ಬೊಮ್ಮಾಯಿ ಯೋಗದಿಂದ ಸಿಎಂ ಆದವರು. ಯೋಗ್ಯತೆಯಿಂದಲ್ಲ:ಧ್ರುವನಾರಾಯಣ್ ಟೀಕೆ
ಮೈಸೂರು, ಸೆಪ್ಟೆಂಬರ್ 12: ಕಾಂಗ್ರೆಸ್ನದ್ದು 100 ಪರ್ಸೆಂಟ್ ಕಮಿಷನ್ ಸರಕಾರ ಎಂಬ ಆರೋಪ ಸತ್ಯವಾಗಿದ್ದರೆ ಅಧಿಕಾರಕ್ಕೆ ಬಂದು 3 ವರ್ಷವಾದರೂ ಡಬಲ್ ಇಂಜಿನ್ ಸರಕಾರ ಯಾಕೆ ತನಿಖೆಗೆ ಆದೇಶ ಮಾಡಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಜಲದರ್ಶಿನಿ ಸರಕಾರಿ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಎಂದು ನಮ್ಮನ್ನು ಟೀಕಿಸುವ ನೀವು, ನಿಮಗೆ ಧೈರ್ಯವಿದ್ದರೆ ಅಂದೇ ಪ್ರಶ್ನಿಸಬಹುದಿತ್ತು. ಕೇಂದ್ರ ಸರ್ಕಾರ ನಿಮ್ಮದಾಗಿತ್ತು. ಎಲ್ಲ ಇಲಾಖೆಗಳು ನಿಮ್ಮ ಬಳಿಯೇ ಇತ್ತು. ವಿರೋಧಪಕ್ಷದಲ್ಲಿದ್ದ ನೀವು ಭ್ರಷ್ಟಾಚಾರವನ್ನು ಬಯಲಿಗೆಳೆಯಬೇಕಿತ್ತು. ಆದರೆ, ಆಗ ಏನನ್ನೂ ಕೇಳದೆ ಈಗ ಆರೋಪ ಮಾಡಿದರೆ ಹೇಗೆ ಎಂದರು.
ಮುಂದಿನ ಚುನಾವಣೆ ಯಡಿಯೂರಪ್ಪ ಸಾರಥ್ಯ, ಬೊಮ್ಮಾಯಿ ನೇತೃತ್ವ ಎಂದು ಹೇಳುವ ನಳಿನ್ ಕುಮಾರ್ ಅವರೇ, ಹಾಗಾದರೆ ಪಕ್ಷದ ಅಧ್ಯಕ್ಷರಾಗಿ ನಿಮ್ಮ ಪಾತ್ರ ಏನು? ಭಜನಾ ಮಂಡಳಿ ಅಧ್ಯಕ್ಷರಾಗಲು ಸರಿಯಿದ್ದೀರಾ? ಎಂದು ವ್ಯಂಗ್ಯವಾಡಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಕಿಡಿ ಕಾರಿದ ಧ್ರುವನಾರಾಯಣ್, "ಸ್ಮೃತಿ ಇರಾನಿಗೆ ರಾಹುಲ್ ಗಾಂಧಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಯವರಿಗೆ ಭಯ ಬಂದಿದೆ. ಪೂಜಾರಿ ಬಾಯಲ್ಲಿ ಮಂತ್ರ ಬರಬೇಕಿತ್ತು. ಆದರೆ, ಬಂದಿದ್ದು ಬರೀ ಉಗುಳು, ಮೋದಿ ಅವರ ಮನ್ ಕೀ ಬಾತ್ ಈಗ ಮಂಕಿ ಬಾತ್ ಆಗಿದೆ" ಎಂದರು.

