ಮೈಸೂರಿಗೆ ನಾಳೆ ಪ್ರಧಾನಿ ಮೋದಿ ಆಗಮನ:ಪೊಲೀಸರಿಂದ ಬಿಗಿ ಭದ್ರತೆ
ಮೈಸೂರು, ಏಪ್ರಿಲ್ 8:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಮಂಗಳವಾರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಭದ್ರತೆಗೆ ಒಂದೂವರೆ ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಧಾನಿ ಅವರು ಚಿತ್ರದುರ್ಗದಿಂದ ವಿಶೇಷ ವಿಮಾನದ ಮೂಲಕ ನಾಳೆ ಮಧ್ಯಾಹ್ನ 3 ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ರಸ್ತೆ ಮಾರ್ಗದಲ್ಲಿ ಮಹಾರಾಜ ಕಾಲೇಜು ಮೈದಾನಕ್ಕೆ ಬರಲಿದ್ದಾರೆ. ಈ ವೇಳೆ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಮಾರ್ಪಾಟು ಮಾಡಲಾಗಿದೆ.
ಪ್ರಧಾನಿಯವರ ವಿಶೇಷ ಭದ್ರತಾ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಡೀ ಮೈದಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. 7 ಮಂದಿ ಎಸ್.ಪಿ ದರ್ಜೆಯ ಅಧಿಕಾರಿಗಳು, 22 ಮಂದಿ ಎಸಿಪಿ, 50ಕ್ಕೂ ಹೆಚ್ಚು ಇನ್ಸ್ಪೆಕ್ಟರ್ ಗಳು ಸೇರಿದಂತೆ 1,500 ಸಿಬ್ಬಂದಿ ಇರಲಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಂಜನಗೂಡಿನಿಂದ ಮೈಸೂರು ನಗರದ ಕಡೆಗೆ ಬರುವ ಎಲ್ಲಾ ವಾಹನಗಳು ನಂಜನಗೂಡು ಕಬಿನಿ ನದಿ ಸೇತುವೆ ಬಳಿ ಡೀವಿಯೇಷನ್ ಪಡೆದು ಬಸವನಪುರ-ಕೆಂಪಸಿದ್ದನಹುಂಡಿ ಮೂಲಕ ಹದಿನಾರು ಗ್ರಾಮ ಸುತ್ತೂರು ಗ್ರಾಮ- ವರುಣ ಮೂಲಕ ತಿ.ನರಸೀಪುರ ಮುಖ್ಯ ರಸ್ತೆಯನ್ನು ಸೇರಿ ಎಡ ತಿರುವು ಪಡೆದು ತಿ.ನರಸಿಪುರ ರಸ್ತೆ ಮುಖಾಂತರ ಮೈಸೂರು ರಸ್ತೆ ಸೇರುವುದು. ನಂಜನಗೂಡು ರಸ್ತೆ ಕಡಕೊಳ ಗ್ರಾಮದಿಂದ ಸಿಂಧುವಳ್ಳಿ - ತಳೂರು- ಉದ್ಬೂರು- ಮೂಲಕ ಮಾನಂದವಾಡಿ ರಸ್ತೆ ಸೇರಿ ಬಲ ತಿರುವು ಪಡೆದು ಮೈಸೂರು ನಗರ ಸೇರಬೇಕು.

ಮೈಸೂರು-ನಂಜನಗೂಡು ಕಡೆಗೆ
ಮೈಸೂರು ನಗರದಿಂದ ನಂಜನಗೂಡು ಕಡೆಗೆ ಹೋಗುವ ಎಲ್ಲಾ ಸಾರ್ವಜನಿಕ ವಾಹನಗಳು ಮೈಸೂರು ನಗರದ ಮಾನಂದವಾಡಿ ರಸ್ತೆ ಮೂಲಕ ಉದ್ಬೂರು ಗ್ರಾಮ - ತಳೂರು ಗ್ರಾಮ - ಸಿಂಧುವಳ್ಳಿ- ಮೂಲಕ ಕಡಕೊಳ ತಲುಪಿ ನಂತರ ನಂಜನಗೂಡು ಕಡೆಗೆ ಮುಂದೆ ಸಾಗಬೇಕು.

