ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಸಕಲ ಸಿದ್ಧತೆ
ಮೈಸೂರು, ಜೂನ್ 11 : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ಹೆಚ್ಚಿನ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಲಲಿತ ಮಹಲ್ ಹೆಲಿಪ್ಯಾಡ್ನಿಂದ ಉಚಿತ ಸಾರಿಗೆ ವ್ಯವಸ್ಥೆಯೂ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಗಿದೆ.
ಜುಲೈ 4, ಜುಲೈ 11, ಜುಲೈ 18 ಹಾಗೂ ಜುಲೈ 25 ರಂದು ಆಷಾಢ ಶುಕ್ರವಾರಗಳಿದ್ದು ಮೂರನೇ ಶುಕ್ರವಾರ ಚಾಮುಂಡಿ ದೇವಿ ವರ್ಧಂತಿಯೂ ಇರುವುದರಿಂದ ಹೆಚ್ಚಿನ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಹೆಚ್ಚಿನ ಭಕ್ತಾದಿಗಳು ಆಗಮಿಸುವುದರಿಂದ ಸೂಕ್ತವಾದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ಗಣ್ಯ ವ್ಯಕ್ತಿಗಳಿಗೆ ವಾಹನ ಪ್ರವೇಶದ ಪಾಸುಗಳನ್ನು ವಿತರಿಸುವುದು ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. [ಅಂಬಾವಿಲಾಸ ಅರಮನೆ ಚಿನ್ನಲೇಪನದಲ್ಲಿ ಅಕ್ರಮ]
ಆಷಾಢ ಶುಕ್ರವಾರಗಳಂದು ಬೆಳಿಗ್ಗೆ 9.30ರಿಂದ ನಗರ ಬಸ್ ನಿಲ್ದಾಣದಿಂದ ಹೆಚ್ಚಿನ ಬಸ್ಸುಗಳನ್ನು ದೇವಸ್ಥಾನ ಮುಚ್ಚುವವರೆಗೆ ವ್ಯವಸ್ಥೆ ಮಾಡಬೇಕು. ಹೆಲಿಪ್ಯಾಡ್ ಬಳಿಯಿಂದ ಬೆಟ್ಟಕ್ಕೆ 30 ಬಸ್ಗಳ ಸೌಲಭ್ಯ ಒದಗಿಸುವಂತೆ ಕೆಎಸ್ಆರ್ ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಪ್ರಸಾದ ಹಂಚಲು ವ್ಯವಸ್ಥೆ : ಚಾಮುಂಡಿ ಬೆಟ್ಟದಲ್ಲಿ ಭಕ್ತಾದಿಗಳು ಪ್ರಸಾದ ಹಂಚುವುದಕ್ಕೆ ಅನುಕೂಲವಾಗುವಂತೆ ಬೆಟ್ಟದ ಪಾರ್ಕ್ ನಂ.1 ಮತ್ತು 2 ರಲ್ಲಿರುವ ಖಾಲಿ ಸ್ಥಳದಲ್ಲಿ ತಾತ್ಕಾಲಿಕವಾದ ಪೆಂಡಾಲ್ ಹಾಗೂ ಕೌಂಟರ್ ಗಳನ್ನು ನಿರ್ಮಿಸುವುದು ಹಾಗೂ ದೇವರ ದರ್ಶನ ಪಡೆದ ಭಕ್ತಾದಿಗಳು ವಾಪಸ್ ಬಸ್ಸುಗಳಲ್ಲಿ ಹೋಗಲು ಮಹಿಷಾಸುರ ಪ್ರತಿಮೆ ಬಳಿ ಸರತಿಯ ಸಾಲಿನ ತಾತ್ಕಾಲಿಕ ಬ್ಯಾರಿಕೇಡ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಹೆಚ್ಚಿನ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸುವುದರಿಂದ ಮುಂಜಾಗ್ರತೆ ಕ್ರಮಕ್ಕಾಗಿ ಭಕ್ತಾದಿಗಳ ವೈದ್ಯಕೀಯ ಚಿಕಿತ್ಸೆಗಾಗಿ ಬೇಕಾದ ಔಷಧಗಳೊಂದಿಗೆ ಬೆಟ್ಟಕ್ಕೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸುವುದು. ಅಂಬ್ಯುಲೆನ್ಸ್ ವ್ಯವಸ್ಥೆ ಮಾಡುವುದು ಹಾಗೂ ಹೊರಗಿನಿಂದ ಸೇವಾರ್ಥದಾರರು ಬೆಟ್ಟದಲ್ಲಿ ಹಂಚಲು ತರುವ ಪ್ರಸಾದವನ್ನು ಪರಿಶೀಲಿಸಿ ನಂತರ ಹಂಚುವುದಕ್ಕೆ ಅನುಮತಿ ನೀಡಬೇಕು ಎಂದು ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಆಷಾಢ ಶುಕ್ರವಾರದ ಹಿಂದಿನ ದಿನ ಹಾಗೂ ಮಾರನೆಯ ದಿನ ಸ್ವಚ್ಚತೆ ಕೆಲಸ ನಿರ್ವಹಿಸಲು ವ್ಯವಸ್ಥೆ ಮಾಡಬೇಕು. ಆಗಮಿಸುವ ಭಕ್ತರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬೆಟ್ಟದ ದಾರಿಯಲ್ಲಿ ವಾಹನಗಳು ಹಾಗೂ ಭಕ್ತಾದಿಗಳು ಓಡಾಡಲು ತೊಂದರೆಯಾಗಿರುವ ರಸ್ತೆಬದಿಗೆ ಬಂದಿರುವ ಮರಗಿಡಗಳ ಕೊಂಬೆಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಿದರು.
ಅಂಗವಿಕಲರಿಗೆ ಸೌಲಭ್ಯ : ಅಂಗವಿಕಲ ಭಕ್ತಾದಿಗಳ ಅನುಕೂಲಕ್ಕಾಗಿ ಬೆಟ್ಟದ ಬಸ್ ನಿಲ್ದಾಣದಿಂದ ದೇವಸ್ಥಾನದ ಬಳಿಗೆ ಓಡಾಡಲು ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆ ಮಾಡುವಂತೆ ಮೈಸೂರು ಮೃಗಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿಲಾಗಿದೆ.











Click it and Unblock the Notifications