ಬೊಮ್ಮಾಯಿ ಯೋಗದಿಂದ ಸಿಎಂ ಆದವರು
ಬಸವರಾಜ ಬೊಮ್ಮಾಯಿ ಯೋಗದಿಂದ ಸಿಎಂ ಆದವರು. ಯೋಗ್ಯತೆಯಿಂದಲ್ಲ. ಯೋಗದಿಂದ ಬಂದಿದ್ದು ಕ್ಷಣಿಕ, ಯೋಗ್ಯತೆಯಿಂದ ಬಂದಿದ್ದು ಶಾಶ್ವತ ಎಂಬುವುದು ನಿಮಗೆ ನೆನಪಿರಲಿ. ಕಾಂಗ್ರೆಸ್ ಸರ್ಕಾರ - ಬಿಜೆಪಿ ಸರಕಾರದ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸಿಎಂ ತಾಕತ್ತು, ಧಮ್ ಎನ್ನುವ ಪದ ಬಳಸುತ್ತಾರೆ. ಇದನ್ನು ನಾವು ಖಂಡಿಸುತ್ತೇವೆ. ಮುಖ್ಯಮಂತ್ರಿಗಳು ಜನಪರ ಕಾರ್ಯಕ್ರಮದಲ್ಲಿ ಹೇಗೆ ಮಾತನಾಡಬೇಕು ಎನ್ನುವುದು ಗೊತ್ತಿಲ್ಲವೇ? ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಜನಸ್ಪಂದನ ಕಾರ್ಯಕ್ರಮದಲ್ಲಿ ಜವಾಬ್ದಾರಿಯುತವಾಗಿ ಮಾತನಾಡಿಲ್ಲ. ಟೀಕಿಸುವ ಭರದಲ್ಲಿ ತಾಕತ್ ಇದ್ರೆ, ಧಮ್ ಇದ್ರೆ ಪದ ಬಳಸಿದ್ದಾರೆ. ಟೀಕಿಸುವ ಮುನ್ನ ಜವಾಬ್ದಾರಿ ಅರಿತು ಮಾತನಾಡಬೇಕಿತ್ತು ಎಂದು ಅಸಮಧಾನ ಹೊರ ಹಾಕಿದರು.

ಜನ ಸ್ಪಂದನೆ ಅಲ್ಲ, ಮೋಜಿನ ಕಾರ್ಯಕ್ರಮ
ಚಿಕ್ಕಬಳ್ಳಾಪುರದಲ್ಲಿ ಹೆಸರಿಗೆ ಮಾತ್ರ ಜನ ಸ್ಪಂದನೆ ಕಾರ್ಯಕ್ರಮ, ಆದರೆ ಇದೊಂದು ಮೋಜಿನ ಕಾರ್ಯಕ್ರಮದಂತೆ ಕಂಡಿದೆ. ಕಾಂಗ್ರೆಸ್ ಮೇಲೆ ಭಯ ಹೆಚ್ಚಾಗಿರುವ ಕಾರಣ ಕಾಂಗ್ರೆಸ್ ಗುರಿಯಾಗಿಸಿಕೊಂಡು ಕಾರ್ಯಕ್ರಮ ನಡೆಸಿದ್ದೀರಿ ಪ್ರವಾಹಕ್ಕೆ ತುತ್ತಾದ ಜನರು ಸಂಕಷ್ಟದಲ್ಲಿದ್ದಾರೆ. ಪ್ರವಾಹದಂತ ವೇಳೆ ಈ ರೀತಿಯ ಜನಸ್ಪಂದನ ಕಾರ್ಯಕ್ರಮ ಬೇಕಿರಲಿಲ್ಲ. ಕಾರ್ಯಕ್ರಮ ಮಾಡಿದಾಗ, ನಿಮ್ಮ ಸಾಧನೆ ಹೇಳುವ ಕಾರ್ಯಕ್ರಮವಾಗಬೇಕಿತ್ತು. ಆದರೆ, ಜನಸ್ಪಂದನ ಕಾರ್ಯಕ್ರಮವು ವಿರೋಧಪಕ್ಷವನ್ನ ಟೀಕಿಸುವ ಕಾರ್ಯಕ್ರಮವಾಗಿತ್ತು ಎಂದು ಕಿಡಿಕಾರಿದರು.

