ರಾಜ್ಯದಲ್ಲಿ ಎಷ್ಟು ಜನ ಮಹಾನ್ ನಾಯಕರು ಇದ್ದಾರೆ?; ಎಚ್ಡಿಕೆ
ಮೈಸೂರು, ಮಾರ್ಚ್ 14; " ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಅವರ ಹೆಸರು ಯಾರು ಹೇಳಿದ್ದಾರೆ?. ಅವರ ಹೆಸರನ್ನು ಅವರೇ ಏಕೆ ಮುಂದೆ ಬಿಟ್ಟುಕೊಂಡಿದ್ದಾರೆ?. ಅವರೇ ಮಾಡಿದ್ದಾರೆ ಅಂತ ಯಾರಾದರು ಹೇಳಿದ್ದಾರಾ?. ರಾಜ್ಯದಲ್ಲಿ ಎಷ್ಟು ಜನ ಮಹಾನ್ ನಾಯಕರು ಇದ್ದಾರೆ?" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಎಷ್ಟೋ ಜನ ಮಹಾನ್ ನಾಯಕರು ಇಲ್ಲ. ಬಿಜೆಪಿಯಲ್ಲೇ ಒಬ್ಬರು ಮಹಾನ್ ನಾಯಕರು ಬೆಳೆಯುತ್ತಿದ್ದಾರೆ. ಯಾವ ಮಹಾನ್ ನಾಯಕರು? ಅಂತ ಹೇಳಿದ್ದಾರೆ ಗೊತ್ತಿಲ್ಲ" ಎಂದರು.
"ಇವರು ತಾವೇ ಅಂತ ಯಾಕೆ ಅಂದುಕೊಂಡರೋ ಅದು ಗೊತ್ತಿಲ್ಲ. ಡಿ. ಕೆ. ಶಿವಕುಮಾರ್ ಅವರಿಗೆ ಇರುವ ಅನುಭವ ನಮಗೂ ಇಲ್ಲ. ನಿನ್ನೆ ದುಡುಕಿ ಅವರ ಹೆಸರನ್ನು ಅವರೇ ಹೇಳಿದ್ದಾರೆ. ಯಾಕೆ ಈ ಪ್ರಕರಣಕ್ಕೆ ಅವರ ಹೆಸರು ಸಿಲುಕಿಸಿಕೊಳ್ಳಲು ಹೊರಟಿದ್ದಾರೆ? ಗೊತ್ತಿಲ್ಲ" ಎಂದು ಕುಮಾರಸ್ವಾಮಿ ಹೇಳಿದರು.

"ಈ ಪ್ರಕರಣವನ್ನು ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಯಾರಿಗೂ ಗಂಭೀರತೆ ಇಲ್ಲ, ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ. ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಖೆ ಮಾಡಬೇಕು" ಎಂದು ಕುಮಾರಸ್ವಾಮಿ ಆಗ್ರಹಿಸಿದರು.
"ಸಂತ್ರಸ್ತ ಮಹಿಳೆಗೆ ಯಾರಿಂದ ರಕ್ಷಣೆ ಸಿಗಬೇಕಿತ್ತೋ ಅದು ಸಿಕ್ಕಿದೆ. ಸರ್ಕಾರದಿಂದ ಅವಳನ್ನು ಹುಡುಕಲು ಆಗದಿದ್ದರೂ, ಹಿಂದೆ ಇರುವವರು ಎಲ್ಲಾ ಬಗೆಯ ರಕ್ಷಣೆ ಕೊಟ್ಟಿದ್ದಾರೆ. ಸರ್ಕಾರಕ್ಕೆ ನಿನ್ನೆ ಆಕೆ ವೀಡಿಯೋ ರೆಕಾರ್ಡ್ ಕಳುಹಿಸಿದ್ದಾಳೆ. ಬೇರೆ ಯಾರಾದರೂ ರೆಕಾರ್ಡ್ ಮಾಡಿ ಕಳುಹಿಸಿದ್ದಾರೋ? ಎಂಬುವುದು ತನಿಖೆಯಿಂದ ಹೊರ ಬರಬೇಕು" ಎಂದರು.
"ರಕ್ಷಣೆಯನ್ನು ಸರ್ಕಾರ ಕೊಟ್ಟಿದಿಯೋ?, ರಮೇಶ್ ಜಾರಕಿಹೊಳಿ ವಿರುದ್ಧ ಇರುವವರು ಕೊಟ್ಟಿದ್ದಾರೋ? ಗೊತ್ತಿಲ್ಲ. ಸರ್ಕಾರ ರಚನೆಗೆ ಈತನ ಸಹಾಯ ಪಡೆದವರು, ಈತನ ಸ್ಪೀಡ್ ಕಟ್ ಮಾಡೋಕೆ ಮಾಡಿದ್ದಾರೋ? ನನಗೆ ಗೊತ್ತಿಲ್ಲ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
"ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ. ಗೌರವ ಉಳಿಸಲು ನಿಷ್ಪಕ್ಷಪಾತ ತನಿಖೆ ಮಾಡಬೇಕು. ಯಾವುದೇ ತನಿಖೆ ಸರ್ಕಾರದಿಂದ ನಡೆದಾಗ ತಾರ್ಕಿಕ ಅಂತ್ಯ ಕಾಣಲ್ಲ" ಎಂದು ಹೇಳಿದರು.












Click it and Unblock the Notifications