ಭಾರತೀಯ ಭಾಷಾ ಸಂಸ್ಥಾನಕ್ಕೆ ಸ್ವಾಯತ್ತತೆ; ಮುಖ್ಯಮಂತ್ರಿಗೆ ಸಾಹಿತಿಗಳ ಪತ್ರ
ಮೈಸೂರು, ಜೂನ್ 01: ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಸ್ಥಾನಮಾನ ದೊರಕಿಸಿಕೊಳ್ಳಲು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವ ಸಾಹಿತಿಗಳು ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
Recommended Video
ಸಾಹಿತಿಗಳಾದ ಎಸ್.ಎಲ್.ಭೈರಪ್ಪ, ಪ್ರೊ. ನಂಜರಾಜೇ ಅರಸ್, ಜಿ.ಎಸ್.ಜಯದೇವ, ದೇವನೂರ ಮಹಾದೇವ, ಪ್ರೊ.ಕೃಷ್ಣಮೂರ್ತಿ ಹನೂರು, ಡಾ.ಬಸವರಾಜ ಕಲ್ಗುಡಿ, ಪ.ಮಲ್ಲೇಶ್, ಡಾ.ಓ.ಎಲ್.ನಾಗಭೂಷಣಸ್ವಾಮಿ, ಡಾ.ಚಂದ್ರಶೇಖರ ನಂಗಲಿ, ಪ್ರೊ.ಎನ್.ಬೋರಲಿಂಗಯ್ಯ, ಡಾ.ಸಬಿತಾ ಬನ್ನಾಡಿ, ಡಾ.ರಾಜಪ್ಪ ದಳವಾಯಿ, ಡಾ.ಕಾಳೇಗೌಡ ನಾಗವಾರ, ಡಾ.ತಾರಿಣಿ ಶುಭದಾಯಿನಿ, ಜಿ.ಪಿ.ಬಸವರಾಜು, ಡಾ.ಅರವಿಂದ ಮಾಲಗತ್ತಿ, ಡಾ.ನಟರಾಜ್ ಬೂದಾಳು, ನಾ.ದಿವಾಕರ, ಡಾ.ವೀರಣ್ಣ ರಾಜೂರ, ವೆಂಕಟೇಶ ಮಾಚಕನೂರು, ಡಾ.ಬಸವರಾಜ್ ಮೈಸೂರು, ಡಾ.ಬಸವರಾಜ ಸಾದರ, ಡಾ.ದೇವರ ಕೊಂಡಾರೆಡ್ಡಿ, ಡಾ.ಕೇಶವ ಶರ್ಮ, ಪ್ರೊ. ಪಂಡಿತಾರಾಧ್ಯಸೇರಿದಂತೆ ಇಪ್ಪತೈದು ಸಾಹಿತಿಗಳು ಒಟ್ಟಾಗಿ ಪತ್ರಬರೆದಿದ್ದಾರೆ. ಅದರ ಸಾರಾಂಶ ಹೀಗಿದೆ...
ಲಾಕ್ಡೌನ್: ಸರ್ಕಾರದಿಂದ ಸಾಹಿತಿ, ಕಲಾವಿದರಿಗೆ ಆರ್ಥಿಕ ನೆರವು
ಕರ್ನಾಟಕದ ಜನರ ಒತ್ತಾಸೆ, ಹೋರಾಟ ಮತ್ತು ಅಂದು ಕೂಡ ಮುಖ್ಯಮಂತ್ರಿಗಳಾಗಿದ್ದ ತಮ್ಮ ನಿರಂತರ ಪ್ರಯತ್ನದಿಂದಾಗಿ 2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿತು. ಈ ಸಂಬಂಧವಾಗಿ ಕನ್ನಡದ ಹಲವಾರು ಹಿರಿಯ ಸಾಹಿತಿಗಳೂ, ಕನ್ನಡಪರ ಹೋರಾಟಗಾರರೂ ದನಿಯೆತ್ತಿದ್ದರು. ಇದರ ಪರಿಣಾಮವಾಗಿ ಇಂದು ಮೈಸೂರಿನಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಪ್ರಾರಂಭಗೊಂಡು ಸುಮಾರು ಹತ್ತು ವರ್ಷಗಳಾಗಿವೆ.