ಬೆಂಗಳೂರು-ನಂಜನಗೂಡು ಕಡೆಗೆ
ಬೆಂಗಳೂರು ರಸ್ತೆ ಕಡೆಯಿಂದ ನಂಜನಗೂಡು ಕಡೆಗೆ ಹೋಗುವ ಎಲ್ಲಾ ಸಾರ್ವಜನಿಕ ವಾಹನಗಳು ಬೆಂಗಳೂರು ರಿಂಗ್ ರಸ್ತೆ ಜಂಕ್ಷನ್ ನಲ್ಲಿ (ಕೊಲಂಬಿಯ ಏಷಿಯಾ ಆಸ್ಪತ್ರೆ ಜಂಕ್ಷನ್) ಎಡ ತಿರುವು ಪಡೆದು ರಿಂಗ್ ರಸ್ತೆ ಮೂಲಕ ಬನ್ನೂರು ರಿಂಗ್ ರಸ್ತೆ ಜಂಕ್ಷನ್- ತಿ.ನರಸೀಪುರ ರಸ್ತೆ ರಿಂಗ್ ರಸ್ತೆ ಜಂಕ್ಷನ್-ಎಡತಿರುವು ಪಡೆದು ಮುಂದೆ ಸಾಗಿ ವರುಣ ಗ್ರಾಮದ ಮೂಲಕ ನಂಜನಗೂಡಿಗೆ ಹೋಗಬೇಕು.

ಮೈಸೂರು ಬಸ್ ನಿಲ್ದಾಣದಿಂದ ಹೊರಡುವಾಗ
ಮೈಸೂರು ನಗರ ಬಸ್ ನಿಲ್ದಾಣದಿಂದ ಚಾಮರಾಜ ಜೋಡಿ ರಸ್ತೆ ಮೂಲಕ ಪಶ್ಚಿಮ ಭಾಗದ ಊರುಗಳಿಗೆ ಹೋಗುವ ಎಲ್ಲಾ ಸಾರಿಗೆ ಬಸ್ಸುಗಳನ್ನು ಬಿ.ಎನ್.ರಸ್ತೆ ಆರ್ಚ್ಗೇಟ್-ಇರ್ವಿನ್ ರಸ್ತೆ- ಜೆ.ಕೆ.ಮೈದಾನ ಜಂಕ್ಷನ್-ರೈಲ್ವೆ ನಿಲ್ದಾಣ-ದಾಸಪ್ಪ ವೃತ್ತ-ಬಲ ತಿರುವು-ಕೆ.ಆರ್.ಎಸ್ ರಸ್ತೆ-ವಾಲ್ಮೀಕಿ ರಸ್ತೆ ಮೂಲಕ ಹುಣಸೂರು ರಸ್ತೆ ತಲುಪಿ ಮುಂದೆ ಸಾಗಬೇಕು.

ಹುಣಸೂರು ರಸ್ತೆ ಮೂಲಕ ಹೋಗುವಾಗ
ಹುಣಸೂರು ರಸ್ತೆ ಮೂಲಕ ಹೊರ ಊರುಗಳಿಂದ ಮೈಸೂರು ನಗರಕ್ಕೆ ಬಂದು ಬಸ್ ನಿಲ್ದಾಣಕ್ಕೆ ಹೋಗುವ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಸುಗಳನ್ನು ಹಿನಕಲ್ ರಿಂಗ್ ರಸ್ತೆ ಜಂಕ್ಷನ್ನಲ್ಲಿ ಪ್ಲೈಓವರ್ ಗಿಂತ ಮೊದಲು ರಿಂಗ್ ರಸ್ತೆಯನ್ನು ತಲುಪಿ, ರಿಂಗ್ ರಸ್ತೆಯಲ್ಲಿ ಎಡಕ್ಕೆ ತಿರುವು ಪಡೆದು -ರಿಂಗ್ ರಸ್ತೆಗೆ ಮುಂದುವರೆದು-ಬೆಂಗಳೂರು ರಿಂಗ್ ರಸ್ತೆ ಜಂಕ್ಷನ್ ಬಳಿ ಬಲ ತಿರುವು ಪಡೆದು ಹಳೆ ಮೈಸೂರು ಬೆಂಗಳೂರು ರಸ್ತೆ ಮೂಲಕ ಬಿ.ಎನ್.ರಸ್ತೆ-ಎ.ಟಿ.ಎಸ್ ವೃತ್ತ- ಬಿ.ಎನ್.ರಸ್ತೆ ಮೂಲಕ ಮುಖಾಂತರ ಬಸ್ ನಿಲ್ದಾಣಕ್ಕೆ ಬರಬೇಕು.












Click it and Unblock the Notifications