಿಗೆ ಅಪಮಾನ ಆಗಲಿದೆ ಎಂದು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.
ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಯುವ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ನೀತಿಗಳಲ್ಲಿಯೂ ಶಿಕ್ಷಣದಲ್ಲಿ ಸಂಗೀತ ಹಾಗೂ ಜನಪದಕ್ಕೆ ಆದ್ಯತೆಯಿದೆ. ಮುಂದಿನ ದಿನಗಳ ಕಲಾವಿದರಿಗೆ ಆಶಾದಾಯಕವಾಗಿ, ಉತ್ಸಾಹಿ ಚಿಲುಮೆಗಳಾಗಿ ಕಲೆಯನ್ನು ಕಟ್ಟೋಣ. ಅದಕ್ಕೆ ಬೇಕಾದ ತಯಾರಿಗೆ ರಂಗಾಯಣ ಯಾವಾಗಲೂ ಸಿದ್ಧ ಎಂದರು.
ಈಗ ಹವ್ಯಾಸಿ ಕಲಾವಿದರಿಗಾಗಿ ಭೂಮಿಗೀತದಲ್ಲಿ "ಪರ್ವ' ನಾಟಕ ಪ್ರತರ್ಶನಕ್ಕೆ 35 ಕಲಾವಿದರು ಹಾಗೂ "ಸಂವಿಧಾನ' ನಾಟಕಕ್ಕೂ ತಯಾರಿ ನಡೆಸುತ್ತಿದ್ದಾರೆ. ಎಂಟು ತಿಂಗಳಿಂದ ನಾನಾ ಅಭ್ಯಾಸ ಮಾಡುತ್ತಿದ್ದ ಕಲಾವಿದರಿಗೆ ಈಗ ಕಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಜ.2ರಿಂದ "ರಾಗ-ರಂಗಾಯಣ" ಹವ್ಯಾಸಿ ಕಲಾವಿದರಿಗಾಗಿ ನಿರಂತರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಮಾತನಾಡಿ, ಕೊರೊನಾದಿಂದ ರಾಜ್ಯದಲ್ಲಿ ಬಹಳಷ್ಟು ಮಂದಿ ನೋವನ್ನು ಅನುಭಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ಸಾಮೂಹಿಕ ಚಟುವಟಿಕೆಗಳನ್ನು ನಡೆಸಲು ಆಗಿರಲಿಲ್ಲ.
ಆದರೆ ಕಳೆದ ಎರಡು ದಿನಗಳಿಂದ ರೂಪಾಂತರಗೊಂಡ ಕೊರೊನಾದಿಂದಾಗಿ ಮತ್ತೊಂದು ಸಮಸ್ಯೆ ಎದುರಾಗುವ ಆತಂಕ ಮೂಡಿದೆ. ಏನೇ ಸಂಕಷ್ಟ ಬಂದರೂ ಸಹ ಅದನ್ನು ಎದುರಿಸುತ್ತೇವೆ ಎಂಬುದಕ್ಕೆ ನಾವು ಇಂದು ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸುತ್ತಿರುವ ಕಾರ್ಯಕ್ರಮವೇ ಸಾಕ್ಷಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ರಂಗಕರ್ಮಿ ಬಿ.ಎಂ.ರಾಮಚಂದ್ರ ಇತರರಿದ್ದರು.












Click it and Unblock the Notifications