ಶಾಸ್ತ್ರೀಯ ತಮಿಳು ಅತ್ಯುನ್ನತ ಅಧ್ಯಯನ ಕೇಂದ್ರವು ತನಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ ಅಲ್ಪಾವಧಿಯಲ್ಲಿಯೇ ಸ್ವಾಯತ್ತ ಸಂಸ್ಥೆಯಾಗಿ ಮಾನ್ಯತೆ ಪಡೆದು ಇಂದು ನೂರಾರು ತಮಿಳು ಸಂಶೋಧಕರ ಸಿಬ್ಬಂದಿಯೊಂದಿಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಶಾಸ್ತ್ರೀಯ ತೆಲುಗು ಅತ್ಯುನ್ನತ ಅಧ್ಯಯನ ಕೇಂದ್ರವು ಮೈಸೂರಿನಲ್ಲಿ ಆರಂಭವಾದ ವರ್ಷದೊಳಗೆ ಆಂಧ್ರಪ್ರದೇಶ ನೆಲ್ಲೂರಿಗೆ ಸ್ಥಳಾಂತರಗೊಂಡು ಈಗ ಅದಕ್ಕೆ ಹಲವು ಕೋಟಿ ರೂಪಾಯಿಗಳ ವಾರ್ಷಿಕ ಅನುದಾನ ಘೋಷಣೆಯಾಗಿದೆ.
CM ಪರಿಹಾರ ನಿಧಿಗೆ ಭೈರಪ್ಪ, PM ಪರಿಹಾರ ನಿಧಿಗೆ ಕಣವಿ ದೇಣಿಗೆ
ಈಗಾಗಲೇ ವಿಳಂಬವಾಗಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸಿ.ಟಿ.ರವಿ ಅವರು ಪ್ರಯತ್ನಶೀಲರಾಗಿರುವುದು ಅಭಿನಂದನೀಯ. ಆದರೆ ಸಚಿವರ ಪ್ರಯತ್ನಕ್ಕೆ ಭಾರತೀಯ ಭಾಷಾ ಸಂಸ್ಥಾನದ ಪ್ರಭಾರ ನಿರ್ದೇಶಕರಾದ ಪ್ರೊ.ಡಿ.ಜಿ.ರಾವ್ ಅವರು ಸ್ಪಂದಿಸದೆ ಶಾಸ್ತ್ರೀಯ ಕನ್ನಡವು ಸ್ವಾಯತ್ತತೆ ಪಡೆಯುವಷ್ಟು ಬೆಳವಣಿಗೆ ಆಗಿಲ್ಲವೆಂದು ಕೇಂದ್ರಕ್ಕೆ ತಪ್ಪು ಮಾಹಿತಿಯನ್ನು ನೀಡಿರುವುದು ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದೆ.
ಭಾರತೀಯ ಭಾಷಾಜ್ಞಾನವುಳ್ಳ ಯಾರೂ ಕೂಡ ಹೀಗೆ ಬರೆಯಲು ಸಾಧ್ಯವಿಲ್ಲ. ಹೀಗೆ ಬರೆಯುವುದರ ಮೂಲಕ ಡಿ.ಜಿ.ರಾವ್ ಅವರು ಭಾರತೀಯ ಭಾಷಾ ಸಂಸ್ಥಾನಕ್ಕೂ, ಭಾಷಾ ವಿಜ್ಞಾನಕ್ಕೂ ಅವಮಾನ ಮಾಡಿದ್ದಾರೆ. ಮಾತ್ರವಲ್ಲದೆ, ಸ್ವಾಯತ್ತತೆಗೆ ಸಂಬಂಧಿಸಿದಂತೆ ಕೇಂದ್ರದ ಸಂಶೋಧನ ಕಾರ್ಯಗಳ ಪ್ರಗತಿಯನ್ನು ಹಿನ್ನಡೆಗೊಳಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಈಚೆಗೆ ಹಾಲಿ ಸಂಶೋಧನ ಸಿಬ್ಬಂದಿಯನ್ನು ಬದಲಿಸುವ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದಾರೆ ಎಂದು ದೂರಿದ್ದಾರೆ.
ಸಾಹಿತಿಗಳು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಹಿನ್ನೆಡೆಯುಂಟು ಮಾಡುವ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಪ್ರಭಾರಿ ನಿರ್ದೇಶಕರು ಹೊರಡಿಸಿದ ಕಾನೂನುಬಾಹಿರವಾದ ಹೊಸ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆಯಲು ಸಂಬಂಧಪಟ್ಟವರಿಗೆ ಆದೇಶ ನೀಡುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.