ದಾನದ ಆಸ್ತಿಗೆ 2 ಬೀಗ, ಇಬ್ಬರು ತಮ್ಮದೆನ್ನುತ್ತಿದ್ದಾರೆ ಒಂದೇ ಜಾಗ
ಮೈಸೂರಿನ ಜೆ.ಪಿ.ನಗರದ ನಿವಾಸಿಯೊಬ್ಬರು ಸತ್ಯ ಸಾಯಿ ಟ್ರಸ್ಟ್ ಹೆಸರಿಗೆ ಆಸ್ತಿಯ ವಿಲ್ ಮಾಡಿದ್ದಾರೆ. ಆದರೆ ಅದೇ ಆಸ್ತಿ ತಮ್ಮದು ಎಂದು ಹೇಳಿಕೊಂಡು ಮತ್ತೊಬ್ಬರು ಬೀಗ ಹಾಕಿದ್ದಾರೆ. ಸಮಸ್ಯೆ ಕೋರ್ಟ್ ನಲ್ಲೇ ಬಗೆಹರಿಸಿಕೊಳ್ಳಿ ಎಂದಿದ್ದಾರೆ ಪೊಲೀಸರು
ಮೈಸೂರು, ಜನವರಿ 16: ಇಲ್ಲಿನ ಜೆ.ಪಿ.ನಗರದ ನಿವಾಸಿಯೊಬ್ಬರು ತಮ್ಮ ಆಸ್ತಿಯನ್ನು ಸತ್ಯಸಾಯಿ ಟ್ರಸ್ಟ್ ಗೆ ಬರೆದಿದ್ದು, ಇದೀಗ ವ್ಯಕ್ತಿಗಳಿಬ್ಬರು ಆಸ್ತಿ ತಮ್ಮದು, ತಾವು ವಾರಸುದಾರರು ಎಂದು ಹೇಳಿಕೊಳ್ಳುತ್ತಿದ್ದಾರೆ. ಟ್ರಸ್ಟ್ ಗೆ ಎರಡು ಬೀಗ ಹಾಕಲಾಗಿದೆ. ಪೊಲೀಸರು ತಾವು ಬರುವವರೆಗೂ ಬೀಗ ತೆರೆಯದಿರಲು ಸೂಚನೆ ನೀಡಿದ್ದಾರೆ.
ಮೈಸೂರಿನ ಜೆ.ಪಿ.ನಗರ ನಿವಾಸಿ ಲಕ್ಷ್ಮೀಕಾಂತ ಎಂಬವರು ಒಂದೂವರೆ ತಿಂಗಳ ಹಿಂದೆ ಮೃತಪಟ್ಟಿದ್ದು, ಅವರು ತಮ್ಮ ಸಾವಿಗೂ ಮುನ್ನ ಪ್ರಸಾದ್ ಎಂಬುವರನ್ನು ಎಕ್ಸ್ ಕ್ಯೂಟರ್ ಮಾಡಿ, ಉಯಿಲು ಬರೆದಿದ್ದಾರೆ. ಜೆ.ಪಿ. ನಗರದಲ್ಲಿರುವ 60X40 ಅಳತೆಯ ಮನೆ ಹಾಗೂ ರಾಮಾನುಜ ರಸ್ತೆಯ 9ನೇ ಕ್ರಾಸ್'ನಲ್ಲಿರುವ 60X40 ನಿವೇಶನವನ್ನು ಸತ್ಯಸಾಯಿ ಟ್ರಸ್ಟಿಗೆ ಬರೆದಿದ್ದರು ಎನ್ನಲಾಗಿದೆ.['ಸಿದ್ದುಗೆ ಧೈರ್ಯವಿದ್ದರೆ ಸರ್ಕಾರದ ಸಾಧನೆ ಮುಂದಿಡಲಿ']
ತನ್ನ ಬಳಿ ಸಂಪೂರ್ಣ ದಾಖಲಾತಿ ಇದೆ ಎನ್ನುತ್ತಿದ್ದಾರೆ ಪ್ರಸಾದ್. ಆದರೆ ಭಾನುವಾರ ರಾತ್ರಿ 10 ಗಂಟೆಗೆ ಟ್ರಸ್ಟ್ ಗೆ ಬೀಗ ಹಾಕಿ ತೆರಳಿದ್ದು, ಸೋಮವಾರ ಬೆಳಗ್ಗೆ ಬಂದು ನೋಡಿದಾಗ ಇನ್ನೊಂದು ಬೀಗ ಬಿದ್ದಿರುವುದು ಕಂಡು ಬಂದಿದೆ. ಅದನ್ನು ಭವಾನಿಶಂಕರ್ ಎಂಬವರು ಹಾಕಿದ್ದು, ಈ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಸಂಪೂರ್ಣ ದಾಖಲಾತಿ ತಮ್ಮ ಬಳಿಯೂ ಇದೆ ಎನ್ನುತ್ತಿದ್ದಾರೆ.
ಆದರೆ, ಪ್ರಸಾದ್ ಅಕ್ರಮವಾಗಿ ಬೀಗ ಹಾಕಿದ್ದಾರೆ ಎಂದು ಭವಾನಿಶಂಕರ್ ವಿರುದ್ಧ ಕೆ.ಆರ್.ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ತಾವು ಬರುವವರೆಗೂ ಬೀಗ ತೆರೆಯಬೇಡಿ ಎಂದು ಸೂಚಿಸಿ, ಕಳುಹಿಸಿದ್ದರು. ಆದರೆ ಸ್ಥಳದಲ್ಲಿ ಪ್ರಸಾದ್ ಮತ್ತು ಭವಾನಿಶಂಕರ್ ಅವರ ನಡುವೆ ವಾಕ್ಸಮರ ಏರ್ಪಟ್ಟ ಕಾರಣ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ.[ಮೈಸೂರು: ಪತಿಗೆ ಪರಸ್ತ್ರೀ ವ್ಯಾಮೋಹ, ನೊಂದ ಗೃಹಿಣಿ ಆತ್ಮಹತ್ಯೆ]
ಈ ಸಂದರ್ಭದಲ್ಲಿ ಭವಾನಿಶಂಕರ್ ಅವರು ತಮ್ಮ ಬಳಿಯೂ ದಾಖಲಾತಿ ಇದೆ ಎಂದು ಪೊಲೀಸರಿಗೆ ತೋರಿಸಿದ್ದು, "ಈಗ ನಾವು ಬೀಗ ಹಾಕಿರುತ್ತೇವೆ. ನಿಮ್ಮ ವಿವಾದವನ್ನು ನ್ಯಾಯಾಲಯದಲ್ಲಿಯೇ ಪರಿಹರಿಸಿಕೊಳ್ಳಿ ಅಥವಾ ನಿಮ್ಮಲ್ಲಿಯೇ ಇತ್ಯರ್ಥ ಮಾಡಿಕೊಳ್ಳಿ" ಎಂದು ಪೊಲೀಸರು ಹೇಳಿದ್ದಾರೆ.