Breaking; ರಮೇಶ್ ಜಾರಕಿಹೊಳಿ ವಿರುದ್ಧ 600 ಕೋಟಿ ವಂಚನೆ ಆರೋಪ
ಮೈಸೂರು, ಮೇ 03; "ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 600 ಕೋಟಿ ರೂ. ವಂಚನೆ ಮಾಡಿದ್ದಾರೆ" ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ಮೈಸೂರು ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಎಂ. ಲಕ್ಷ್ಮಣ್, "ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಸಕ್ಕರೆ ಕಾರ್ಖಾನೆ ಮಾಲೀಕ ರಮೇಶ್ ಜಾರಕಿಹೊಳಿ ಅಪೆಕ್ಸ್ ಬ್ಯಾಂಕ್ನ 15 ಸಹಕಾರಿ ಬ್ಯಾಂಕ್ಗಳಿಂದ 366 ಕೋಟಿ ರೂ., ಯೂನಿಯನ್ ಬ್ಯಾಂಕ್ನಿಂದ 20 ಕೋಟಿ ರೂ., ಹರಿಯನ್ಸ್ ಸೊಸೈಟಿಯಿಂದ 20 ಕೋಟಿ ರೂ. ಸಾಲ ಪಡೆದಿದ್ದಾರೆ" ಎಂದರು.
"ರೈತರಿಗೆ 20 ಕೋಟಿ 50 ಕೋಟಿ ರೂ. ಸಾಲ ಬಾಕಿ, ತೆರಿಗೆ ಇಲಾಖೆಗೆ 200 ಕೋಟಿ ರೂ. ಸೇರಿದಂತೆ 610 ಕೋಟಿ ರೂ. ಬಾಕಿ ನೀಡಬೇಕಿದೆ. ಆಸ್ತಿ ಜಪ್ತಿಗಾಗಿ ಅಪೆಕ್ಸ್ ಬ್ಯಾಂಕ್ನಿಂದಲೂ 2019ರ ಅಕ್ಟೋಬರ್ನಲ್ಲಿ ನೋಟೀಸ್ ನೀಡಲಾಗಿದೆ" ಎಂದು ದೂರಿದರು.

"ಈ ಹಗರಣ ನೀರವ್ ಮೋದಿ, ವಿಜಯ ಮಲ್ಯ ಮತ್ತು ಲಲಿತ್ ಮೋದಿ ಹಗರಗಳ ಸಾಲಿನಲ್ಲಿದೆ. ಕೂಡಲೇ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕು ಹಾಗೂ ಸೌಭಾಗ್ಯ ಲಕ್ಷ್ಮಿ ಲಿಮಿಟೆಡ್ ಕಂಪನಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸದ್ಯ ಜಾರಕಿಹೊಳಿ ನೋಟಿಸ್ ವಿರುದ್ಧ ಧಾರವಾಡ ಉಚ್ಛನ್ಯಾಯಾಲದ ಮೊರೆ ಹೋಗಿದ್ದಾರೆ. ತನ್ಮೂಲಕ ಸಹಕಾರಿ ಕ್ಷೇತ್ರದ ರೈತರಿಗೆ ಸಂಬಂಧಿಸಿದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ" ಎಂದು ಆರೋಪಿಸಿದರು.

"ನಂತರ ಕೋರ್ಟ್ ಆದೇಶವನ್ನು ಉಲ್ಲೇಖಿಸಿ ಅಪೆಕ್ಸ್ ಬ್ಯಾಂಕ್ನ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ 2021ರ ಡಿಸೆಂಬರ್ ತಿಂಗಳಲ್ಲಿ ಪತ್ರ ಬರೆದಿದ್ದಾರೆ. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ದೂರಿದರು.
"20 ಕೋಟಿ ರೂ. ಸಾಲ ಹಿಂಪಡೆಯಲು ಹರಿಯನ್ಸ್ ಸಂಸ್ಥೆ ಇಷ್ಟೆಲ್ಲಾ ಪ್ರಕ್ರಿಯೆ ನಡೆಸುತ್ತಿದ್ದರೂ 360 ಕೋಟಿ ರೂ. ಸಾಲ ನೀಡಿರುವ ಅಪೆಕ್ಸ್ ಬ್ಯಾಂಕ್ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್ಗೆ ಹೋಗದಿರುವುದು ಹಾಗೂ ಯಾವುದೇ ತಕರಾರು ಅರ್ಜಿ ಸಲ್ಲಿಸದಿರುವುದು ಅನುಮಾನಕ್ಕೆ ಹುಟ್ಟಿಸುವ ಬೆಳವಣಿಗೆಯಾಗಿದೆ" ಎಂದು ಆರೋಪ ಮಾಡಿದರು.












Click it and Unblock the Notifications