ಸೆ.30ಕ್ಕೆ ರಾಜ್ಯಕ್ಕೆ ಭಾರತ್ ಜೋಡೋ ಪಾದಯಾತ್ರೆ
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಸೆಪ್ಟೆಂಬರ್ 30ರಂದು ಬೆಳಗ್ಗೆ 9.30 ಕ್ಕೆ ಊಟಿ, ಗುಡ್ಲೂರು ಮಾರ್ಗವಾಗಿ ಚಾಮರಾಜನಗರ ಜಿಲ್ಲೆ ಪ್ರವೇಶ ಮಾಡಲಿದೆ. ಬೇಗೂರು ಕ್ರಾಸ್ನಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಅಲ್ಲಿನ ಮೂಲ ನಿವಾಸಿಗಳಾದ ಜೇನು ಕುರುಬರು, ಸೋಲಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಗುಂಡ್ಲುಪೇಟೆಯಲ್ಲಿ ರಾಹುಲ್ ಗಾಂಧಿಯನ್ನು ಸ್ವಾಗತಿಸಲು 20 ಸಾವಿರ ಜನರನ್ನು ಸೇರಿಸಲಾಗುವುದು ಎಂದು ಧ್ರುವನಾರಾಯಣ್ ತಿಳಿಸಿದರು.

ನಂಜನಗೂಡು ದೇವಸ್ಥಾನಕ್ಕೆ ಭೇಟಿ
ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಅಕ್ಟೋಬರ್ 2ರಂದು ಗಾಂಧಿ ಜಯಂತಿಯಲ್ಲಿ ಭಾಗವಹಿಸಲಿದ್ದಾರೆ. ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡುವವರು ದೊಡ್ಡಕೆರೆ ಮೈದಾನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಗರದ ಯಾವ ರಸ್ತೆಯಲ್ಲಿ ಪಾದಯಾತ್ರೆ ನಡೆಸಬೇಕು ಎಂಬುದನ್ನು ರಾಹುಲ್ ಗಾಂಧಿ ಅವರ ತಾಂತ್ರಿಕ ತಂಡ ನಿರ್ಧರಿಸಲಿದೆ ಎಂದು ಹೇಳಿದರು.
ಪ್ರತಿದಿನದ ಪಾದಯಾತ್ರೆಯಲ್ಲಿ 10 ಕ್ಷೇತ್ರಗಳ ಕಾರ್ಯಕರ್ತರು ಪಾಲ್ಗೊಳ್ಳಬೇಕು. ಮುಂಜಾನೆ ಕನಿಷ್ಠ 2 ಸಾವಿರ ಜನರನ್ನು ಸೇರಿಸಬೇಕು. ಸಂವಾದದಲ್ಲಿ ಆರ್ ಎಸ್ಎಸ್, ಬಿಜೆಪಿ ಪರವಾದ ವ್ಯಕ್ತಿಗಳಿದ್ದಾರೆಯೇ? ಎಂದು ಸೂಕ್ಷ್ಮವಾಗಿ ಪರಿಶೀಲಿಸಬೇಕು. ರಾಹುಲ್ ಗಾಂಧಿ ಅವರು ಆಗಮಿಸಿದ ವೇಳೆ ಅದ್ಧೂರಿತನ ಮಾಡುವುದು ಬೇಡ. ನಾಯಕರಿಗೆ ಸೆಲ್ಫಿ ಕಾಟ ಬಹಳ ಇದೆ. ಅದನ್ನು ತಪ್ಪಿಸಬೇಕು. ಹಾಗೆಯೇ ಸ್ಥಳೀಯ ಕಲಾ ತಂಡಗಳನ್ನು ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.












Click it and Unblock the Notifications